ಪತ್ನಿ-ಮಕ್ಕಳನ್ನು ಕೊಂದು ಮೂರು ವರ್ಷದಿಂದ ಮಾರುವೇಷದಲ್ಲಿ ಬದುಕುತ್ತಿದ್ದ ವ್ಯಕ್ತಿಯ ಬಂಧನ

0
1011
ರಾಕೇಶ್ ನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಆತನ ಕುಟುಂಬದ ಮೂವರನ್ನು ಬಂಧಿಸಲಾಗಿದೆ.

ಸನ್ಮಾರ್ಗ ವಾರ್ತೆ

ಲಕ್ನೋ: ಉತ್ತರ ಪ್ರದೇಶದಲ್ಲಿ ಪತ್ನಿ ಮತ್ತು ಮಗಳನ್ನು ಹತ್ಯೆಗೈದು ಬಳಿಕ ಗೆಳೆಯನನ್ನ ಕೂಡ ಕೊಂದು ಕಳೆದ ಮೂರು ವರ್ಷಗಳಿಂದ ಮಾರುವೇಷದಲ್ಲಿ ಬದುಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಂದಿಗಿನ ಅನೈತಿಕ ಸಂಬಂಧವೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು 34 ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ. ರಾಕೇಶ್ 2018 ಫೆಬ್ರವರಿಯಲ್ಲಿ 27 ವರ್ಷದ ಪತ್ನಿ ಮತ್ತು ಮೂರು ಮತ್ತು ಎರಡು ವರ್ಷದ ಮಕ್ಕಳಿಬ್ಬರನ್ನು ಕೊಂದಿದ್ದ. ಅವರಿಬ್ಬರ ಮೃತದೇಹವನ್ನು ಮನೆಯ ಬೇಸ್ಮೆಂಟ್ ನಲ್ಲಿ ಗುಂಡಿ ತೋಡಿ ಹುಗಿದು ಹಾಕಿದ್ದ. ಬಳಿಕ ತನ್ನ ಗೆಳೆಯ ರಾಜೇಶನನ್ನು ಕೂಡ ಹತ್ಯೆಮಾಡಿದ್ದ.ರಾಜೇಶನ ಮೃತದೇಹವನ್ನು ವಿಕೃತ ಗೊಳಿಸಿದ ಬಳಿಕ ತನ್ನದೇ ಗುರುತುಗಳನ್ನು ಸ್ಥಳದಲ್ಲಿ ಬಿಟ್ಟು ಹೋಗಿದ್ದರಿಂದ ರಾಕೇಶ್ ಮೃತಪಟ್ಟಿರುವುದಾಗಿ ಪೊಲೀಸರು ನಂಬಿದ್ದರು. ಗೆಳೆಯನನ್ನೇ ಕೊಂದು ಅದು ತನ್ನ ಮೃತದೇಹವೆಂದು ಬಿಂಬಿಸಿ ಈತ ಮಾರುವೇಷದಲ್ಲಿ ಬದುಕುತ್ತಿದ್ದ.

ರಾಕೇಶನ ಪತ್ನಿಯ ತಂದೆ ತನ್ನ ಮಗಳು ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಳಿಯ ರಾಕೇಶ್ ಅಪಹರಿಸಿಕೊಂಡು ಹೋಗಿದ್ದಾನೆ ಎಂದು ದೂರು ನೀಡಿದ್ದರು. ಈ ದೂರಿನ ತನಿಖೆ ನಡೆಯುತ್ತಿರುವಾಗಲೇ ರಾಜೇಶನ ಮೃತದೇಹವು ಸಿಕ್ಕಿದ್ದು ಅದು ರಾಕೇಶ್ ನದ್ದಾಗಿದೆ ಎಂದು ನಂಬಲಾಯಿತು. ಮಾತ್ರ ಅಲ್ಲ ರಾಕೇಶನ ತಂದೆ ತನ್ನ ಮಗನದ್ದೇ ಎಂದು ವಾದಿಸಿದರು. ಬಳಿಕ ರಾಜೇಶನ ಕುಟುಂಬದವರು ಇದು ತಮ್ಮ ಮಗನ ಮೃತದೇಹ ಎಂದು ಪಡೆದುಕೊಂಡಿದ್ದರು.

ಈ ನಡುವೆ ಮೂರು ವರ್ಷಗಳ ಕಾಲ ರಾಕೇಶ್ ಬೇರೆ ಬೇರೆ ಕಡೆ ಮಾರುವೇಷದಲ್ಲಿ ಬದುಕುತ್ತಿದ್ದ. ಮೂರು ವರ್ಷಗಳ ಬಳಿಕ ಇದೀಗ ಆತನ ಬಂಧನವಾಗಿದೆ. ರಾಕೇಶ್ ನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಕುಟುಂಬದ ಮೂವರನ್ನು ಬಂಧಿಸಲಾಗಿದೆ. ತಂದೆ ನಿವೃತ್ತ ಪೊಲೀಸರಾಗಿದ್ದು, ಅಪರಾಧದ ಹಲವು ಹಂತಗಳಲ್ಲಿ ಸಹಾಯ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಬೇಸ್ ಮೆಂಟ್ ನಲ್ಲಿದ್ದ ಮೃತದೇಹಗಳನ್ನು ಪೊಲೀಸರು ಪರೀಕ್ಷೆಗಾಗಿ ಹೊರ ತೆಗೆದಿದ್ದಾರೆ.

ಮನೆಯ ಬೇಸ್ ಮೆಂಟ್ ನಲ್ಲಿದ್ದ ಮೃತದೇಹಗಳನ್ನು ಪೊಲೀಸರು ಪರೀಕ್ಷೆಗಾಗಿ ಹೊರ ತೆಗೆದಿದ್ದಾರೆ.