ಡಾ.ಸತೀಶ್ಚಂದ್ರರಿಗೆ ‘ಪ್ರೊಫೆಸರ್ ಆಫ್ ಎಕ್ಸಲೆನ್ಸ್ ‘ ಪ್ರಶಸ್ತಿ ಪ್ರದಾನ

0
238

ಸನ್ಮಾರ್ಗ ವಾರ್ತೆ

ಉಜಿರೆ: ಎಸ್.ಡಿ .ಎಂ ಕಾಲೇಜಿನ ಅಲ್ಯೂಮ್ನಿ ಅಸೋಸಿಯೇಷನ್ ವತಿಯಿಂದ ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ.ಎಸ್ ಅವರಿಗೆ ‘ಪ್ರೊಫೆಸರ್ ಆಫ್ ಎಕ್ಸಲೆನ್ಸ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಉಜಿರೆಯ ಎಸ್.ಡಿ.ಎಂ ಗ್ಲೋಬಲ್ ಅಲ್ಯೂಮ್ನಿ ಅಸೋಸಿಯೇಷನ್  ಶುಕ್ರವಾರ ಆಯೋಜಿಸಿದ್ದ ‘ಹವಾಮಾನ ಬದಲಾವಣೆ’ ಕುರಿತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು.

ಪ್ರತಿವರ್ಷ ಕಾಲೇಜಿನ ಪ್ರಾಧ್ಯಾಪಕರ ಗಮನಾರ್ಹ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಡಾ.ಸತೀಶ್ಚಂದ್ರ.ಎಸ್ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪ್ರಶಂಸನೀಯ. ಡಾ.ಸತೀಶ್ಚಂದ್ರ.ಎಸ್ ಅವರು 36 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ  ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಮಾರ್ಗದರ್ಶನದಿಂದ ಸಂಸ್ಥೆಯ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ.ಸತೀಶ್ಚಂದ್ರ.ಎಸ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಯಾವುದೇ  ವಸ್ತುವಿನ  ಮೌಲ್ಯ ಅರಿವಾಗುವುದು ಅದನ್ನು ಕಳೆದುಕೊಂಡಾಗ ಎನ್ನಲಾಗುತ್ತದೆ. ಹಾಗೆಯೇ ಸಮಯದ ಮೌಲ್ಯವನ್ನು ಅರಿತುಕೊಂಡು ಕಾಲೇಜಿನ ದಿನಗಳಲ್ಲಿ ದೊರೆಯುವ ಅವಕಾಶಗಳನ್ನು ಸಮರ್ಥವಾಗಿ ಸದುಪಯೋಗಪಡಿಸಕೊಳ್ಳಬೇಕು.  ವಿದ್ಯಾರ್ಥಿಗಳ ಪ್ರೀತಿ, ಅಭಿಮಾನ ಮತ್ತು ಸಹಕಾರದಿಂದ ಸಂಸ್ಥೆಯ ಉನ್ನತಿಗಾಗಿ ಸಲ್ಲಿಸುವ ಸೇವೆ ಸಾರ್ಥಕವೆನಿಸುತ್ತದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜರ್ಮನಿ ವಿಶ್ವವಿದ್ಯಾಲಯದ ಅರಣ್ಯ ವಿಜ್ಞಾನ ಸಂಶೋಧನಾ ವಿದ್ಯಾರ್ಥಿ  ಶರತ್ ಶ್ಯಾಮಪ್ಪ ಪಾಲಿಗಿ,  ಮುಖ್ಯ ಅತಿಥಿಯಾಗಿ ದುಬೈ ಕಾಗ್ನಿಟಾ ಶಿಕ್ಷಣ ಸಂಸ್ಥೆಯ ವಾಣಿಜ್ಯ ನಿರ್ದೇಶಕ,  CA ರಾಜೇಶ್ ಬೆಂಗರೋಡಿ ಭಾಗವಹಿಸಿದ್ದರು.  ಶಾಪೂರ್ಜಿ ಪಲ್ಲೋಂಜಿ ಮಿಡ್‌ಈಸ್ಟ್ ಎಲ್ ಎಲ್ ಸಿ ಆಡಳಿತ ಅಧಿಕಾರಿಯಾದ ರೋಷನ್ ಪಿಂಟೋ,  ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಂಪ್ರೀತಾ ಹಾಗೂ ಇಂದಿರಾ ನಿರೂಪಿಸಿದರು. ಕಂಪ್ಯೂಟರ್ ಸೈನ್ಸ್  ವಿಭಾಗದ ಮುಖ್ಯಸ್ಥರಾದ  ಶೈಲೇಶ್ ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರೀಶ್ ಶೆಟ್ಟಿ ವಂದಿಸಿದರು.