ಗಾಜಿನ ಲೋಟದಂಥ ಬದುಕು

0
999

ಸನ್ಮಾರ್ಗ ರಮಜಾನ್ ಸಂಪಾದಕೀಯ 

1. ಯಾರು ತನ್ನನ್ನು ಪರಿಶುದ್ಧಗೊಳಿಸುವರೋ ಅವರಿಗೆ ಸ್ವರ್ಗವಿದೆ- ಅಧ್ಯಾಯ: ತಾಹಾ, ವಚನ: 26.

2. ಧರ್ಮನಿಷ್ಠರಿಗೆ ದುರಾಲೋಚನೆ ಸೋಂಕಿದರೂ ಅವರು ತಕ್ಷಣ ಜಾಗೃತರಾಗುತ್ತಾರೆ- ಅಧ್ಯಾಯ: ಅಲ್ ಅಅï‌ರಾಫ್, ವಚನ: 201

3. ಫಿರ್‌ಔನ್‌ನೊಡನೆ ಪ್ರವಾದಿ ಮೂಸಾ(ಅ) ಕೇಳಿದ ಪ್ರಶ್ನೆ: ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?- ಅಧ್ಯಾಯ: ಅನ್ನಾಝಿಯಾತ್, ವಚನ: 18.

4. ನಿಷ್ಕಳಂಕ ಹೃದಯದ ಹೊರತು ಸೊತ್ತು-ಸಂತಾನಗಳಾವುವೂ ನಾಳೆ ಪರಲೋಕದಲ್ಲಿ ಫಲಕಾರಿಯಾಗುವುದಿಲ್ಲ- ಅಧ್ಯಾಯ: ಅ ಶ್ಶುಅರಾ, ವಚನ: 88, 89

5. ಯಾರು ಆತ್ಮವನ್ನು ಸಂಸ್ಕರಿಸಿಕೊಂಡರೋ ಅವರು ವಿಜಯಿಯಾದರು- ಅಧ್ಯಾಯ: ಅಶ್ಶಮ್ಸ್, ವಚನ: 9.

6. ಪಾವಿತ್ರ‍್ಯವನ್ನು ಕೈಗೊಂಡವನು ಯಶಸ್ವಿಯಾದನು.- ಅಧ್ಯಾಯ: ಅಲ್ ಅಅï‌ಲಾ, ವಚನ: 14.

ಈ ಎಲ್ಲ ವಚನಗಳೂ ಒಂದು ಮುಖ್ಯ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಅದುವೇ ಪರಿಶುದ್ಧತೆ. ಆತ್ಮವನ್ನು ಪರಿ ಶುದ್ಧಗೊಳಿಸುವುದು, ಹೃದಯವನ್ನು ನಿಷ್ಕಳಂಕಗೊಳಿಸುವುದು, ತನ್ನನ್ನು ಪರಿಶುದ್ಧಗೊಳಿಸುವುದು ಎಂಬಿತ್ಯಾದಿಯಾಗಿ ಈ ಮೇಲಿನ ವಚ ನಗಳಲ್ಲಿ ಎತ್ತಿ ಹೇಳಲಾಗಿದೆ. ನಿಷ್ಕಳಂಕ ಹೃದಯ, ಪರಿಶುದ್ಧ ಆತ್ಮ ಎಂಬಿವುಗಳು ಮನುಷ್ಯನ ಇಹ-ಪರದ ವಿಜಯದ ಮಾನದಂಡ ಎಂದು ಪವಿತ್ರ ಕುರ್‌ಆನ್ ಹೇಳುತ್ತದೆ. ಆದ್ದರಿಂದಲೇ,

ಫಿರ್‌ಔನನ ಬಳಿಗೆ ತೆರಳಿ ಪ್ರವಾದಿ ಮೂಸಾ ಪ್ರಶ್ನಿಸಿದ್ದು ಹೀಗೆ: ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?

ಇಲ್ಲಿ ಫಿರ್‌ಔನ್ ಪರಿಶುದ್ಧನಾಗಿಲ್ಲ ಎಂಬುದನ್ನು ನೇರವಾಗಿ ಹೇಳಲಾಗಿದೆ. ಹಾಗಿದ್ದರೆ ಈ ಪರಿಶುದ್ಧತೆಯ ಮಾನದಂಡ ಯಾವುದು? ಆತನ ಬಟ್ಟೆಯೇ? ಆತನ ಸಿಂಹಾಸನವೇ? ಆತನ ದೇಹವೇ? ಆತನ ಪರಿಸರವೇ? ಆತನ ರಾಜಭವನವೇ? ಅಲ್ಲ ಎಂಬುದು ಮೂಸಾ (ಅ) ಮತ್ತು ಫಿರ್‌ಔನರ ನಡುವಿನ ದೀರ್ಘ ಮಾತುಕತೆ ಮತ್ತು ಆ ಬಳಿಕದ ಬೆಳವಣಿಗೆಗಳು ಸ್ಪಷ್ಟಪಡಿಸುತ್ತವೆ. ಫಿರ್‌ಔನ್ ಅಹಂಕಾರಿಯಾಗಿದ್ದ. ಪ್ರಕೃತಿ ನಿಯಮದಂತೆ ಅಧಿಕಾರ ಚಲಾಯಿಸಲು ಮತ್ತು ದೇವ ನಿಯಮ ವನ್ನು ಒಪ್ಪಲು ನಿರಾಕರಿಸುತ್ತಿದ್ದ.

ಅಹಂಕಾರ ಎಂಬುದು ಪರಿಶುದ್ಧತೆಯೆಡೆಗಿನ ಬಲುದೊಡ್ಡ ತೊಡಕು. ಪವಿತ್ರ ಕುರ್‌ಆನ್ ಪ್ರಸ್ತುತಪಡಿಸುವ ಮನುಷ್ಯನ ಚಹರೆ ಹೇಗಿದೆಯೆಂದರೆ, ಪಾರದರ್ಶಕ ಗಾಜಿನ ಲೋಟದಂತೆ. ಆ ಲೋಟದಲ್ಲಿ ಮರೆಗಳಿರುವುದಿಲ್ಲ. ಬಾಹ್ಯ ಹೇಗೆಯೋ ಆಂತರಿಕವೂ ಹಾಗೆಯೇ. ಅದರಲ್ಲಿ ನೀರು ತುಂಬಿದರೆ ಆ ಲೋಟ ತನ್ನ ಬಣ್ಣವನ್ನು ಬದಲಿಸುವುದಿಲ್ಲ. ನೀರಿನ ಬಣ್ಣ ಏನೇ ಆಗಿರಲಿ ಆ ಬಣ್ಣವನ್ನು ಅದು ಎತ್ತಿ ತೋರಿಸುತ್ತದೆಯೇ ಹೊರತು ತಾನೂ ಆ ಬಣ್ಣದಂತೆ ಬದಲಿಸಿಕೊಳ್ಳುವುದಿಲ್ಲ. ನೀರು ಸುರಿಯುವ ಮೊದಲು ಹೇಗಿತ್ತೋ ಹಾಗೆಯೇ ನೀರನ್ನು ಆ ಲೋಟದಿಂದ ಹೊರ ಚೆಲ್ಲಿದಾಗಲೂ ಇರುತ್ತದೆ. ಆ ಲೋಟದ ಮೇಲೆ ನಿಮಗೆ ಎಲ್ಲೂ ಯಾವ ಸಂದರ್ಭದಲ್ಲೂ ವಿಶ್ವಾಸ ಇಡಬಹುದು. ಯಾರು ಯಾವ ಬಣ್ಣದ್ದೇ ನೀರು ಸುರುವಿದರೂ ಮತ್ತು ತಾತ್ಕಾಲಿಕವಾಗಿ ಆ ಲೋಟಕ್ಕೆ ಬಣ್ಣವಿದೆಯೆಂದು ಭ್ರಮೆಗೊಳ ಪಡಿಸಲು ಯಾರಾದರೂ ಯಶಸ್ವಿಯಾದರೂ ತಕ್ಷಣವೇ ಅದು ತನ್ನ ನಿಜರೂಪವನ್ನು ಸಾಬೀತು ಪಡಿಸಬಲ್ಲುದು.

ಪವಿತ್ರ ಕುರ್‌ಆನ್ ಮನುಷ್ಯನನ್ನು ಇಂಥದ್ದೊಂದು ಲೋಟದಂತಾಗಲು ಬಯಸುತ್ತದೆ. ಪ್ರವಾದಿಗಳು ಹಾಗೆಯೇ ಬದುಕಿದ್ದರು. ಗಾಜಿನ ಲೋಟದಂಥ ಅವರ ವ್ಯಕ್ತಿತ್ವದ ಮೇಲೆ ಯಾರೆಷ್ಟೇ ಬಣ್ಣದ ನೀರು ಎರಚಿದರೂ ಅವು ಎರಚಿದಷ್ಟೇ ವೇಗವಾಗಿ ನೆಲ ಸೇರಿತೇ ಹೊರತು ಅವರ ಪಾರದರ್ಶಕತೆಯ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಪ್ರವಾದಿ(ಸ)ರ ಮೇಲೆ ಬಳಸದಿರುವ ಯಾವ ನಿಂದನಾತ್ಮಕ ಪದಗಳೂ ಇಲ್ಲ. ಹೊರಿಸದ ಆರೋಪಗಳಿಲ್ಲ. ಮಾಡದ ಹಿಂಸೆಗಳಿಲ್ಲ. ಆದರೂ ಅವಾವುವೂ ಅವರ ವ್ಯಕ್ತಿತ್ವವನ್ನು ಕಳಂಕಗೊಳಿಸಲಿಲ್ಲ. ಅವರನ್ನು ನಿಂದಿಸಿದವರೇ ಆ ಬಳಿಕ ಅವರ ವ್ಯಕ್ತಿತ್ವಕ್ಕೆ ಮಾರು ಹೋದರು. ಪ್ರೀತಿಸಿದರು. ಅಂದಹಾಗೆ,

ಅತ್ಯಂತ ಪಾರದರ್ಶಕ ಮತ್ತು ಪರಿಶುದ್ಧ ವ್ಯಕ್ತಿತ್ವವನ್ನು ನಮ್ಮದಾಗಿಸಿಕೊಳ್ಳಲಿಕ್ಕಿರುವ ಏಕೈಕ ದಾರಿ- ಆತ್ಮ ವಿಮರ್ಶೆ. ಪ್ರತಿದಿನ ರಾತ್ರಿಯ ವೇಳೆ ಅಥವಾ ರಾತ್ರಿಯ ನಿದ್ದೆಯ ಬಳಿಕ ಎಚ್ಚೆತ್ತು ಅಲ್ಲಾಹನ ಮುಂದೆ ಬಾಗಿ ಸ್ವವಿಮರ್ಶೆ ಮಾಡಿಕೊಳ್ಳುವುದು. ಪ್ರವಾದಿ(ಸ) ಪ್ರತಿ ದಿನ 100 ಬಾರಿ ತೌಬಾ ಮಾಡುತ್ತಿದ್ದರು ಎಂಬುದು ನಮಗೆ ಗೊತ್ತು. ಆತ್ಮವಿಮರ್ಶೆಯು ಸಹಜವಾಗಿ ನಮ್ಮನ್ನು ತೌಬಾದೆಡೆಗೆ ಕೊಂಡೊಯ್ಯುತ್ತದೆ. ತೌಬಾವು ನಮಗೆ ವಿನೀತಭಾವವನ್ನು ಮತ್ತು ತಪ್ಪುಗಳಿಂದ ದೂರ ಉಳಿಯುವುದನ್ನು ಕಲಿಸಿಕೊಡುತ್ತದೆ. ಸ್ವವಿಮರ್ಶೆ ಅಥವಾ ಆತ್ಮಾವಲೋಕನವನ್ನು ನಾವು ಪ್ರತಿದಿನ ರೂಢಿಸಿಕೊಂಡರೆ ನಮ್ಮ ವ್ಯಕ್ತಿತ್ವವೂ ಗಾಜಿನ ಲೋಟದಂತಾಗಬಹುದು. ಕುರ್‌ಆನ್ ಬಯಸುವ ಪರಿಶುದ್ಧ ಆತ್ಮ, ನಿಷ್ಕಳಂಕ ಹೃದಯ ನಮ್ಮದಾಗಬಹುದು.

ಗಾಜಿನ ಲೋಟದಂಥ ವ್ಯಕ್ತಿತ್ವವನ್ನು ಹೊಂದುವ ಉದ್ದೇಶದಿಂದಲೇ ಈ ಬಾರಿಯ ಉಪವಾಸ ವ್ರತವನ್ನು ಆಚರಿಸೋಣ.