ಚಾರಿತ್ರ್ಯವಂತ ವ್ಯಕ್ತಿಯ ಹೆಸರು ಅಜರಾಮರವಾಗಿರುತ್ತದೆ – ನಿರ್ಮಲ್ ಕುಮಾರ್ ಹೆಗ್ಡೆ

0
64

ಸನ್ಮಾರ್ಗ ವಾರ್ತೆ

ಕಾಪು : ಯಾವ ವ್ಯಕ್ತಿ ಚಾರಿತ್ರ್ಯವಂತನಾಗಿರುತ್ತನೋ, ಅವರ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿ ಇರುತ್ತದೆ. ಇದಕ್ಕೆ ಉದಾಹರಣೆ 1500 ವರ್ಷಗಳ ಹಿಂದೆ ಅರೇಬಿಯಾದಲ್ಲಿ, ಪ್ರವಾದಿಯಾಗಿ ಮುಹಮ್ಮದ್ ರವರು ನಿಯುಕ್ತಿಗೊಂಡು ಬಾಳಿ, ಬದುಕಿ, ಜನರನ್ನು ಅಂಧಕಾರದಿಂದ ಬೆಳಕಿಗೆ ತಂದು ಸಮಾಜದ ಜನರ ಬದುಕನ್ನು ಬದಲಾಯಿಸಿದ ಕೀರ್ತಿ ಮತ್ತು ಹೆಸರು ಇಂದಿನ ತನಕವೂ ಅಜರಾಮರವಾಗಿದೆ. ಆ ನಿಟ್ಟಿನಲ್ಲಿ ಅಜಾನ್ ಆದಾಗ ಹೆಗಲಿಗೆ ಹೆಗಲು ಕೊಟ್ಟು ಒಂದುಗೂಡಿಸಲು ಕಲಿಸಿದ ಧರ್ಮ ಪ್ರಜಾಪ್ರಭುತ್ವದ ಧರ್ಮ ಆಗಿದೆ. ಅದೇ ಇಸ್ಲಾಮ್ ಧರ್ಮ. ಯಾರೇ ಆಗಲಿ, ಧರ್ಮದ ಹೆಸರಿನಲ್ಲಿ ವೈಷಮ್ಯವನ್ನು ಬಿತ್ತಿದರೆ ಸಮಾಜದಲ್ಲಿ ಒಡಕು ಹುಟ್ಟುವುದು. ಅದಕ್ಕೆ ನಾವು ಅವಕಾಶ ಕೊಡಬಾರದು ಎಂದು ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಉಪಾಧ್ಯಯರಾದ ಶ್ರೀ ನಿರ್ಮಲ್ ಕುಮಾರ್ ಹೆಗ್ಡೆ ಹೇಳಿದರು.

ಅವರು ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ವತಿಯಿಂದ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ಕಾಪು ಹೋಟೆಲ್ ಕೆ. ಒನ್ ಸಭಾಂಗಣದಲ್ಲಿ, ಪ್ರವಾದಿ ಮುಹಮ್ಮದ್ ಸ. ಲೇಖನ ಸಂಕಲನ ಪುಸ್ತಕ ಬಿಡುಗಡೆಯ ವಿಚಾರ ಮಂಡನೆಯ ಸಭೆಯಲ್ಲಿ ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಮಣಿಪಾಲ ಎಮ್. ಐ. ಟಿ ಯ ಅಸೋಸಿಯೇಟ್ ಪ್ರೊಫೆಸರ್ ಡಾ | ಜಮಾಲುದ್ದಿನ್ ಹಿಂದಿಯವರು, ಈ ಹಿಂದೆ ಜನರ ಕಲ್ಯಾಣಕ್ಕಾಗಿ ಆಗಮನಿಸಿದ ಮಹಾ ಪುರುಷರ ಸಂದೇಶಗಳನ್ನು ಪಾಲಿಸುವುದು ಬಿಟ್ಟು ಅವರನ್ನು ಆರಾಧಿಸತೊಡಗಿದರು. ಇದರ ಅಂಗವಾಗಿ ವರ್ಷಕೊಮ್ಮೆ ಅವರ ಜಯಂತಿ ಮಾಡಿ ಪುಣ್ಯ ಸಂಪಾದಿಸಿದೆವು ಎಂದು ತಿಳಿದುಕೊಂಡ ಕಾರಣ, ಸಮಾಜದಲ್ಲಿ ಯಾವುದೇ ನೈತಿಕತೆ, ನ್ಯಾಯ, ಆದರ್ಶ, ನಿಬಂಧನೆ ಉಳಿದಿಲ್ಲ.

ಆ ಕಾರಣ ಇಂದಿನ ಪೀಳಿಗೆಗೆ ಯಾರೂ ರೋಲ್ ಮಾಡೆಲ್ ಗಳು ಸಿಗದೆ ತಮ್ಮ ಬದುಕನ್ನು ಕತ್ತಲೆಯೆಡೆಗೆ ಕೊಂಡೊಯ್ಯುತಿದ್ದಾರೆ. ಇಂದು ಸಮಾಜದಲ್ಲಿ ಕೆಡುಕು ಹರಡಲು ಯಾವುದೇ ಕಷ್ಟವಿಲ್ಲ. ಮೊಬೈಲ್ ಹಿಡಿದು ಒಂದು ಕ್ಲಿಕ್ ಮಾಡಿದರೆ ಸಾಕು, ಕೆಡುಕುಗಳ ಮಹಾಪೂರವೇ ಇಳಿಯುತ್ತದೆ. ಇದಕ್ಕೆ ತಡೆ ಒಡ್ಡಬೇಕಾದರೆ, ಪ್ರವಾದಿಯವರ ಬದುಕನ್ನು ಅಧ್ಯಯನ ಮಾಡಿ ಅದರಂತೆ ಬದುಕಬೇಕು. ಇದು ಇಂದಿನ ಕಾಲದ ಬೇಡಿಕೆ ಆಗಿರುತ್ತದೆ.

ಈ ನಿಟ್ಟಿನಲ್ಲಿ ಮತ್ತೊಮ್ಮೆ ಪ್ರವಾದಿ ಮುಹಮ್ಮದ್ (ಸ) ರವರ ಜೀವನ ಮತ್ತು ಸಂದೇಶದ ಪರಿಚಯ ಆಗ ಬೇಕಾಗಿದೆ. ಈ ಕೆಲಸವನ್ನು ಜಮಾಅತೆ ಇಸ್ಲಾಮೀ ಹಿಂದ್ ಭಾರತಾದ್ಯಾದಂತ ಮಾಡುತ್ತಾ ಬರುತ್ತಿದೆ ಎಂದರು.

ಜಮೀಯತುಲ್ ಫಲಾಹ್ ಕಾಪು ಘಟಕದ ಅಧ್ಯಕ್ಷರಾದ ಶಬೀಹ್ ಅಹಮದ್ ಕಾಝೀಯವರು, ಪ್ರವಾದಿ ಮುಹಮ್ಮದ್ (ಸ ) ರ ಲೇಖನ ಸಂಕಲನ ಬಿಡುಗಡೆಗೊಳಿಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾ ಸಂಚಾಲಕರಾದ ಡಾ | ಅಬ್ದುಲ್ ಅಝೀಝ್ ಸಮಾರೋಪ ಮಾತುಗಳನ್ನಾಡುತ್ತಾ, ವಿಶ್ವದಲ್ಲಿ ಜೀವಿಸುವ ಎಲ್ಲರೂ ಉಸಿರಾಡುತ್ತಿರುವ ಗಾಳಿ, ಪಡೆಯುತ್ತಿರುವ ಬೆಳಕು, ಕುಡಿಯುವ ನೀರು ಹಾಗೂ ಇನ್ನಿತರ ಎಲ್ಲಾ ವಸ್ತುಗಳು , ವ್ಯವಸ್ಥೆಗಳು ಇಡೀ ವಿಶ್ವದ ಏಕೈಕ ಸ್ರಷ್ಟಿಕರ್ತನದ್ದಾಗಿರುತ್ತದೆ. ಆತನ ಭೂಮಿಯಲ್ಲಿ ಆತನ ಕಾನೂನು ಜಾರಿಗೆ ಬರಬೇಕು. ಅದಕ್ಕಾಗಿ ಆತ ಪ್ರವಾದಿ ಮುಹಮ್ಮದ್ ( ಸ ) ರನ್ನು ವಿಶ್ವದ ಎಲ್ಲಾ ಜನರಿಗಾಗಿ ಸಂದೇಶವಾಹಕರನ್ನಾಗಿ, ಚಾರಿತ್ರ್ಯವಂತರನ್ನಾಗಿ ಕಳುಹಿಸಿರುವನು. ಈ ನಿಟ್ಟಿನಲ್ಲಿ ಏಕ ವಿಶ್ವ, ಏಕ ದೇವನೆಂಬ ವ್ಯವಸ್ಥೆ ಸ್ಥಾಪಿತವಾಗಬೇಕು. ಆವಾಗ ಭೂಮಿಯಲ್ಲಿ ಶಾಂತಿ, ಪ್ರೀತಿ, ಪ್ರಗತಿ, ಸಾಮರಸ್ಯ, ಸೌಹಾರ್ದತೆ ನೆಲೆ ನಿಲ್ಲುತ್ತದೆ ಎಂದರು.

ಪ್ರಾರಂಭದಲ್ಲಿ, ಮುಹಮ್ಮದ್ ರಾಯಿಫ್ ರವರ ಕುರ್ ಆನ್ ಪಠಿಸಿ ಅನುವಾದ ಓದಿದರು. ಬ್ರದರ್ ಮುಹಮ್ಮದ್ ಮುಯೀಸ್ ರವರು ಸ್ವಾಗತಿಸಿದರು. ಜ. ಇ. ಹಿಂದ್ ಕಾಪು ವರ್ತುಲದ ಅಧ್ಯಕ್ಷರು ಅನ್ವರ್ ಅಲಿ ಕಾಪು ವಿಷಯ ಪ್ರಸ್ತಾವನೆ ಮಾಡಿದರು.

ಕೊನೆಯಲ್ಲಿ ಜ. ಇ. ಹಿಂದ್ ಕಾಪು ವರ್ತುಲದ ಕಾರ್ಯದರ್ಶಿ, ಮುಹಮ್ಮದ್ ಇಕ್ಬಾಲ್ ಸಾಹೇಬ್ ಧನ್ಯವಾದ ನೀಡಿದರು.
ಬ್ರದರ್, ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ, ಬಿಡುಗಡೆಗೊಂಡ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು. ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು.