ಕಂಜೂಸಿ ಮಾಧ್ಯಮಗಳು ಮತ್ತು ಕಾಶ್ಮೀರದ ಸಂಕಟಗಳು

0
876

ಸನ್ಮಾರ್ಗ ಸಂಪಾದಕೀಯ

ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‍ನಲ್ಲಿ ಸೆ. 24ರಂದು 78 ಕೇಸುಗಳನ್ನು ವಿಚಾರಣೆಗೆಂದು ನಿಗದಿಯಾಗಿದ್ದುವು. ಆದರೆ ಬರೇ 11 ವಕೀಲರಷ್ಟೇ ಹೈಕೋರ್ಟ್‍ನಲ್ಲಿ ಹಾಜರಿದ್ದರು. ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸಲಾದ ಆಗಸ್ಟ್ 5ರಂದು ಹೈಕೋರ್ಟ್‍ನಲ್ಲಿ 31 ಕೇಸುಗಳು ವಿಚಾರಣೆಗೆ ಬಂದಿದ್ದುವು. ಆದರೆ, ಯಾವೊಬ್ಬ ವಕೀಲನೂ ಕೋರ್ಟ್‍ಗೆ ಹಾಜರಾಗದಿದ್ದುದರಿಂದ ಎಲ್ಲ ಪ್ರಕರಣಗಳೂ ಮುಂದೂಡಲ್ಪಟ್ಟವು. ಸದ್ಯ ಜಮ್ಮು ಮತ್ತು ಕಾಶ್ಮೀರದ ವಿವಿಧ ಕೋರ್ಟ್‍ಗಳಲ್ಲಿ ಸಕ್ರಿಯರಾಗಿರುವ ಸುಮಾರು 1050 ವಕೀಲರುಗಳ ಪೈಕಿ ಹೆಚ್ಚಿನವರೂ ಮುಷ್ಕರದಲ್ಲಿದ್ದಾರೆ. ಸಾರ್ವಜನಿಕ ಸುರಕ್ಷ ತಾ ಕಾಯ್ದೆ(PSA)ಯಡಿಯಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್‍ನ ಅಧ್ಯಕ್ಷರಾದ ಮಿಯಾಂ ಅಬ್ದುಲ್ ಕಯ್ಯೂಮ್, ಅನಂತ್‍ನಾಗ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ಫಯಾಝ್ ಅಹ್ಮದ್ ಸೌದಾಗರ್, ಬಾರಮುಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಸಲಾಮ್ ರಥರ್ ನ್ನು ಬಂಧಿಸಿರುವುದನ್ನು ಖಂಡಿಸಿ ವಕೀಲರು ಪ್ರತಿಭಟಿಸುತ್ತಿದ್ದಾರೆ. ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಜೈಲಲ್ಲಿರಿಸುವುದಕ್ಕೆ ಅವಕಾಶ ಒದಗಿಸುವ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು ಬಾರ್ ಅಸೋಸಿಯೇಶನ್ ಅಧ್ಯಕ್ಷರುಗಳ ವಿರುದ್ಧ ಹೇರಿರುವುದಕ್ಕೆ ವಕೀಲರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇನ್ನೊಂದು ಕಡೆ, ತಮ್ಮವರನ್ನು ಹುಡುಕಿ ಕೊಡಿ ಎಂದು ಆಗ್ರಹಿಸಿ 200ಕ್ಕಿಂತಲೂ ಹೆಚ್ಚು ಹೇಬಿಯಸ್ ಕಾರ್ಪಸ್ ಅರ್ಜಿಗಳು ಕೋರ್ಟ್‍ನಲ್ಲಿ ಸಲ್ಲಿಕೆಯಾಗಿದೆ. ಆದರೆ ಈ ಹೇಬಿಯಸ್ ಕಾರ್ಪಸ್ ಅರ್ಜಿಗೆ ಉತ್ತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಲಾದ ನೋಟೀಸು ಅಂಚೆ ಕಚೇರಿಯಲ್ಲೇ ಬಿದ್ದುಕೊಂಡಿದೆ. ಯಾಕೆಂದರೆ, ಅಂಚೆ ಕಚೇರಿ ಮುಚ್ಚಿಕೊಂಡಿದ್ದು ಕಾರ್ಯಾಚರಿಸುತ್ತಿಲ್ಲ…

370ನೇ ವಿಧಿಯನ್ನು ರದ್ದುಗೊಳಿಸಿ ಎರಡು ತಿಂಗಳಾಗಿರುವ ಈ ಹೊತ್ತಿನಲ್ಲಿ ಕಾಶ್ಮೀರದ ಸ್ಥಿತಿಗತಿ ಹೇಗಿದೆ ಅನ್ನುವ ಪ್ರಶ್ನೆಗೆ ಲಭ್ಯವಾಗುವ ಉತ್ತರಗಳ ಪೈಕಿ ಸಣ್ಣ ಅಂಶ ಇದು. ಮುಖ್ಯವಾಹಿನಿಯ ಮಾಧ್ಯಮಗಳ ಪೈಕಿ ಹೆಚ್ಚಿನವೂ ಇವತ್ತು ಕಾಶ್ಮೀರದ ಬಗ್ಗೆ ಗಾಢ ಮೌನಕ್ಕೆ ಜಾರಿವೆ. ಕಾಶ್ಮೀರದಲ್ಲಿ ಎಲ್ಲವೂ ಶಾಂತವಾಗಿದೆ ಅನ್ನುವುದನ್ನು ನಂಬಿಸುವ ಹತಾಶ ಯತ್ನದಲ್ಲಿ ಮುಖ್ಯವಾಹಿನಿಯ ಹಲವು ಮಾಧ್ಯಮಗಳೇ ತೊಡಗಿಸಿಕೊಂಡಿವೆ. ಪತ್ರಿಕೆಗಳಲ್ಲಿ ಕಾಶ್ಮೀರದ ಕುರಿತಾಗಿ ಕಾಲಂಗಳು ನಿಂತು ಹೋಗಿವೆ. ಸುದ್ದಿಗಳು ಕಾಣೆಯಾಗುತ್ತಿವೆ. ನಿರಂತರ ಎರಡು ತಿಂಗಳ ದಿಗ್ಬಂಧನ ಸ್ಥಿತಿಯು ಸಾಮಾನ್ಯ ಕಾಶ್ಮೀರಿಗಳ ಬದುಕಿನ ಮೇಲೆ ಏನೇನು ಪರಿಣಾಮ ಬೀರಿರಬಹುದು ಅನ್ನುವ ಪುಟ್ಟ ಕುತೂಹಲ ಮತ್ತು ಸಂಕಟದ ಯಾವ ಕುರುಹೂ ಇಲ್ಲದೇ ಪತ್ರಿಕೆಗಳು ಪ್ರಕಟವಾಗುತ್ತಿವೆ. ಕಾಶ್ಮೀರದಲ್ಲಿ ಭಯೋತ್ಪಾದಕರ ಹತ್ಯೆ ಅನ್ನುವ ಸುದ್ದಿಗೆ ಕೊಡುವ ಜಾಗ ಮತ್ತು ಖರ್ಚು ಮಾಡುವ ಪದಗಳ ಅರ್ಧಾಂಶವನ್ನೂ ಕಾಶ್ಮೀರಿಗಳ ಬವಣೆಗಾಗಿ ಖರ್ಚು ಮಾಡದ ಕಂಜೂಸಿ ಪತ್ರಿಕೆಗಳೂ ನಮ್ಮ ನಡುವೆ ಇವೆ. ಈ ನಡುವೆ ಕೆಲವು ಧೈರ್ಯಶಾಲಿ ಪತ್ರಿಕೆ ಮತ್ತು ಜಾಲತಾಣಗಳ ಕೃಪೆಯಿಂದಾಗಿ ಅಷ್ಟಿಷ್ಟು ಮಾಹಿತಿಗಳು ಬಹಿರಂಗವಾಗುತ್ತಿವೆ. ಈ ಮಾಹಿತಿಗಳೇ ಸದ್ಯದ ಕಾಶ್ಮೀರದ ಸ್ಥಿತಿ ಎಷ್ಟು ಆತಂಕಕಾರಿ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುವ 370ನೇ ವಿಧಿ ರದ್ದತಿಗಿಂತ ಮೊದಲೂ ಕಾಶ್ಮೀರಿಗಳೇನೂ ಭಾರೀ ಸುಖದಲ್ಲಿರಲಿಲ್ಲ. ಆದರೂ ಒಂದು ಬಗೆಯ ಆಶಾವಾದ ಅವರಲ್ಲಿತ್ತು. ಆದರೆ 370ನೇ ವಿಧಿಯ ರದ್ದತಿಯ ಬಳಿಕವಂತೂ ಕಾಶ್ಮೀರದಲ್ಲಿ ಭಯವಷ್ಟೇ ಉಳಿದುಕೊಂಡಿದೆ. ಈ ವರ್ಷದ ಆರಂಭದಲ್ಲಿ ಕಮ್ಯುನಿಟಿ ಮೆಂಟಲ್ ಹೆಲ್ತ್ ಪತ್ರಿಕೆಯು ಕಾಶ್ಮೀರಕ್ಕೆ ಸಂಬಂಧಿಸಿ ಸರ್ವೇ ಆಧಾರಿತ ವರದಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ, ಶೋಪಿಯಾನ ಜಿಲ್ಲೆಯ ಪ್ರತಿ ಮೂರರಲ್ಲಿ ಒಂದು ಮಗು ಮಾನಸಿಕ ಆರೋಗ್ಯ ತಪಾಸಣೆಗೆ ಅರ್ಹ ಎನ್ನಲಾಗಿದೆ. ಕಾಶ್ಮೀರ ಕಣಿವೆಯ ಒಟ್ಟು ಜನಸಂಖ್ಯೆಯ ಪೈಕಿ 18 ಲಕ್ಷ (43%) ವಯಸ್ಕರು ಮಾನಸಿಕ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದಾರೆ ಎಂದು 2015ರಲ್ಲಿ ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆಯು ಬಿಡುಗಡೆಗೊಳಿಸಿದ ವರದಿಯಲ್ಲಿ ಹೇಳಲಾಗಿತ್ತು. ಕಾನೂನು ಬಾಹಿರವಾಗಿ ಬಂಧಿಸುವುದು, ದೌರ್ಜನ್ಯವೆಸಗುವುದು, ಹಿಂಸಿಸುವುದು ಇತ್ಯಾದಿಗಳು ಕಾಶ್ಮೀರಿ ಮಕ್ಕಳನ್ನು ತೀವ್ರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಗುರಿಯಾಗಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ. 2018ರಲ್ಲಿ ಆರ್‍ಟಿಐ ಮೂಲಕ ಜಮ್ಮು-ಕಾಶ್ಮೀರ ನಾಗರಿಕ ಸಮಿತಿ ಒಕ್ಕೂಟವು (JKCCS) ಪಡೆದುಕೊಂಡ ಮಾಹಿತಿಯಂತೂ ಭಯಾನಕ. 1990ರಿಂದ 2013ರ ನಡುವೆ ನೂರಾರು ಮಕ್ಕಳು ಸಾರ್ವಜನಿಕ ಸುರಕ್ಷತಾ ಕಾಯ್ದೆ(PSA)ಯಡಿ ಬಂಧನದಲ್ಲಿದ್ದರು. ಅವರನ್ನು ಎಷ್ಟು ಅನಾಗರಿಕವಾಗಿ ನಡೆಸಿಕೊಳ್ಳಲಾಗಿತ್ತೆಂದರೆ, ಕ್ರಿಮಿನಲ್‍ಗಳು ಮತ್ತು ವಯಸ್ಕರ ಜೊತೆ ಅವರನ್ನು ಕೂಡಿ ಹಾಕಲಾಗಿತ್ತು. ಅವರ ವಯಸ್ಸನ್ನು ಅರಿತುಕೊಳ್ಳುವ ವ್ಯವಸ್ಥೆಯೂ ಇರಲಿಲ್ಲ. ನ್ಯಾಯಾಲಯದ ಮಧ್ಯಪ್ರವೇಶದಿಂದ ಇವರನ್ನು ಬಿಡುಗಡೆಗೊಳಿಸಲಾಯಿತಲ್ಲದೇ, ಇವರ ಪೈಕಿ 80% ಮಂದಿಯನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ನ್ಯಾಯಾಲಯವೇ ಹೇಳಿತ್ತು. ಇದರ ಜೊತೆಗೇ

ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ ಮಾನವ ಹಕ್ಕುಗಳಿಗಾಗಿರುವ ವಿಶ್ವಸಂಸ್ಥೆಯ ವರದಿಯನ್ನೂ ಪರಿಶೀಲಿಸುವುದು ಉತ್ತಮ. ವಿಚಾರಣೆ ಇಲ್ಲದೇ ಎರಡು ವರ್ಷಗಳ ಕಾಲ ಜೈಲಲ್ಲಿಡಬಹುದಾದ ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಕಾಶ್ಮೀರದ ಅನೇಕ ಮಕ್ಕಳನ್ನು ಲಾಕಪ್‍ನಲ್ಲಿ ಇರಿಸಲಾಗಿದೆ ಮತ್ತು ಅವರೊಂದಿಗೆ ಅತ್ಯಂತ ದುರ್ವರ್ತನೆಯಿಂದ ನಡೆದುಕೊಳ್ಳಲಾಗಿದೆ ಎಂದಿರುವ ವರದಿಯು, ಅವರ ವಯಸ್ಸನ್ನೂ ತಪ್ಪಾಗಿ ನಮೂದಿಸಲಾಗಿದೆ ಎಂದೂ ಹೇಳಿದೆ. ಸೇನಾ ಪಡೆಯ ವಿಶೇಷಾಧಿಕಾರ ಕಾಯ್ದೆ (AFSPA)ಯು ತಪ್ಪಿತಸ್ಥರಿಗೆ ಶಿಕ್ಷೆಯಾಗದಂತೆ ರಕ್ಷಣೆ ಒದಗಿಸುತ್ತಿದೆ ಎಂದೂ ಹೇಳಲಾಗಿದೆ. ನಿಜವಾಗಿ,

ದೊಡ್ಡವರ ಜಗಳದಲ್ಲಿ ಅತ್ಯಂತ ಹೆಚ್ಚು ಅನ್ಯಾಯಕ್ಕೆ ಒಳಗಾಗಿರುವುದು ಕಾಶ್ಮೀರದ ಮಕ್ಕಳು. ಕಾಶ್ಮೀರದ ಸ್ಥಿತಿಯನ್ನು ಅರಗಿಸಿಕೊಳ್ಳುವುದಕ್ಕೆ ಅವರ ಪುಟ್ಟ ಪ್ರಾಯಕ್ಕೆ ಸಾಧ್ಯವಾಗುತ್ತಿಲ್ಲ. 1990 ಮತ್ತು 2005ರ ನಡುವೆ ಕಾಶ್ಮೀರದ 46 ಶಾಲೆಗಳನ್ನು ಸೇನಾಪಡೆ ವಶಪಡಿಸಿಕೊಂಡಿದೆ ಮತ್ತು ಸುಮಾರು 400 ಶಾಲೆಗಳು ಬೆಂಕಿಗೆ ಆಹುತಿಯಾಗಿವೆ ಎಂದು 2006ರಲ್ಲಿ ಬಿಡುಗಡೆಗೊಂಡ ಮಾನವ ಹಕ್ಕುಗಳಿಗಾಗಿರುವ ಸಾರ್ವಜನಿಕ ಆಯೋಗದ ವರದಿಯು ಹೇಳಿತ್ತು. ಇದು ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ, ತಮ್ಮ ಹೆತ್ತವರು, ಸಹೋದರರು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಕಾನೂನುಬಾಹಿರ ಬಂಧನಗಳು ಮಕ್ಕಳನ್ನು ಇಂಚಿಂಚಾಗಿ ತಿವಿಯುತ್ತಿವೆ. ಅವರನ್ನು ಮಾನಸಿಕವಾಗಿ ಕೊಲ್ಲುತ್ತಿವೆ. ಇದರ ಜೊತೆ ಜೊತೆಗೇ ಆಗಸ್ಟ್ 5ರಂದು 370ನೇ ವಿಧಿಯನ್ನು ರದ್ದುಗೊಳಿಸಿದುದು ಮತ್ತು ಅದರ ಬಳಿಕದ ಕಠಿಣ ನಿರ್ಬಂಧಗಳು ಮಕ್ಕಳು ಮತ್ತು ವಯಸ್ಕರೆನ್ನದೇ ಪ್ರತಿಯೊಬ್ಬರ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಇಂಡಿಯನ್ ಫೆಡರೇಶನ್ ಆಫ್ ಇಂಡಿಯನ್ ವುಮೆನ್ಸ್ ಮತ್ತು ಇತರ ಸಂಘಟನೆಗಳು 370ನೇ ವಿಧಿ ರದ್ದಿನ ಬಳಿಕದ ಕಾಶ್ಮೀರದ ಬಗ್ಗೆ ಇತ್ತೀಚೆಗೆ ವರದಿ ಬಿಡುಗಡೆಗೊಳಿಸಿತ್ತು. ತಮ್ಮ ಮಕ್ಕಳ ಬರುವಿಕೆಯನ್ನು ಕಾಯುತ್ತಾ ಕಾಶ್ಮೀರದ ತಾಯಂದಿರು ಬಾಗಿಲಲ್ಲಿ ನಿಂತಿರುವ ದಯನೀಯ ಸ್ಥಿತಿಯನ್ನು ಅದು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ವಿಷಾದ ಏನೆಂದರೆ, ತಮ್ಮ ಮಕ್ಕಳು ಎಲ್ಲಿದ್ದಾರೆಂದೇ ಈ ತಾಯಂದಿರಿಗೆ ಗೊತ್ತಿಲ್ಲ. ಅದನ್ನು ಅರಿತುಕೊಳ್ಳುವುದಕ್ಕೆ ಪೂರಕವಾದ ಸಂವಹನ ವ್ಯವಸ್ಥೆಯೂ ಇಲ್ಲ. ಅಂದಹಾಗೆ,

370ನೇ ವಿಧಿಯನ್ನು ಕಾಶ್ಮೀರಿಗಳ ಒಳಿತಿನ ದೃಷ್ಟಿಯಿಂದ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ಪದೇ ಪದೇ ಹೇಳಿಕೊಳ್ಳುತ್ತಿದ್ದರೂ ಈ ಹೇಳಿಕೆಯನ್ನು ಸಮರ್ಥಿಸುವ ಬೆಳವಣಿಗೆಗಳು ಕಾಶ್ಮೀರದಲ್ಲಿ ಕಾಣಿಸುತ್ತಿಲ್ಲ. ಕಾಶ್ಮೀರದ ಸ್ಥಿತಿಗತಿಯನ್ನು ಹೊರಗಿನವರು ತಿಳಿದುಕೊಳ್ಳಲಾಗದಂಥ ಕಠಿಣ ಮಾಧ್ಯಮ ನಿರ್ಬಂಧವೊಂದು ಸದ್ಯ ಜಾರಿಯಲ್ಲಿದೆ. ಹೈಕೋರ್ಟ್ ಬಾರ್ ಅಸೋಸಿಯೇಶನ್‍ನ ಅಧ್ಯಕ್ಷರನ್ನೇ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟುವಂಥ ದಮನ ನೀತಿ ಅಲ್ಲಿದೆ. ಹೇಬಿಯಸ್ ಕಾರ್ಪಸ್ ಅರ್ಜಿಗಳ ವಿಲೇವಾರಿ ಆಗದಂಥ ಸ್ಥಿತಿಯಿದೆ. ಪ್ರಜಾತಂತ್ರ ದೇಶವು ತನ್ನದೇ ಭೂಪ್ರದೇಶದ ಜನರ ಮೇಲೆ ಇಷ್ಟು ಕಠಿಣವಾಗಿ ವರ್ತಿಸುವುದು ಅನ್ಯಾಯ. ಇದು ಅಪ್ರಜಾಸತ್ತಾತ್ಮಕ ಧೋರಣೆ. ಇದನ್ನು ಬೆಂಬಲಿಸಲಾಗದು.