ಸನ್ಮಾರ್ಗ ವಾರ್ತೆ
18ನೇ ಲೋಕಸಭೆಯಲ್ಲಿ ಮೊದಲ ಭಾಷಣ ಮಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಶಿವ, ಗುರುನಾನಕ್, ಬುದ್ಧ, ಜೀಸಸ್, ಮಹಾವೀರ, ಇಸ್ಲಾಂ ಧರ್ಮದ ಸಂದೇಶಗಳನ್ನು ತೋರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
https://x.com/INCIndia/status/1807701317567049811?t=ZgazDOddjtD0kCTyIl-qDA&s=19
ಸೋಮವಾರ ಲೋಕಸಭೆಯಲ್ಲಿ ಜೈ ಸಂವಿಧಾನ ಎಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನೇರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದಲ್ಲಿ 24 ಗಂಟೆಯು ಬಿಜೆಪಿ ಹಾಗೂ ಆರ್ಎಸ್ಎಸ್ ದ್ವೇಷ ಹರಡುವುದರಲ್ಲಿ ನಿರತವಾಗಿದೆ. ಬಿಜೆಪಿಯವರ ಪ್ರಕಾರ ನರೇಂದ್ರ ಮೋದಿ ಎಂದರೆ ಹಿಂದೂ ಧರ್ಮ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವ ಏನೆಂದರೆ, ನರೇಂದ್ರ ಮೋದಿ ಇಡೀ ಹಿಂದೂ ಸಮಾಜವಲ್ಲ. ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ. ಆರ್ಎಸ್ಎಸ್ ಇಡೀ ಹಿಂದೂ ಸಮಾಜವಲ್ಲ. ಇದು ಬಿಜೆಪಿಯ ಸ್ವತ್ತಲ್ಲ. ಬಿಜೆಪಿಯವರು ಹಿಂಸಾಚಾರಿ ಹಿಂದೂಗಳು” ಎಂದು ಹೇಳಿದರು.
ಈ ವೇಳೆ ಎದ್ದು ನಿಂತ ಪ್ರಧಾನಿ, “ಇಡೀ ಹಿಂದೂ ಸಮಾಜವನ್ನು ಹಿಂಸಾಚಾರಿಗಳು ಎಂದು ಕರೆಯುವುದು ಅಸಹ್ಯಕರ” ಎಂದು ಆಕ್ಷೇಪ ಎತ್ತಿದರು. ಅಲ್ಲದೇ, ಬಿಜೆಪಿ ನಾಯಕರು ರಾಹುಲ್ ಗಾಂಧಿ ಭಾಷಣಕ್ಕೆ ಅಡ್ಡಿಪಡಿಸಿದರು.
https://x.com/INCIndia/status/1807714509194215631?t=C3VPiJoUy6p1PwKKp9klpA&s=19
ದೇವರುಗಳ ಫೋಟೋದಲ್ಲಿದ್ದ ಅಭಯ ಮುದ್ರ ಸಂಕೇತವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, “ಅಭಯಮುದ್ರವು ಕಾಂಗ್ರೆಸ್ನ ಸಂಕೇತವಾಗಿದೆ… ಅಭಯಮುದ್ರವು ನಿರ್ಭಯತೆಯ ಸಂಕೇತವಾಗಿದೆ, ಧೈರ್ಯ ಮತ್ತು ಸುರಕ್ಷತೆಯ ಸಂಕೇತವಾಗಿದೆ. ಇದು ಭಯವನ್ನು ಹೋಗಲಾಡಿಸುತ್ತದೆ ಮತ್ತು ಹಿಂದೂ ಧರ್ಮ, ಇಸ್ಲಾಂ ಧರ್ಮದಲ್ಲಿ ದೈವಿಕ ರಕ್ಷಣೆ ಮತ್ತು ಆನಂದವನ್ನು ನೀಡುತ್ತದೆ. ಸಿಖ್ ಧರ್ಮ, ಬೌದ್ಧ ಧರ್ಮ ಮತ್ತು ಇತರ ಭಾರತೀಯ ಧರ್ಮಗಳು, ನಮ್ಮ ಮಹಾಪುರುಷರೆಲ್ಲರೂ ಅಹಿಂಸೆ ಮತ್ತು ಭಯವನ್ನು ಹೋಗಲಾಡಿಸುವ ಬಗ್ಗೆ ಮಾತನಾಡಿದ್ದಾರೆ. ಆದರೆ, ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವ ಬಿಜೆಪಿಯವರು ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ” ಎಂದು ವಾಗ್ದಾಳಿ ನಡೆಸಿದರು.
“ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನ ಅದಾನಿ ಅಂಬಾನಿಯವರನ್ನು ಆಮಂತ್ರಿಸಲಾಗಿತ್ತು. ಆದರೆ, ಅಲ್ಲಿನ ಸ್ಥಳೀಯ ಜನರನ್ನು ದೂರವಿಡಲಾಗಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅಲ್ಲಿನ ಮತದಾರರು ಬಿಜೆಪಿಗೆ ಸೂಕ್ತ ಪಾಠ ಕಲಿಸಿದ್ದಾರೆ” ಎಂದು ರಾಹುಲ್ ಗಾಂಧಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.