ಸನ್ಮಾರ್ಗ ವಾರ್ತೆ
ಮಂಗಳೂರು: ವಿದ್ಯುತ್ ತಂತಿ ಸ್ಪರ್ಶಗೊಂಡು ರಿಕ್ಷಾ ಚಾಲಕರಿಬ್ಬರು ಮೃತಪಟ್ಟ ಘಟನೆ ನಗರದ ರೊಸಾರಿಯೊ ಶಾಲೆಯ ಬಳಿ ನಡೆದಿದೆ.
ಗುರುವಾರ ಬೆಳಗ್ಗೆ ತಮ್ಮ ರಿಕ್ಷಾವನ್ನು ತೊಳೆಯಲೆಂದು ಹೊರಗೆ ಬಂದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರು. ಒಬ್ಬನಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ಮತ್ತೋರ್ವನು ಗೋಣಿ ಚೀಲ ಹಿಡಿದು ರಕ್ಷಣೆಗೆ ಮುಂದಾಗಿದ್ದು, ಆತನೂ ವಿದ್ಯುತ್ ಅಘಾತಕ್ಕೆ ಒಳಗಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎರಡೂ ಮೃತದೇಹಗಳನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಜು ಮತ್ತು ದೇವರಾಜು ಮೃತಪಟ್ಟ ರಿಕ್ಷಾ ಚಾಲಕರು ಎಂದು ತಿಳಿದು ಬಂದಿದೆ . ಒಬ್ಬರು ಪುತ್ತೂರು ಹಾಗೂ ಇನ್ನೊಬ್ಬರು ಸಕಲೇಶಪುರದವರು ಎಂದು ತಿಳಿದು ಬಂದಿದೆ. ಇಬ್ಬರೂ ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿಯ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.