2014ರ ಮೊದಲಿನ ಚಿತ್ರಗಳು ಹೇಳುತ್ತಿರುವ ಕತೆ

0
506

ಸನ್ಮಾರ್ಗ ಸಂಪಾದಕೀಯ

2020 ಮೇ ತಿಂಗಳಿನಲ್ಲಿ ಈ ದೇಶದಲ್ಲಿ ಅಡುಗೆ ಅನಿಲದ ಬೆಲೆ 581 ರೂಪಾಯಿಯಿತ್ತು. ಈಗ 925 ರೂಪಾಯಿ. 2014ರಲ್ಲಿ ಅಡುಗೆ ಅನಿಲದ ಬೆಲೆ 414 ರೂಪಾಯಿಯಷ್ಟೇ ಇತ್ತು. ಆಗ ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಇದೇ ಅವಧಿಯಲ್ಲಿ ಪೆಟ್ರೋಲ್ ಬೆಲೆ 71 ರೂಪಾಯಿ ಇತ್ತು. ಇವತ್ತು 106 ರೂಪಾಯಿಯನ್ನೂ ದಾಟಿ ಹೋಗಿದೆ. 2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲೊಂದಕ್ಕೆ 109 ಡಾಲರ್‌ಗಳಿದ್ದಾಗಲೂ ಪ್ರಧಾನಿ ಮನ್‌ಮೋಹನ್ ಸಿಂಗ್‌ರು ಅದರ ಹೊರೆಯನ್ನು ಭಾರತೀಯರ ಮೇಲೆ ಹೊರಿಸದೆಯೇ 71 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ದಕ್ಕುವಂತೆ ಮಾಡಿದ್ದರು. ಇವತ್ತು ಅಂತಾರಾಷ್ಟ್ರೀ ಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬರೇ 78 ಡಾಲರ್. ಆದರೆ, ಅದರ ಲಾಭವನ್ನು ಭಾರತೀಯರಿಗೆ ವರ್ಗಾಯಿಸುವ ಬದಲು ಪೆಟ್ರೋಲ್ ಬೆಲೆಯನ್ನು ಕೇಂದ್ರ ಸರಕಾರ 100 ರೂಪಾಯಿಯ ಗಡಿ ದಾಟಿಸಿ ಖಜಾನೆ ತುಂಬಿಸುತ್ತಿದೆ. ಪ್ರಶ್ನಿಸಿದರೆ ಎಲ್ಲ ಆರೋಪವನ್ನೂ ಮನ್‌ಮೋಹನ್ ಸಿಂಗ್ ಸರಕಾರದ ಮೇಲೆ ಹೊರಿಸಿ ತಾನು ಶುದ್ಧ ಹಸ್ತ ಎಂದು ಬಿಂಬಿಸಿಕೊಳ್ಳುತ್ತಿದೆ. ಮನ್‌ಮೋಹನ್ ಸಿಂಗ್ ಸರ್ಕಾರ ಆಯಿಲ್ ಬಾಂಡ್‌ನ ಹೆಸರಲ್ಲಿ ಮಾಡಿರುವ ಸಾಲವನ್ನು ಸಂದಾಯಿಸಲು ಈ ಬೆಲೆ ಹೆಚ್ಚಳ ಮಾಡುತ್ತಿದ್ದೇವೆ ಎಂಬ ಸಬೂಬು ಕೇಂದ್ರ ಸರಕಾರದ್ದು. ಆದರೆ,

ಅದೂ ನಿಜವಲ್ಲ. ಆಯಿಲ್ ಬಾಂಡ್‌ನ ಹೆಸರಲ್ಲಿ ಇದ್ದ ಸಾಲ ಹೆಚ್ಚೆಂದರೆ 1.34 ಲಕ್ಷ ಕೋಟಿ ರೂಪಾಯಿ. ಅಲ್ಲದೇ, ಈ ಆಯಿಲ್ ಬಾಂಡ್ ಪದ್ಧತಿಯನ್ನು ಆರಂಭಿಸಿದ್ದೂ ಮನ್‌ಮೋಹನ್ ಸಿಂಗ್ ಸರಕಾರವಲ್ಲ, ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಎಂಬ ವಾದವೂ ಇದೆ. ಅದೇನಿದ್ದರೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದಿಂದ ಕಳೆದ 7 ವರ್ಷಗಳಲ್ಲಿ ಸುಂಕದ ರೂಪದಲ್ಲಿ 25 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರ ಈಗಾಗಲೇ ಸಂಗ್ರಹಿಸಿದೆ. ಆದರೆ ಇಷ್ಟು ಅಗಾಧ ಮೊತ್ತ ಸಂಗ್ರಹಿಸಿದ್ದರೂ ಬರೇ 35 ಸಾವಿರ ಕೋಟಿ ರೂಪಾಯಿಯನ್ನು ಮಾತ್ರ ಆಯಿಲ್ ಬಾಂಡ್ ಸಾಲದ ಮರುಪಾವತಿ ಮಾಡಿದೆ. ಹಾಗಿದ್ದರೆ ಇಷ್ಟು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿರುವ ತೆರಿಗೆ ಹಣ ಏನಾದುವು? ಆಯಿಲ್ ಬಾಂಡ್‌ನ ಸಾಲದ 25 ಪಟ್ಟು ಅಧಿಕ ಹಣವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹೊರತಾಗಿಯೂ ತೈಲ ಬೆಲೆಯನ್ನು ಇಳಿಸದಿರುವುದು ಏಕೆ?

2020 ಮೇ ತಿಂಗಳಿನಿಂದ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ಯಾವ ಸೂಚನೆಯನ್ನೂ ನೀಡದೆಯೇ ದಿಢೀರಿರ್ ಸ್ಥಗಿತಗೊಳಿಸಿದೆ. ದೇಶದಲ್ಲಿ ಸುಮಾರು 29 ಕೋಟಿ ಅಡುಗೆ ಅನಿಲದ ಗ್ರಾಹಕರಿದ್ದಾರೆ. 2016ರಲ್ಲಿ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿತು. ಅದರ ಮುಖ್ಯ ಗುರಿ ಇದ್ದುದು ತೆರೆದ ಒಲೆಯ ಮೂಲಕ ಅಡುಗೆ ಮಾಡುವ ಸಾಂಪ್ರದಾಯಿಕ ವಿಧಾನಕ್ಕೆ ಇತಿಶ್ರೀ ಹಾಡುವುದು. ಗ್ರಾಮೀಣ ಪ್ರದೇಶದ ಮಂದಿ ಅಡುಗೆ ಅನಿಲಕ್ಕಿಂತ ಉರುವಲು ಮತ್ತು ಕಟ್ಟಿಗೆಗಳನ್ನು ಉರಿಸಿಯೇ ಅಡುಗೆ ಮಾಡುವುದರಿಂದ ಅದರ ಹೊಗೆಯು ಅವರ ಹೃದಯ, ಶ್ವಾಸಕೋಶಗಳ ಮೇಲೆ ಅಡ್ಡಪರಿಣಾಮವನ್ನು ಬೀರುತ್ತಿದೆ, ಇದರಿಂದಾಗಿಯೇ ಭಾರತದಲ್ಲಿ ಪ್ರತಿವರ್ಷ 5 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನೂ ಆ ಸಂದರ್ಭದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಆದ್ದರಿಂದ,

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಕಾರ 8 ಕೋಟಿ ಗ್ರಾಮೀಣ ಭಾರತದ ಬಡ ಜನರಿಗೆ ಅಡುಗೆ ಅನಿಲ ತಲುಪಿಸುವುದನ್ನು ಕೇಂದ್ರ ಸರಕಾರ ಗುರಿಯಾಗಿ ಇಟ್ಟುಕೊಂಡಿತ್ತು. ಆದರೆ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಕಂಡ ಈ ಯೋಜನೆಯು ಬರಬರುತ್ತಾ ಜನರ ಆಕರ್ಷಣೆಯನ್ನು ಕಳಕೊಂಡಿದೆ. ಈ ಯೋಜನೆಯನ್ವಯ ಸಿಲಿಂಡರ್ ಪಡೆದವರು ಮರು ಭರ್ತಿ ಮಾಡುವ ಪ್ರಕ್ರಿಯೆಯನ್ನೇ ನಿಲ್ಲಿಸುತ್ತಾ ಬಂದಿದ್ದಾರೆ ಮತ್ತು ಉರುವಲು ಆಧಾರಿತ ಅಡುಗೆಗೆ ಮರಳಿದ್ದಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅನ್ವಯ ಸಿಲಿಂಡರ್ ಪಡೆದ ಒಟ್ಟು 3.18 ಕೋಟಿ ಗ್ರಾಹಕರ ಪೈಕಿ ಶೇ. 17.4ರಷ್ಟು ಮಂದಿ ಒಮ್ಮೆಯೂ ಮರು ಬುಕಿಂಗ್ ಮಾಡಿಲ್ಲ. ಅಲ್ಲದೇ, ಇಡೀ ಒಂದು ವರ್ಷದಲ್ಲಿ ಶೇ. 34ರಷ್ಟು ಮಂದಿ ಬರೇ 1ರಿಂದ 3 ಸಿಲಿಂಡರ್‌ನಷ್ಟು ಮಾತ್ರ ಮರು ಬುಕಿಂಗ್ ಮಾಡಿದ್ದಾರೆ. ಅಂದರೆ ವರ್ಷವೊಂದರಲ್ಲಿ ಅತೀ ಹೆಚ್ಚೆಂದರೆ 3 ಸಿಲಿಂಡರ್‌ಗೆ ಬುಕಿಂಗ್ ಮಾಡಿದ್ದಾರೆ. ಇದರರ್ಥ ಅವರು ಉರುವಲು ಆಧಾರಿತ ಅಡುಗೆಯನ್ನೇ ನೆಚ್ಚಿಕೊಂಡಿದ್ದಾರೆ ಎಂದೇ ಆಗಿದೆ. ಇದಷ್ಟೇ ಅಲ್ಲ,

2014ರ ಚುನಾವಣಾ ಭಾಷಣಗಳ ವೇಳೆ ನರೇಂದ್ರ ಮೋದಿ ದೊಡ್ಡದೊಂದು ನಿರೀಕ್ಷೆ ಹುಟ್ಟಿಸಿ ದ್ದರು. ಅದರಲ್ಲಿ ವರ್ಷಂಪ್ರತಿ 2 ಕೋಟಿ ಉದ್ಯೋಗ ಸೃಷ್ಟಿ ಒಂದಾದರೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಮರಳಿ ತಂದು ಪ್ರತಿ ಭಾರತೀಯನ ಖಾತೆಗೆ 15 ಲಕ್ಷ ತುಂಬುವುದೂ ಸೇರಿತ್ತು. ಇದಾಗಿ 7 ವರ್ಷಗಳು ಸಂದಿವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಬಿಡಿ, ಇರುವ ಉದ್ಯೋಗಗಳೇ ಇವತ್ತು ನಷ್ಟ ಹೊಂದುತ್ತಿವೆ. ಇತ್ತೀಚಿನ ಬೆಳವಣಿಗೆ ಏನೆಂದರೆ, ಜನಪ್ರಿಯ ಕಾರು ತಯಾರಿಕಾ ಕಂಪೆನಿಯಾದ ಫೋರ್ಡ್, ಭಾರತದ ತನ್ನ ಉತ್ಪಾದನಾ ಘಟಕವನ್ನು ಮುಚ್ಚುವುದಾಗಿ ಘೋಷಿಸಿದೆ. ಇದರಿಂದಾಗಿ ಸುಮಾರು 4 ಸಾವಿರ ಮಂದಿ ನೇರ ಉದ್ಯೋಗ ಕಳಕೊಳ್ಳಲಿದ್ದಾರೆ. ಕೊರೋನಾ ಪೂರ್ವದಲ್ಲಿ ಮಾಡಲಾದ ನೋಟ್‌ಬ್ಯಾನ್, ಜಿಎಸ್‌ಟಿಗಳು ಮತ್ತು ಹಾಗೆಯೇ, ಕೊರೋನಾ ಕಾಲದ ಸಂಕಷ್ಟಗಳೂ ಸೇರಿಕೊಂಡು ಲಕ್ಷಾಂತರ ಉದ್ದಿಮೆಗಳು ಬಾಗಿಲು ಮುಚ್ಚಿವೆ. ಈ ಮೂಲಕ ಅಸಂಖ್ಯ ಮಂದಿ ನಿರುದ್ಯೋಗಿಗಳಾಗಿದ್ದಾರೆ. 2014ರಲ್ಲಿ ರೈಲ್ವೆಯಲ್ಲಿ ಮಾತ್ರ ಸುಮಾರು 14 ಲಕ್ಷ ಉದ್ಯೋಗಿಗಳಿದ್ದರು. ಆದರೆ, ಈಗ ಈ ಉದ್ಯೋಗಿಗಳ ಸಂಖ್ಯೆಯು ಸುಮಾರು 12.53 ಲಕ್ಷಕ್ಕೆ ಇಳಿಕೆಯಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ 7 ವರ್ಷಗಳ ಹಿಂದೆ 4 ಲಕ್ಷ ಇದ್ದ ಉದ್ಯೋಗಿಗಳ ಪೈಕಿ ಈಗ 3.66 ಲಕ್ಷ ಮಂದಿಯಷ್ಟೇ ಇದ್ದಾರೆ. ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಎಂಬ ಭರವಸೆಯಂತೆ ಕೇಂದ್ರ ಸರಕಾರವು ಈ ಕಳೆದ 7 ವರ್ಷಗಳಲ್ಲಿ 14 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡಬೇಕಿತ್ತು. ಆದರೆ, ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 36 ಲಕ್ಷ ಹುದ್ದೆಗಳು ಖಾಲಿ ಇವೆ ಎಂಬುದು ಈಗಿನ ಅಂಕಿಅಂಶ. ಇನ್ನು ಸ್ವಿಸ್ ಬ್ಯಾಂಕ್‌ನಿಂದ ಭಾರತಕ್ಕೆ ಕಪ್ಪು ಹಣವನ್ನು ತರುವುದು ಬಿಡಿ, ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಈ ಸರಕಾರದ ಕಣ್ಣ ಮುಂದೆಯೇ ವಿದೇಶಕ್ಕೆ ತೆರಳಿದವರನ್ನೂ ಮರಳಿ ಇಲ್ಲಿಗೆ ಕರೆತರಲು ಸಾಧ್ಯವಾಗಿಲ್ಲ. ದಿನಬಳಕೆಯ ವಸ್ತುಗಳ ಬೆಲೆ ಬಡಜನರ ಕೈಗೆ ಎಟುಕದಷ್ಟು ಎತ್ತರಕ್ಕೆ ಹೋಗಿದೆ. 7 ವರ್ಷಗಳ ಹಿಂದೆ ಇದೇ ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಬೆಲೆ ಏರಿಕೆಯನ್ನು ಪ್ರಶ್ನಿಸಿ ಮಾಡಿರುವ ಪ್ರತಿಭಟನೆಗಳಿಗೆ ಲೆಕ್ಕ ಮಿತಿಯಿಲ್ಲ. ಖಾಲಿ ಸಿಲಿಂಡರನ್ನು ರಸ್ತೆಯಲ್ಲಿಟ್ಟು, ನಿತ್ಯ ಬಳಕೆಯ ವಸ್ತುಗಳ ಹಾರವನ್ನು ತಯಾರಿಸಿ, ಕೊರಳಿಗೆ ತೂಗು ಹಾಕಿ ಪ್ರತಿಭಟಿಸಿದ ಚಿತ್ರಗಳೆಲ್ಲ ಗೂಗಲ್‌ನಲ್ಲಿ ಹುಡುಕಾಡಿದರೆ ರಾಶಿಗಟ್ಟಲೆ ಸಿಗುತ್ತಿವೆ. ಇವತ್ತು ಅದೇ ನಾಯಕರು ಬೆಲೆ ಏರಿಕೆಯನ್ನು ಸಮರ್ಥಿಸುತ್ತಾ ತಿರುಗಾಡುತ್ತಿದ್ದಾರೆ. ದುರಂತ ಏ ನೆಂದರೆ,

2014ರಲ್ಲಿ ಯಾವುದನ್ನು ಜನದ್ರೋಹಿಯೆಂದು ಇದೇ ನಾಯಕರು ಹೇಳಿದ್ದರೋ ಅದನ್ನೇ ಈ 2021 ರಲ್ಲಿ ಅನಿವಾರ್ಯವೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವತ್ತು ಈ ದೇಶ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ವಿಧಿಸುತ್ತಿರುವ ದೇಶವಾಗಿ ಮಾರ್ಪಟ್ಟಿದೆ. 2014ರಲ್ಲಿ ಅತೀವ ನಿರೀಕ್ಷೆಯನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಸರಕಾರವು ಕಳೆದ 7 ವರ್ಷಗಳಲ್ಲಿ ಆ ನಿರೀಕ್ಷೆಗೆ ನ್ಯಾಯ ನೀಡುವಲ್ಲಿ ಸಂ ಪೂರ್ಣ ವಿಫಲವಾಗಿದೆ. ಸರಕಾರವನ್ನು ಈವರೆಗೆ ಉಳಿಸಿರುವುದು ಹಿಂದೂ-ಮುಸ್ಲಿಮ್, ಮಂದಿರ-ಮಸೀದಿ ಸುತ್ತ ಹೆಣೆದಿರುವ ಧ್ರುವೀಕರಣ ರಾಜಕಾರಣವೇ ಹೊರತು ಅಭಿವೃದ್ಧಿ ರಾಜಕಾರಣವಲ್ಲ. ಧ್ರುವೀಕರಣ ರಾಜ ಕೀಯವು ಉನ್ಮಾದ ಆಧಾರಿತವಾದುದು. ಅದು ಹೊಟ್ಟೆ ತುಂಬಿಸಲ್ಲ. ಅದು ಹೊಟ್ಟೆ ತುಂಬಿದವರಂತೆ ನಟಿಸುವವರನ್ನಷ್ಟೇ ತಯಾರಿಸಬಲ್ಲುದು. ಈ ನಟನೆಗೂ ದೀರ್ಘಾಯುಷ್ಯವಿಲ್ಲ.