ದೆಹಲಿ: ಹತ್ಯೆಗೊಳಗಾದ ಅಝೀಮ್ ನ ಸಹೋದರರ ಶಿಕ್ಷಣದ ಜವಾಬ್ದಾರಿ ವಹಿಸಿದ ಎಸ್.ಐ.ಓ

0
1460

ಹೊಸದಿಲ್ಲಿ: ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಸ್ಥಳೀಯ ಯುವಕರ ಗುಂಪೊಂದರಿಂದ ಕಳೆದ ಗುರುವಾರ ಹತ್ಯೆಗೊಳಗಾದ ದಾರುಲ್ ಉಲೂಮ್ ಫರೀದಿಯಾ ಮದ್ರಸಾದ ವಿದ್ಯಾರ್ಥಿ ಅಝೀಮ್ ನ ಮನೆಗೆ ಇಂದು ಭೇಟಿ ನೀಡಿದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ನಹಾಸ್ ಮಾಲಾ, ಅಝೀಮ್ ನ ಇಬ್ಬರು ಸಹೋದರರ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಎಸ್.ಐ.ಓ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಹರಿಯಾಣದ ಮೇವಾಟ್ ನಲ್ಲಿರುವ ಮೃತ ವಿದ್ಯಾರ್ಥಿ ಅಝೀಮ್ ನ ಮನೆಗೆ ಇಂದು ಭೇಟಿ ನೀಡಿದ ಬಳಿಕ ಈ ವಿಷಯವನ್ನು ಅವರು ತಿಳಿಸಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ ನಹಾಸ್ ಮಾಲಾ, ”ಮೇವತ್ ನಲ್ಲಿರುವ ಅಝೀಮ್ ನ ಮನೆಗೆ ಭೇಟಿ ಕೊಟ್ಟೆವು. ಅಝೀಮ್ ನ ಇಬ್ಬರು ಸಹೋದರರಾದ ಮುಸ್ತಫಾ ಹಾಗೂ ಮುಸ್ತಖೀಮ್ ನ ಸ್ನಾತಕೋತ್ತರ ಶಿಕ್ಷಣದವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಎಸ್.ಐ.ಓ. ನೋಡಿಕೊಳ್ಳುತ್ತದೆ” ಎಂದು ತಿಳಿಸಿದ್ದಾರೆ.

ಈ ಮಧ್ಯೆ ಅರವಿಂದ್ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರಕಾರವು ಅಝೀಮ್ ನ ಕುಟುಂಬಕ್ಕೆ ರೂ. 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದೆ.

ದೆಹಲಿಯ ದಾರುಲ್ ಉಲೂಮ್ ಫರೀದಿಯಾ ಮದ್ರಸಾದ ವಿದ್ಯಾರ್ಥಿಯಾಗಿದ್ದ ಅಝೀಮ್, ತನ್ನ ಇತರ ಸಹಪಾಠಿಗಳೊಂದಿಗೆ ಕಳೆದ ಗುರುವಾರ ಮದ್ರಸಾದ ಬಳಿ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಸ್ಥಳೀಯ ಯುವಕರ ಗುಂಪೊಂದು ಅಝೀಮ್ ನನ್ನು ಮೈದಾನದಲ್ಲಿ ದೂಡಿದ ಪರಿಣಾಮವಾಗಿ ಪ್ರಜ್ಞಾಹೀನನಾದ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು. ಈ ಘಟನೆಯ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿಯ ಪೊಲೀಸರು, ಸ್ಥಳೀಯ ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

ಖಾಲಿಯಾದ ಮದ್ಯದ ಬಾಟಲಿಗಳನ್ನು ಎಸೆಯುವ ಮೂಲಕ ಕೆಲವು ಸ್ಥಳೀಯ ನಿವಾಸಿಗಳು ಮದ್ರಸಾದ ವಿದ್ಯಾರ್ಥಿಗಳಿಗೆ ಹಾಗೂ ಮದ್ರಸಾಕ್ಕೆ ನಿರಂತರ ತೊಂದರೆ ನೀಡುತ್ತಿದ್ದುದಾಗಿ ಮದ್ರಸಾದ ಅಧ್ಯಾಪಕರು ಆರೋಪಿಸಿದ್ದಾರೆ.