ಸನ್ಮಾರ್ಗ ವಾರ್ತೆ
ಗುಡಲ್ಲೂರು: ಊಟಿಯ ಸಮೀಪದಲ್ಲಿ ಗಾಂಜಾ ಮಾರಾಟ ಮಾಡಿದ ಪ್ರಕರಣದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದ್ದು ಮೂವರನ್ನು ಅಮಾನತುಗೊಳಿಸಲಾಗಿದೆ. ವಯನಾಡ್ ಗಡಿಯ ಎರುಮಾಡ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅಮರನ್ನನ್ನು ಬಂಧಿಸಲಾಗಿದೆ. ತೆನಿ ಪೊಲೀಸ್ ಠಾಣೆಯ ಗಣೇಶನ್, ಊಟಿ ಬಿವನ್ ಠಾಣೆಯ ವಿವೇಕ್, ಚೆಂಬಾಡಿ ಪೊಲೀಸ್ ಠಾಣೆಯ ಉಡಯಾರ್ ಅಮಾನುತುಗೊಂಡ ಇತರ ಪೇದೆಗಳು.
ಕಳೆದ ವಾರ ಗುಡಲ್ಲೂರಿನ ಗಾಂಜಾ ಮಾರಾಟ ಮಾಡಿದ ಶರತ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ, ಎರುಮಾಡ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅಮರನ್ ಗಾಂಜಾ ಮಾರುವುದಕ್ಕೆ ನೀಡಿದ್ದಾಗಿ ಆರೋಪಿ ಹೇಳಿದ್ದ. ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಶಿಷ್ ರಾವತ್ ನೇರವಾಗಿ ಮಧ್ಯಪ್ರವೇಶಿಸಿ ಸಮಗ್ರವಾದ ತನಿಖೆಗೆ ಆದೇಶ ಹೊರಡಿಸಿದ್ದರು. ತನಿಖೆಯಲ್ಲಿ ಬೇಲಿಯೇ ಹೊಲ ಮೇಯುತ್ತಿರುವುದು ಪತ್ತೆಯಾಗಿದೆ.
ಗಣೇಶನ್ಗೆ ಗಾಂಜಾ ವ್ಯಾಪಾರಿಗಳೊಂದಿಗೆ ಸಂಬಂಧ ಇದೆ ಎಂಬುದು ಖಚಿತವಾಗಿದ್ದು, ಈತನನ್ನು ಅಮಾನತು ಗೊಳಿಸಲಾಗಿದೆ. ತೆನಿಯದಿಂದ ಗಣೇಶನ್ ಎರುಮಾಡಿಗೆ ಬಂದು ಗೆಳೆಯರಾದ ಕಾನ್ಸ್ಟೇಬಲ್ ಅಮರನೊಂದಿಗೆ ಸೇರಿ ವಯನಾಡಿನ ಕಡೆಗೆ ಗಾಂಜಾ ಸಾಗಿಸಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ವಿವರ ತಿಳಿದೂ ಮೇಲಧಿಕಾರಿಗಳಿಗೆ ಮಾಹಿತಿ ನೀಡದ ಕಾರಣಕ್ಕಾಗಿ ವಿವೇಕನ್ನನ್ನು ಅಮಾನತುಗೊಳಿಸಲಾಗಿದೆ. ಸದ್ಯಕ್ಕೆ ‘ಆಪರೇಷನ್ ಗಾಂಜಾ 2.0’ ಪ್ರಕಾರ ತಮಿಳ್ನಾಡು ಪೊಲೀಸರು ಗಾಂಜಾ ಮಾರಾಟಗಾರರನ್ನು ಬೆಂಬತ್ತಿದ್ದಾರೆ.