ವಿವಾದಾತ್ಮಕ ಹೇಳಿಕೆ: ಕ್ಷಮೆಯಾಚಿಸಿದ ಆಝಂಖಾನ್; ತಿರಸ್ಕರಿಸಿದ ರಮಾದೇವಿ

0
377

ಹೊಸದಿಲ್ಲಿ, ಜು. 29: ಬಿಜೆಪಿ ಸಂಸದೆ ಉಪಸಭಾಧ್ಯಕ್ಷೆ ರಮಾದೇವಿ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದ ಸಮಾಜವಾದಿ ಪಾರ್ಟಿ ಸಂಸದ ಆಝಂಖಾನ್ ಲೋಕಸಭೆಯಲ್ಲಿ ಕ್ಷಮೆ ಯಾಚಿಸಿದ್ದಾರೆ. ಆದರೆ ಅವರ ಕ್ಷಮೆಯನ್ನು ರಮಾದೇವಿ ತಿರಸ್ಕರಿಸಿದರು. ನನ್ನ ಹೇಳಿಕೆ ತಪ್ಪಾದದ್ದೆಂದು ಅನಿಸುವುದಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಲೋಕಸಭೆಯಲ್ಲಿ ಆಝಂ ಖಾನ್ ಹೇಳಿದರು.

ಆದರೆ ಆಝಂ ಖಾನ್‍ರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ರಮಾದೇವಿ ಹೇಳಿದರು. ಖಾನ್ ಕಾಯಂ ಅಪರಾಧಿ. ಪಾರ್ಲಿಮೆಂಟಿನ ಹೊರಗೆ ಕೂಡ ಅವರು ಇಂತಹದೇ ಮಾತುಗಳನ್ನು ಮಹಿಳೆಯರ ವಿರುದ್ಧ ಹೇಳುತ್ತಾರೆ. ಇಂತಹ ಮಾತುಗಳನ್ನು ಕೇಳಲು ನಾನು ಪಾರ್ಲಿಮೆಂಟಿಗೆ ಆಯ್ಕೆಯಾಗಿ ಬಂದಿಲ್ಲ ಎಂದು ರಮಾದೇವಿ ಹೇಳಿದರು. ಸದನದಲ್ಲಿ ಎಲ್ಲ ಸದಸ್ಯರು ಬೆಂಬಲ ನೀಡಿದರೆ ಮಾತ್ರ ಸದನವನ್ನು ಮುನ್ನಡೆಸಲು ಸಾಧ್ಯವಿದೆ. ಯಾರೂ ಸದನ ಅಂತಸ್ತಿಗೆ ಕಳಂಕ ಬರುವಂತೆ ನಡೆದುಕೊಳ್ಳಬಾರದು ಎಂದು ಸಭಾಧ್ಯಕ್ಷ ಓಂ ಬಿರ್ಲಾ ಹೇಳಿದರು. ಆಝಂ ಖಾನ್‍ರ ಕ್ಷಮೆಯಾಚನೆಗೆ ಸಭಾಧ್ಯಕ್ಷರು ಅಂಗೀಕಾರ ನೀಡಿದರು.