ಕುಂಭಮೇಳದಲ್ಲಿ ಸನಾತನಿಗಳಿಗೆ ಮಾತ್ರ ಆಹಾರ ಮಳಿಗೆಗೆ ಅವಕಾಶ: ಅಖಿಲ ಭಾರತೀಯ ಅಖಾಡ ಪರಿಷತ್ ಆಗ್ರಹ

0
51

ಸನ್ಮಾರ್ಗ ವಾರ್ತೆ

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಸನಾತನ ಆಹಾರ ಮಳಿಗೆಗಳಿಗೆ ಮಾತ್ರವೇ ಅವಕಾಶ ನೀಡಬೇಕು ಎಂದು ಹಿಂದೂ ಸನ್ಯಾಸಿ ಸಂಘಟನೆಗಳಲ್ಲಿ ಒಂದಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್ ಆಗ್ರಹಿಸಿದೆ.

ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಕುಂಭಮೇಳದ ಪರಿಶುದ್ಧತೆಯನ್ನು ಸಂರಕ್ಷಿಸುವುದರ ಭಾಗವಾಗಿ ಹೀಗೆ ಮಾಡಬೇಕು ಎಂದು ಅಖಾಡ ಆಗ್ರಹಿಸಿದೆ.

ಹಾಗೆಯೇ ಈ ಕುಂಭ ಮೇಳಕ್ಕೆ ಸಂಬಂಧಿಸಿ ಉರ್ದು ಪದಗಳನ್ನು ತೆರವುಗೊಳಿಸಬೇಕು ಎಂದು ಕೂಡ ಅದು ಒತ್ತಾಯಿಸಿದೆ.

ಸನಾತನ ಅಲ್ಲದವರಿಗೆ ಆಹಾರದ ಮಳಿಗೆಗಳನ್ನು ಸ್ಥಾಪಿಸಲು ಅವಕಾಶ ನೀಡಬಾರದು. ಅವರನ್ನು ನಿರ್ಬಂಧಿಸುವ ಬಗ್ಗೆ ನಿಯಮ ರೂಪಿಸಬೇಕು. ದೀಪಾವಳಿಯ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಈ ಬಗ್ಗೆ ಪ್ರಸ್ತಾಪನೆಯನ್ನು ನೀಡಲಾಗುವುದು ಎಂದು ಅಖಿಲ ಭಾರತೀಯ ಅಖಾಡ ಪರಿಷತ್ ನ ಮುಖಂಡ ಮಹಾಂತ ರವೀಂದ್ರಪುರಿ ಆಗ್ರಹಿಸಿದ್ದಾರೆ.

ಕುಂಭಮೇಳದಲ್ಲಿ ಪ್ರಮುಖ ಕಾರ್ಯಕ್ರಮವಾಗಿರುವ ಶಾಹಿ ಸ್ನಾನ್ ಮತ್ತು ಪೇಶ್ ವಾಯ್ ಮುಂತಾದ ಉರ್ದು ಪದಗಳನ್ನು ಹಿಂದಿಗೆ ಬದಲಿಸಬೇಕು. ಹೀಗೆ ಹೆಸರು ಬದಲಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗೆ ನಾವು ತಿಳಿಸಿದ್ದೇವೆ ಮತ್ತು ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದವರು ಹೇಳಿದ್ದಾರೆ ಎಂದವರು ತಿಳಿಸಿದ್ದಾರೆ.