ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಬಿಜೆಪಿ ಸಂಸದ ವರುಣ್ ಗಾಂಧಿ ಪುನಃ ಬಿಜೆಪಿ ಸರಕಾರದ ವಿರುದ್ಧ ಹೇಳಿಕೆ ನೀಡಿದ್ದಾರೆ. ಅಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಬುಡಮೇಲುಗೊಳಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಉದ್ಯೋಗಾರ್ಥಿಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಅರ್ಹ ಅಭ್ಯರ್ಥಿಗಳಿರುವಾಗ ಮತ್ತು ಕೆಲಸ ಖಾಲಿ ಇರುವಾಗ ಮತ್ತೆ ಯಾಕೆ ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಕೇಳಿದರು. ಈ ಪ್ರತಿಭಟನೆ ಮಾಡಿದವರು ಈ ದೇಶದವರೇ, ಅವರ ದೂರುಗಳನ್ನು ಆಲಿಸಲು ಯಾರೂ ಸಿದ್ಧರಿಲ್ಲ. ಅಧಿಕಾರದಲ್ಲಿರುವವರ ಮಕ್ಕಳು ಈ ಪ್ರತಿಭಟನೆಯ ಭಾಗವಾಗಿದ್ದರೆ ಹೀಗೆ ವರ್ತಿಸುತ್ತಿದ್ದರೇ ಎಂದು ಅವರು ಪ್ರಶ್ನಿಸಿದರು.
69,000 ಅಧ್ಯಾಪಕರ ನೇಮಕಾತಿಗೆ 2019ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ಆರೋಪಿಸಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟಿಸಿದ್ದಾರೆ. ಸೆಂಟ್ರಲ್ ಲಕ್ನೊದ ಬೀದಿಯೊಂದರ ಸರ್ಕಲ್ನಿಂದ ಯೋಗಿ ಆದಿತ್ಯನಾಥರ ವಸತಿಗೆ ಮಾರ್ಚ್ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಬೀಸಿದ್ದಾರೆ. ಪೊಲೀಸರ ಕ್ರಮದ ವಿರುದ್ಧ ಪ್ರತಿಪಕ್ಷ ನಾಯಕರು ಕೂಡ ಕಟುವಾಗಿ ಟೀಕಿಸಿದ್ದಾರೆ. ಪೊಲೀಸರ ಕ್ರಮವನ್ನು ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಖಂಡಿಸಿದರು. ಬಿಜೆಪಿ ಮತ ಕೇಳಿ ಬರುವಾಗ ಇವೆಲ್ಲವನ್ನೂ ನೆನಪಿಟ್ಟುಕೊಳ್ಳಿ ಎಂದು ರಾಹುಲ್ ಗಾಂಧಿ ಹೇಳದರು. ಇದೇ ವೇಳೇ ಬಿಜೆಪಿ ಸಂಸದರಾದ ವರುಣ್ ಗಾಂಧಿಯವರೇ ಲಾಠಿ ಚಾರ್ಜನ್ನು ಟೀಕಿಸಿದ್ದಾರೆ.