ದನದ ಹಟ್ಟಿಯನ್ನು ಶುಚಿಗೊಳಿಸಿ ಅಲ್ಲೇ ಮಲಗಿ, ಕ್ಯಾನ್ಸರ್ ಗುಣವಾಗುತ್ತೆ: ಬಿಜೆಪಿ ಶಾಸಕ

0
75

ಸನ್ಮಾರ್ಗ ವಾರ್ತೆ

ದನಗಳ ಹಟ್ಟಿಯನ್ನು ಶುಚಿಗೊಳಿಸುವುದು ಮತ್ತು ಅಲ್ಲಿ ಮಲಗುವುದರಿಂದ ಕ್ಯಾನ್ಸರ್ ಗುಣವಾಗಬಲ್ಲದು ಎಂದು ಉತ್ತರ ಪ್ರದೇಶದ ಬಿಜೆಪಿ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿದ್ದಾರೆ. ದನವನ್ನು ಪ್ರೀತಿಸುವುದು ಮತ್ತು ಅದರ ಬೆನ್ನನ್ನು ಸವರುವುದರಿಂದ ರಕ್ತದೊತ್ತಡ ಕಡಿಮೆಯಾಗಲಿದೆ ಎಂದು ಕೂಡ ಅವರು ಹೇಳಿದ್ದಾರೆ.

ವಿವಾಹ ವಾರ್ಷಿಕ ಸಡಗರವನ್ನು ಮತ್ತು ಮಕ್ಕಳ ಹುಟ್ಟು ಹಬ್ಬದ ಖುಷಿಯನ್ನು ಗೋ ಶಾಲೆಯಲ್ಲಿ ಆಚರಿಸಬೇಕು ಎಂದು ಕೂಡ ಅವರು ವಿನಂತಿಸಿದ್ದಾರೆ.

ಯಾರಿಗೆ ರಕ್ತದೊತ್ತಡದ ಕಾಯಿಲೆ ಇದೆಯೋ ಅವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಸುವಿನ ಬೆನ್ನನ್ನು ತಡವಿ ಪ್ರೀತಿಸಬೇಕು. ಒಬ್ಬರು ರಕ್ತದೊತ್ತಡವನ್ನು ಕಡಿಮೆ ಮಾಡುವುದಕ್ಕಾಗಿ 20 ಮಿಲಿ ಗ್ರಾಂ ಡೋಸ್ ನ ಔಷಧ ಪಡಕೊಳ್ಳುತ್ತಾರೆ ಎಂದಾದರೆ 10 ದಿನಗಳಲ್ಲಿ ಅದು ಹತ್ತು ಮಿಲಿ ಗ್ರಾಂ ಆಗಿ ಕಡಿಮೆ ಅಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ನೀವು ಸೆಗಣಿ ಹೊತ್ತಿಸಿದರೆ ಆ ಬಳಿಕ ಅಲ್ಲಿ ಸೊಳ್ಳೆ ಇರಲಾರದು. ಎಲ್ಲಾ ಸಮಸ್ಯೆಗಳಿಗೂ ಗೋವು ಸಂಬಂಧಿ ಉತ್ಪನ್ನಗಳಲ್ಲಿ ಪರಿಹಾರ ಇದೆ ಎಂದವರು ಹೇಳಿದ್ದಾರೆ.

ಈದ್ ನ ದಿನಗಳಲ್ಲಿ ಮುಸ್ಲಿಮರು ಹಟ್ಟಿಗೆ ಭೇಟಿ ನೀಡಬೇಕು. ಈದ್ ದಿನಗಳಲ್ಲಿ ಮಾಡುವ ಪಾಯಸವು ಹಸುವಿನ ಹಾಲಿನಿಂದ ಆಗಿರುತ್ತದೆ ಎಂದವರು ಹೇಳಿದ್ದಾರೆ. ಗೋಮೂತ್ರ ಮತ್ತು ಗೋವಿನ ಇನ್ನಿತರ ಉತ್ಪನ್ನಗಳನ್ನು ಸೇವಿಸಿದ ಕಾರಣ ತನ್ನ ಸ್ತನ ಕ್ಯಾನ್ಸರ್ ಗುಣವಾಗಿದೆ ಎಂದು ಮಧ್ಯಪ್ರದೇಶದ ಬಿಜೆಪಿ ಎಂಪಿ ಮತ್ತು ಮಾಲೆಗಾಂವ್ ಬಾಂಬು ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾಸಿಂಗ್ ಠಾಕೂರ್ ಈ ಹಿಂದೆ ಹೇಳಿದ್ದರು.