ಗುಜರಾತ್ ನಲ್ಲಿ ಮತ್ತೆ ಗುಂಪು ಥಳಿತ: ಶಹಬ್ಬಾಸ್ ಖಾನ್ ಸಾವು, ಇಮ್ರಾನ್ ಗಂಭೀರ

0
75

ಸನ್ಮಾರ್ಗ ವಾರ್ತೆ

ಗುಜರಾತಿನಲ್ಲಿ ಮತ್ತೊಂದು ಗುಂಪು ಥಳಿತ ನಡೆದಿದೆ. ಶಹಬ್ಬಾಸ್ ಖಾನ್ ಸಲೀಂ ಖಾನ್ ಪಥಾನ್ ಎಂಬ 21 ವರ್ಷದ ಯುವಕನನ್ನು ಜನರು ಥಳಿಸಿ ಹತ್ಯೆಗೈದಿದ್ದಾರೆ.

ಆತನ ಜೊತೆಗಿದ್ದ 20 ವರ್ಷದ ಇಮ್ರಾನ್ ಎಂಬ ಯುವಕನನ್ನೂ ಥಳಿಸಿದ್ದಾರೆ. ಆತ ಗಂಭೀರ ಗಾಯಗೊಂಡಿದ್ದಾರೆ. ಕಳ್ಳತನಕ್ಕೆ ಸಂಚು ನಡೆಸುತ್ತಿದ್ದರು ಎಂದು ಆರೋಪಿಸಿ ಈ ಥಳಿತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಇಬ್ಬರನ್ನು ಜನರು ಕಳ್ಳರೆಂದು ಭಾವಿಸಿದ್ದರು ಮತ್ತು ಸುತ್ತುವರಿದು ಪ್ರಶ್ನಿಸಿದಾಗ ಇವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಇದರಿಂದ ಕೆರಳಿದ ಜನರು ಇಬ್ಬರನ್ನು ಚೆನ್ನಾಗಿ ಥಳಿಸಿದರು. ಇವರಲ್ಲಿ ಸಲೀಂ ಖಾನ್ ಮೃತಪಟ್ಟರೆ ಇಮ್ರಾನ್ ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಡೋದರರದ ಪೊಲೀಸರು ಅಪರಿಚಿತರ ವಿರುದ್ಧ ಹತ್ಯೆ ಪ್ರಕರಣವನ್ನು ದಾಖಲಿಸಿದ್ದಾರೆ. ನಾವು ಸಿಸಿಟಿವಿ ಫೂಟೇಜನ್ನು ಪರಿಶೀಲಿಸುತ್ತಿದ್ದೇವೆ. ಜನರು ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧವಾಗಿದೆ ಎಂದು ಪೊಲೀಸಧಿಕಾರಿ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಮೂವರು ಪೊಲೀಸರಿಗೂ ಗಾಯಗಳಾಗಿವೆ ಎಂದವರು ತಿಳಿಸಿದ್ದಾರೆ.

ಈ ನಡುವೆ ಗುಜರಾತಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿ ಮತ್ತು ಆಕ್ರಮಣಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿದೆ.