ಕೋಮು ಸೌಹಾರ್ದತೆಗಾಗಿ ದ್ವನಿ ಎತ್ತುವಂತೆ ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಮನವಿ; ಶ್ರೀಗಳಿಂದ ಉತ್ತಮ ಸ್ಪಂದನೆ

0
400

ಸನ್ಮಾರ್ಗ ವಾರ್ತೆ

ತುಮಕೂರು: ದೇಶದಲ್ಲಿ ನೆಲೆಸಿರುವ ಎಲ್ಲಾ ಸಮುದಾಯಗಳ ನಡುವೆ ಉತ್ತಮ ಸೌಹಾರ್ಧ ವಾತಾವರಣ ನಿರ್ಮಿಸುವ ಸದುದ್ದೇಶದಿಂದ ಹುಟ್ಟಿಕೊಂಡಿರುವ ಮುಸ್ಲಿಂ ಬಾಂಧವ್ಯ ವೇದಿಕೆ, ಇಂದು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ, ಕೋಮು ಸೌಹಾರ್ಧತೆಗಾಗಿ ದ್ವನಿ ಎತ್ತುವಂತೆ ಮನವಿ ಮಾಡಿರುವುದಾಗಿ ಮುಸ್ಲಿಂ ಭಾಂದವ್ಯ ವೇದಿಕೆಯ ಗೌರವಾಧ್ಯಕ್ಷ ಎಸ್.ಬಿ.ದಾರಿಮಿ ಹೇಳಿದ್ದಾರೆ.

ಸುದ್ದಿಗೋಷ್ಠಿಯ ಮಾತನಾಡಿದ ಅವರು, ಮುಸ್ಲಿಂ ಬಾಂಧವ್ಯ ವೇದಿಕೆ-ಕರ್ನಾಟಕದ ವತಿಯಿಂದ ವಿರಕ್ತ ಮಠಗಳಲ್ಲಿಯೇ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಶಕ್ತಿ ಕೇಂದ್ರ ಎನಿಸಿಕೊಂಡಿರುವ ಸಿದ್ದಗಂಗಾ ಮಠಾಧ್ಯಕ್ಷರನ್ನು ಭೇಟಿಯಾಗಿ ಒಂದು ಸಮುದಾಯದ ವಿರುದ್ದ ನಡೆಯುತ್ತಿರುವ ಕೋಮು ಅಸಹಿಷ್ಣತೆ ವಿರುದ್ದ ಶ್ರೀಗಳು ದ್ವನಿ ಎತ್ತುವಂತೆ ಮನವಿ ಮಾಡಿದ್ದು, ಶ್ರೀಗಳು ಅವಕಾಶ ಬಂದಾಗ, ಸೌಹಾರ್ಧ ಭೂಮಿಕೆಗೆ ಕೈ ಜೋಡಿಸುವ ಭರವಸೆ ನೀಡಿದ್ದಾರೆ ಎಂದರು.

ಕರ್ನಾಟಕ ಕುವೆಂಪು ಅವರು ಹೇಳಿರುವ ರೀತಿ ಸರ್ವ ಜನಾಂಗದ ಶಾಂತಿಯ ತೋಟ. ಆದರೆ ಕೆಲ ವರ್ಷಗಳಿಂದ ಇಲ್ಲಿ ಹಿಜಾಬ್, ಹಲಾಲ್, ಅಜ್ಹಾನ್, ವ್ಯಾಪಾರ ನಿರ್ಭಂದ, ಟಿಪ್ಪು ಜಯಂತಿ, ಉರಿಗೌಡ, ನಂಜೇಗೌಡ, ಮೀಸಲಾತಿ ರದ್ದು, ಹೀಗೆ ನಿರಂತರವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡ ಕೀಳು ಮಟ್ಟದ ರಾಜಕಾರಣದಿಂದ ನಿರಂತರ ಶೋಷಣೆಗೆ ಒಳಗಾಗುತ್ತಿದೆ. ಒಂದೆಡೆ ರಾಜಕೀಯ ಕಾರಣಕ್ಕೆ ಇದನ್ನು ಮಾಡಿದರೆ, ಇದಕ್ಕೆ ಕುಸಿಯತ್ತಿರುವ ಮೌಲ್ಯಾಧಾರಿತ ಸಮಾಜಿಕ ವ್ಯವಸ್ಥೆ ಕಾರಣವಾಗಿದೆ. ಅನಾದಿ ಕಾಲದಿಂದಲ ಎಲ್ಲ ಸಮುದಾಯದವರ ನಡುವೆ ಉತ್ತಮ ಬಾಂಧವ್ಯ ಹೊಂದಿರುವ ಮಠ, ಮಾನ್ಯಗಳ ಸ್ವಾಮೀಜಿಗಳು ಮೌನ ಸರಿಯಲ್ಲ. ನಶಿಸುತ್ತಿರುವ ಕೋಮು ಸಾಮರಸ್ಯವನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಸ್ವಾಮಿಜೀಗಳ ಜನರಿಗೆ ಸತ್ಯ ತಿಳಿಸಬೇಕು. ಇದು ಕೇವಲ ಹಿಂದು ಧರ್ಮದ ಸ್ವಾಮೀಜಿಗಳಲ್ಲದೆ, ಎಲ್ಲ ಧರ್ಮಗಳ ಪೂಜ್ಯ ಸ್ಥಾನದಲ್ಲಿ ಇರುವವರೂ ಇದಕ್ಕೆ ಕೈ ಜೋಡಿಸಬೇಕೆಂಬುದು ನಮ್ಮ ವೇದಿಕೆಯ ಕೋರಿಕೆಯಾಗಿದೆ ಎಂದರು.

ಈ ಹಿಂದೆ 2023ರಲ್ಲಿ ನಮ್ಮ ವೇದಿಕೆ ಆದಿಚುಂಚನಗಿರಿ ಸ್ವಾಮೀಜಿಗಳನ್ನು ಭೇಟಿಯಾಗಿ ಇದೇ ರೀತಿ ಮನವಿ ಸಲ್ಲಿಸಿತ್ತು. ಮಂಡ್ಯ ಮತ್ತಿತರ ಭಾಗಗಳಲ್ಲಿ ಕಾಣಿಸಿಕೊಂಡ ಉರಿಗೌಡ, ನಂಜೇಗೌಡ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಆದಿಚುಂಚನಗಿರಿ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿದ ಪರಿಣಾಮ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದ್ದ ಇಡೀ ಪ್ರಕರಣ ತಣ್ಣಗಾಯಿತು. ಇದೇ ರೀತಿಯ ಸಹಕಾರ ಎಲ್ಲ ಮಠಗಳಿಂದಲೂ ದೊರೆತಾಗ ಎಲ್ಲಾ ಸಮುದಾಯಗಳು ಶಾಂತಿ, ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ವಾಮೀಜಿಗಳು, ಮಠಾಧೀಶರು, ವಿವಿಧ ಸಮಾಜಗಳ ಹಿರಿಯರು, ಪ್ರಭಾವಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಅವರ ಮೂಲಕ ಸರ್ವ ಧರ್ಮ ಸಮನ್ವಯ ಸಾಧಿಸುವ ಉದ್ದೇಶ ಮುಸ್ಲಿಂ ಬಾಂಧವ್ಯ ವೇದಿಕೆ-ಕರ್ನಾಟಕದ ಮುಂದಿದೆ ಎಂದು ಎಸ್.ಬಿ.ಧಾರಿಮಿ ತಿಳಿಸಿದರು.

ರಾಜ್ಯದಲ್ಲಿ ವ್ಯಕ್ತಿಗತ ನೆಲೆಯಲ್ಲಿ ಆದ ಘಟನೆಗಳನ್ನು ಇಡೀ ಸಮುದಾಯಕ್ಕೆ ಅಂಟಿಸುವ ಕೆಲಸವನ್ನು ಹೆಚ್ಚಿನ ರೀತಿಯಲ್ಲಿ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಮಠಾಧೀಶರು, ಧಾರ್ಮಿಕ ನಾಯಕರು, ಸಾಮಾಜಿಕ ನಾಯಕರು ಮತ್ತು ಮುತ್ಸದ್ದಿಗಳ ಮೌನ ಸಮ್ಮತಿ ಎಂಬಂತೆ ಕೆಲವರು ವರ್ತಿಸುತ್ತಿದ್ದಾರೆ. ಈ ರೀತಿಯ ಪ್ರಯತ್ನಗಳು ನಮ್ಮ ನೆರೆ ಹೊರೆಯ ರಾಜ್ಯಗಳಲ್ಲಿ ಯಶಸ್ಸು ಕಂಡಿಲ್ಲ. ಇದಕ್ಕೆ ಕಾರಣ ಅಲ್ಲಿನ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯೇ ಕಾರಣವಾಗಿದೆ. ಅನಾದಿ ಕಾಲದಿಂದಲೂ ಮುಸ್ಲಿಂ ಸಮುದಾಯದೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದ ಸಮುದಾಯಗಳೇ ಇಂತಹ ವಿಚಾರಗಳಲ್ಲಿ ಮುಂದಾಳತ್ವ ವಹಿಸುತ್ತಿರುವುದು ಕಳವಳ ಮೂಡಿಸಿದೆ. ಹಾಗಾಗಿ ಸ್ವಾಮೀಜಿಗಳು ರಾಜ್ಯದಲ್ಲಿ ಕೋಮು ಸೌಹಾರ್ಧ ವಾತಾವರಣ ನಿರ್ಮಾಣದ ಮುಂದಾಳ್ವತ್ವ ವಹಿಸಬೇಕೆಂದು ಶ್ರೀ ಸಿದ್ದಲಿಂಗ ಸ್ವಾಮೀಜಿಗಳಲ್ಲಿ ಮನವಿ ಮಾಡಿದ್ದೆವೆ ಎಂದರು.