ನೈತಿಕತೆಯೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ – ಕುಲ್ಸುಮ್ ಅಬೂಬಕರ್

0
45

ಸನ್ಮಾರ್ಗ ವಾರ್ತೆ

ಕಾಪು : ನೈತಿಕತೆಯ ಜೀವನದಿಂದ ಸಮಾಜದೊಳಗೆ ಸಾಮರಸ್ಯ, ಪ್ರೀತಿ, ವಿಶ್ವಾಸ , ಸಮಾನತೆ ಮೂಡಿ ಬರಲು ಸಾಧ್ಯವಿದೆ. ಸ್ವಾತಂತ್ರವೆಂದರೆ, ತನ್ನ ಮನೋಭಿಲಾಷೆಯನ್ನು ಈಡೇರಿಸಲು ಯಾವುದೇ ವಾಮ ಮಾರ್ಗದಲ್ಲಿ ನಡೆದು ಅದನ್ನು ಗಳಿಸಿ ತನ್ನ ವಾಂಚ್ಛೆಯನ್ನು ತೀರಿಸಿಕೊಳ್ಳುವುದು ಅಲ್ಲ. ನಮ್ಮ ಜೀವನವು ಇಹಲೋಕಕ್ಕೆ ಮಾತ್ರ ಸೀಮಿತವಲ್ಲ. ಇಲ್ಲಿಯ ಎಲ್ಲಾ ಕರ್ಮಗಳ ಲೆಕ್ಕವನ್ನು ಪರಲೋಕದಲ್ಲಿ ಸ್ರಷ್ಟಿಕರ್ತನಿಗೆ ಕೊಡಲು ಇದೆ ಎನ್ನುವ ಯೋಚನೆ ಮನುಷ್ಯನಲ್ಲಿ ಇದ್ದಾಗ, ಆತ ಸಮಾಜದಲ್ಲಿ ಗೌರವಯುತ ಜೀವನಕ್ಕಾಗಿ ನೈತಿಕತೆಯನ್ನು ಅಳವಡಿಸಿಕೊಳ್ಳಲು ಮುಂದೆ ಬರುತ್ತಾನೆ. ಅಂತಹ ವಾತಾವರಣವನ್ನು ಪ್ರತಿಯೊಬ್ಬ ಮನುಷ್ಯ ಮಾಡಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲೆಯ ಮಹಿಳಾ ವಿಭಾಗದ ಸಂಚಾಲಕರಾದ ಕುಲ್ಸುಮ್ ಅಬೂಬಕ್ಕರ್ ಹೇಳಿದರು.

ಅವರು ಜಮಾಅತೆ ಇಸ್ಲಾಮೀ ಹಿಂದ್ ಭಾರತದ್ಯಾದಂತ ಹಮ್ಮಿಕೊಂಡಿರುವ ” ನೈತಿಕತೆಯೇ ಸ್ವಾತಂತ್ರ್ಯದ ಭರವಸೆ” ಎಂಬ ಧ್ಯೆಯ ವಾಕ್ಯದಡಿಯಲ್ಲಿ ಅಭಿಯಾನ ನಡೆಸುತ್ತಿದ್ದು , ಇದರ ಅಂಗವಾಗಿ ಕಾಪು ವರ್ತುಲವು ಹೋಟೆಲ್ ಕೆ. ಒನ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡುತ್ತ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾವಿತ್ರಿ ಗಣೇಶ್ ರವರು, ಮಹಿಳೆಯರಾದ ನಾವು ಸಮಾಜದಲ್ಲಿ ಸತ್ಯತೆ, ನ್ಯಾಯ, ನಿಷ್ಠೆ, ಕಾರ್ಯಕ್ಷಮತೆ, ಬದ್ಧತೆ ಇವುಗಳಿಗೆ ಒಗ್ಗಿಕೊಂಡು ಹೋದರೆ, ಸಮಾಜ ನಮ್ಮನ್ನು ಮುಂದೆ ಹೋಗಲು ಸಹಕರಿಸುತ್ತದೆ ಹಾಗೂ ಗೌರವಿಸುತ್ತದೆ ಎಂದರು.

ಮೋನಿಕಾ ಕರ್ನೆಲಿಯೊರವರು, ನಾವು ಚಿಕ್ಕವರು ಆಗಿರುವಾಗ ಡ್ರಗ್ಸ್ ಅಂದರೆ ಆರೋಗ್ಯ ಗುಣ ಪಡಿಸಲು ಕೊಡುವ ಔಷಧ ಆಗಿತ್ತು. ಆದರೆ ಇಂದು ಆರೋಗ್ಯವನ್ನು ಮತ್ತು ಸಮಾಜವನ್ನು ನಾಶ ಪಡಿಸುವ ಮಾದಕ ದ್ರವ್ಯ ಆಗಿದೆ. ಇದರ ಬಗ್ಗೆ ಮಹಿಳೆಯರು ಅದರ ವಿರುದ್ಧ ಟೊಂಕ ಕಟ್ಟಿ ನಿಲ್ಲಬೇಕು ಎಂದರು.

ಇನ್ನೊರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳುನಾಡ ವೆಬ್ ಚಾನಲ್ ನ ಮಾಲಕಿ ಯಶೋಧ ಕೇಶವ್ ರವರು, ಸ್ವಾತಂತ್ರ್ಯ ಪಡೆದು 78 ವರ್ಷಗಳಾದರೂ ಮಹಿಳೆಯರಿಗೆ ಸರಿಯಾದ ಸ್ವಾತಂತ್ರ್ಯ ಸಿಕ್ಕಿಲ್ಲ, ಕೇವಲ ಅವರು ವೇದಿಕೆಗೆ ಮೀಸಲಾಗಿದ್ದಾರೆ. ನಾವು ನಮ್ಮ ನೈತಿಕ ಮೇರೆಯ ಒಳಗಿದ್ದು, ನಮ್ಮ ಮನೆಯಿಂದಲೇ ಹೋರಾಟ ಮಾಡಬೇಕೆಂದು ತುಳು ಭಾಷೆಯಲ್ಲಿ ಹೇಳಿದರು.

ಉಡುಪಿ ಜಿಲ್ಲಾ ಮಹಿಳಾ ಸಹ ಸಂಚಾಲಕಿಯಾದ ರೇಷ್ಮಾ ಬೈಲೂರು ಸಮಾರೋಪ ನುಡಿಗಳಲ್ಲಿ, ಬದುಕಿನಲ್ಲಿ ಅಳವಡಿಸಿರುವ ಗುಣಗಳಿಗೆ ಬೆಲೆ ಬರಬೇಕಾದರೆ, ಮನುಷ್ಯನು ತನ್ನಲ್ಲಿ ಉನ್ನತ ಮಟ್ಟದ ನೈತಿಕತೆಯನ್ನು ಹೊಂದಿರಬೇಕು.
ಕುಟುಂಬದ ಹಿರಿಯರು ಉನ್ನತ ಮಟ್ಟದಲ್ಲಿ ಚಾರಿತ್ರ್ಯವಂತರಾದರೆ, ಅದರ ಪ್ರಭಾವ ಅವರ ಕುಟುಂಬ ಮತ್ತು ಅವರು ವಾಸಿಸುವ ಸಮಾಜದಲ್ಲಿ ಪರಿಣಾಮ ಬೀರುತ್ತದೆ. ಅವಾಗ ಒಂದು ಉತ್ತಮ ಸಮಾಜ ನಿರ್ಮಾಣ ಆಗಲು ಸಾಧ್ಯವಿದೆ ಎಂದರು.

ಪುರಸಭಾ ಸದಸ್ಯೆಯರಾದ ಮೋಹಿನಿ ಶೆಟ್ಟಿ ಮತ್ತು ಸುಲೋಚನಾ ಬಂಗೇರಾ ರವರು ಅಭಿಯಾನಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ, ಪುರಸಭಾ ಸದಸ್ಯರುಗಳಾದ ಶಾಂತಲತಾ ಶೆಟ್ಟಿ, ವಿಧ್ಯಾಆನಂದ್, ಅಶ್ವಿನಿ ಬಂಗೇರಾ ರವರು ಉಪಸ್ಥಿತರಿದ್ದರು.

ಮಾಜಿದಾ ಮಲ್ಪೆಯವರು ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಕುರ್ ಆನ್ ಪಠಣ ಮಾಡಿದರು. ರಹಮತುನ್ನಿಸರವರು ಅನುವಾದ ಮಾಡಿದರು. ಕಾಪು ಸ್ಥಾನಿಯ ಸಂಚಾಲಕರಾದ ಶಹನಾಜ್ ರವರು ಸ್ವಾಗತ ಭಾಷಣ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಮಸ್ನಾ ಮುಳೂರು ಧನ್ಯವಾದ ನೀಡಿದರು.