ಸನ್ಮಾರ್ಗ ವಾರ್ತೆ
ಬಂಟ್ವಾಳ: ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀಡಲಾಗುವ 2022-23 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಶಿಕ್ಷಕರನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್ಐಓ) ಪಾಣೆಮಂಗಳೂರು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಬೆಳ್ತಂಗಡಿ ತಾಲೂಕಿನ ಬಂಗಾಡಿ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಮಿತಾನಂದ ಹೆಗ್ಡೆ(ಪ್ರಾಥಮಿಕ ವಿಭಾಗ) ಹಾಗೂ ಕೊಯ್ಯರು ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ರಾಧಾಕೃಷ್ಣ ಟಿ(ಪ್ರೌಢಶಾಲಾ ವಿಭಾಗ) ಅವರನ್ನು ಅಭಿನಂದಿಸಲಾಯಿತು.
ಸನ್ಮಾನಿತ ಶಿಕ್ಷಕರು ತಮ್ಮ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ, ತಮ್ಮ ಪ್ರಭಾವಪೂರ್ಣ ಶೈಲಿಯ ಭೋದನೆಯ ಮೂಲಕ ಗಮನ ಸೆಳೆದು ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಈ ಸಾಧನೆಯನ್ನು ಗುರುತಿಸಿ ಎಸ್ಐಓ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿ, ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಎಸ್ಐಓ ಪಾಣೆಮಂಗಳೂರು ಘಟಕದ ಕಾರ್ಯದರ್ಶಿ ಮುಬಾರಿಶ್ ಚೆಂಡಾಡಿ, ಸಹ ಕಾರ್ಯದರ್ಶಿ ಸಲ್ವಾನ್ ಬೋಳಂಗಡಿ, ಕಾರ್ಯಕರ್ತರಾದ ಶಾಕೀರ್ ಕಾರಾಜೆ, ಮುತಹ್ಹರ್ ಬೋಳಂಗಡಿ, ಮುಝಮ್ಮಿಲ್, ಇಸ್ಮಾಈಲ್ ಹಾಗೂ ಬಿಲಾಲ್ ಉಪಸ್ಥಿತರಿದ್ದರು.