ಗೋ ಸಾಗಾಟ ಎಂದು ಹಣ್ಣು ಹಂಪಲಿನ ಲಾರಿ ಮೇಲೆ ಗೂಂಡಾ ದಾಳಿ

0
269

ಸನ್ಮಾರ್ಗ ವಾರ್ತೆ

ಗೋಸಾಗಾಟವೆಂದು ಆರೋಪಿಸಿ ಲಿಂಬೆಹಣ್ಣು ಸಾಗಿಸುತ್ತಿದ್ದ ಲಾರಿಯ ಮೇಲೆ ರಾಜಸ್ಥಾನದ ಗೋರಕ್ಷಾ ಗೂಂಡಾಗಳು ದಾಳಿ ನಡೆಸಿದ್ದಾರೆ.

ಸೋನು ಬನ್ಸಿ ರಾಮ್ ಮತ್ತು ಸುಂದರ್ ಸಿಂಗ್ ಎಂಬವರ ಮೇಲೆ ಗೂಂಡಾಗಳು ಯದ್ವತದ್ವ ದಾಳಿ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿದೆ.

ಮಳೆಯ ಕಾರಣ ಹೈವೇಯಲ್ಲಿ ಲಾರಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ 20 ರಷ್ಟು ಗೂಂಡಾಗಳು ಲಾರಿಯನ್ನು ಸುತ್ತುವರಿದಿದ್ದಾರೆ.

ಜನರು ಸೇರಿದೊಡನೆ ಇವರು ದರೋಡೆ ಮಾಡಲು ಬಂದಿದ್ದಾರೆ ಎಂದು ಭಾವಿಸಿದ ಸುಂದರ ಸಿಂಗ್ ಮತ್ತು ಸೋನು ಬನ್ಸಿ ರಾಮ್ ಅವರು ಲಾರಿಯನ್ನು ಚಲಾಯಿಸಿದ್ದಾರೆ. ಆದರೆ ಹತ್ತಿರದ ಟೋಲ್ ಗೇಟ್ ಗೆ ತಲುಪಿದಾಗ ಜನರು ಅಲ್ಲಿಗೆ ಬಂದು ಮನಬಂದಂತೆ ಥಳಿಸಿದ್ದಾರೆ. ಆ ಬಳಿಕ ಅವರು ಲಾರಿ ಹತ್ತಿ ಪರಿಶೀಲಿಸಿದ್ದಾರೆ. ಆಗ ಲಾರಿಯಲ್ಲಿ ಲಿಂಬೆ ಹಣ್ಣು ಇದೆ ಎಂದು ಗೊತ್ತಾದ ಬಳಿಕ ಅವರು ಸ್ಥಳದಿಂದ ಕಾಲ್ ಕಿತ್ತಿದ್ದಾರೆ ಎಂದು ಇವರಿಬ್ಬರೂ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಎಚ್ಚೆತ್ತಿದ್ದಾರೆ. ಗಾಯಗೊಂಡ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.