ಸನ್ಮಾರ್ಗ ವಾರ್ತೆ
ಬೆಂಗಳೂರು: “ರಾಜ್ಯದಲ್ಲಿ ಡೆಂಗಿ ಜ್ವರ ಹಾವಳಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಝಿಕಾ ವೈರಾಣು ಸೋಂಕು, ಚಿಕನ್ ಗುನ್ಯಾ ರಾಜ್ಯದಲ್ಲಿ ಸದ್ದು ಮಾಡುತ್ತಿವೆ. ಸರಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ” ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಸರಕಾರವನ್ನು ಆಗ್ರಹಿಸಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ ಈಗಾಗಲೇ ಡೆಂಗಿ ಪೀಡಿತರ ಸಂಖ್ಯೆ 7168 ದಾಖಲಾಗಿವೆ. ಈ ಸಾಂಕ್ರಾಮಿಕ ರೋಗ ತಡೆಗಟ್ಟಲು ಸರಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕಾಗಿದೆ.
ಹಾಗೆಯೇ ಝಿಕಾ ಸೋಂಕು, ಚಿಕನ್ ಗುನ್ಯಾ ಮುಂತಾದ ರೋಗಗಳು ಹರಡುವ ಸೂಚನೆಗಳು ಕಂಡುಬರುತ್ತಿವೆ. ಈ ರೋಗಗಳು ವ್ಯಾಪಕವಾಗುವುದಕ್ಕೆ ಮೊದಲೇ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.
ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ದೊರೆಯಲು ಅವಕಾಶ ಮಾಡಿಕೊಡಬೇಕಾಗಿದೆ. ಅದರಲ್ಲೂ ಝಿಕಾ ವೈರಾಣು ಸೋಂಕಿಗೆ ನಿರ್ಧಿಷ್ಟ ಚಿಕಿತ್ಸೆ ಲಭ್ಯವಿರದ ಕಾರಣ ಸರಕಾರ ಈ ರೋಗ ನಿಯಂತ್ರಿಸಲು ಅಗತ್ಯಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.