ಸನ್ಮಾರ್ಗ ವಾರ್ತೆ
ಮಂಗಳೂರು: ಹೋಟೆಲ್ ಉದ್ಯಮದಲ್ಲಿ ಮಂಗಳೂರಿನಲ್ಲಿ ಪ್ರಖ್ಯಾತಿ ಪಡೆದಿರುವ ನಗರದ ಬಂದರ್ ನಲ್ಲಿರುವ ಬಾಂಬೆ ಲಕ್ಕಿ ರೆಸ್ಟೋರೆಂಟ್ ಮಾಲಕ ಹಾಜಿ ಎಂ. ಸುಲೈಮಾನ್ ಇಂದು ಸಂಜೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೂಲತಃ ಕುದ್ರೋಳಿಯವರಾದ ಸುಲೈಮಾನ್ ಹಾಜಿ ಪ್ರಸ್ತುತ ಪಾಂಡೇಶ್ವರದಲ್ಲಿ ನೆಲೆಸಿದ್ದರು. ಕುದ್ರೋಳಿ ಜಾಮಿಯಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದ ಸುಲೈಮಾನ್ ಹಾಜಿ ಪ್ರಸ್ತುತ ಟ್ರಸ್ಟಿಯಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು.
ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದ್ದ ಸುಲೈಮಾನ್ ಅವರು, ಕೊಡುಗೈ ದಾನಿಯಾಗಿಯೂ ಗುರುತಿಸಿಕೊಂಡಿದ್ದರು. ಮಂಗಳೂರಿನಲ್ಲಿ ಶತಮಾನದ ಇತಿಹಾಸವಿರುವ ಬಾಂಬೆ ಹೋಟೆಲ್ ನ ಯಶಸ್ಸಿನ ರೂವಾರಿಯೂ ಆಗಿದ್ದಾರೆ.
ಮೃತರ ಅಂತಿಮ ದರ್ಶನಕ್ಕೆ ಪಾಂಡೇಶ್ವರದ ರೊಸಾರಿಯೋ ಚರ್ಚ್ ಬಳಿಯಿರುವ ಅವರ ಸ್ವಗೃಹದಲ್ಲಿರಿಸಲಾಗಿದೆ. ಅಂತ್ಯಕ್ರಿಯೆಯು ಇಂದು ರಾತ್ರಿ ಇಶಾ ನಮಾಝ್ ನ ನಂತರ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ನಡೆಸಲಾಗುವುದೆಂದು ಕುಟುಂಬಸ್ಥರು ತಿಳಿಸಿದ್ದಾರೆ.