ಸನ್ಮಾರ್ಗ ವಾರ್ತೆ
ಶಿವಮೊಗ್ಗ: “ಜಾತ್ಯತೀತ ದೇಶದಲ್ಲಿ ಜಾತಿ ಗಣತಿ ಮಾಡುವುದು ಯಾಕೆ ಅಗತ್ಯ? ಇಷ್ಟೊಂದು ಹಣ ವೆಚ್ಚ ಮಾಡಿ ತಯಾರಿಸಲಾದ ಜಾತಿ ಗಣತಿ ವರದಿಯನ್ನು ಇಷ್ಟು ವರ್ಷಗಳ ಕಾಲ ಮುಚ್ಚಿಟ್ಟದ್ದು ಯಾಕೆ?” ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎಂದು ಹೇಳುತ್ತಾರೆ, ಮತ್ತೊಂದು ಕಡೆ ಜಾತಿ ಗಣತಿ ಮಾಡಬೇಕು ಎನ್ನುತ್ತಾರೆ. ಜಾತಿ ಗಣತಿ ಯಾಕೆ ಅಗತ್ಯವೋ ನನಗೆ ತಿಳಿಯುತ್ತಿಲ್ಲ,” ಎಂದರು.
“ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ನಡೆಯುತ್ತಿದೆ. ಇನ್ನೂ ಒಂದು ವರ್ಷದಲ್ಲಿ ಶ್ರೀರಾಮ ಮಂದಿರದ ಕಾಮಗಾರಿ ಸಂಪೂರ್ಣವಾಗಲಿದೆ. ರಾಮ ರಾಜ್ಯದ ಸ್ಥಾಪನೆಗಾಗಿ ನಮಗೆ ರಾಮ ಮಂದಿರದ ಅಗತ್ಯವಿದೆ. ಇವತ್ತು ಪ್ರಜಾರಾಜ್ಯ ಇದ್ದರೂ, ರಾಮನ ಆದರ್ಶಗಳನ್ನು ನಾವು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ತಾಯಿಯನ್ನೂ, ತಾಯಿನಾಡನ್ನೂ ಗೌರವಿಸುವುದು ಅತಿ ಮುಖ್ಯವಾಗಿದೆ” ಎಂದು ಹೇಳಿದರು.