ಉನ್ನಾವ ಅಪಘಾತ: ಅತ್ಯಾಚಾರ ಆರೋಪಿ ಬಿಜೆಪಿ ನಾಯಕನ ಕುತಂತ್ರ- ಸಂತ್ರಸ್ತೆಯ ತಾಯಿಯ ಹೇಳಿಕೆ

0
651

ಹೊಸದಿಲ್ಲಿ, ಜು. 29: ಉನ್ನಾವಾದಲ್ಲಿಬಿಜೆಪಿ ಶಾಸಕನಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಯುವತಿಯ ಕಾರು ಅಪಘಾತ ಪ್ರಕರಣದಲ್ಲಿ ಆರೋಪಿ ಬಿಜೆಪಿ ನಾಯಕ ಕುಲ್‍ದೀಪ್ ಸಿಂಗ್ ಸೇಂಗರ್ ನ ಕೈವಾಡ ಇದೆ ಎಂದು ಯುವತಿಯ ತಾಯಿ ಹೇಳಿದ್ದಾರೆ. ರಾಯ್‍ಬರೇಲಿಯಲ್ಲಿ ನಿನ್ನೆ ನಡೆದ ಅಪಘಾತದಲ್ಲಿ ಬಾಲಕಿಯ ಇಬ್ಬರು ಸಂಬಂಧಿಕರು ಕೊಲ್ಲಲ್ಪಟ್ಟಿದ್ದರು. ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಅತ್ಯಾಚಾರ ಪ್ರಕರಣದ ಆರೋಪಿಯಾದ ಕುಲ್‍ದಿಪ್ ಸಿಂಗ್ ಸೇಂಗರ್ ಜೈಲಿನೊಳಗಿದ್ದಾನೆ. ಆದರೆ, ಆತನೇ ಅಪಘಾತ ನಡೆಸಲು ಪ್ರೇರೇಪಿಸಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದರು.

ಸೇಂಗರ್ ನ ಜನರು ಹೊರಗಿದ್ದಾರೆ. ಅವರು ನಿರಂತರ ನಮ್ಮನ್ನು ಬೆದರಿಸುತ್ತಿದ್ದಾರೆ. ನಮಗೆ ನ್ಯಾಯ ಸಿಗಬೇಕೆಂದು ತಾಯಿ ಹೇಳಿದರು. ರಾಯ್‍ಬರೇಲಿಯಲ್ಲಿ ಯುವತಿ, ಯುವತಿಯ ವಕೀಲ ಮತ್ತು ಸಂಬಂಧಿಕರು ಸಂಚರಿಸಿದ ಕಾರಿಗೆ ಲಾರಿ ಢಿಕ್ಕಿ ಹೊಡೆದಿತ್ತು. ಲಾರಿಯ ನಂಬರ್ ಪ್ಲೇಟ್‍ಗೆ ಕಪ್ಪು ಬಣ್ಣ ಬಳಿಯಲಾಗಿತ್ತು. ಅಪಘಾತ ನಡೆಸಿದ ಲಾರಿ ಚಾಲಕ ಮತ್ತು ಲಾರಿಯ ಮಾಲಕನನ್ನು ಬಂಧಿಸಲಾಗಿದೆ. ಇದೇವೇಳೆ ಯುವತಿಗೆ ಸುರಕ್ಷೆ ನೀಡುವಲ್ಲಿ ಲೋಪವಾಗಿಲ್ಲ ಎಂದು ಉತ್ತರಪ್ರದೇಶ ಡಿಜಿಪಿ ಒ.ಪಿ. ಸಿಂಗ್ ಹೇಳಿದ್ದಾರೆ.