ಬದಾಯೂನ್(ಉತ್ತರಪ್ರದೇಶ), ಎ. 21: ನಕಲಿ ಮತದಾನ ನಡೆಸುವಂತೆ ಉತ್ತರಪ್ರದೇಶ ಬಿಜೆಪಿ ಅಭ್ಯರ್ಥಿ ಸಂಘಮಿತ್ರ ಮೌರ್ಯ ಹೇಳಿದ್ದಾರೆ. ಪಾರ್ಟಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಈ ರೀತಿ ಮಾಡುವಂತೆ ಪಾರ್ಟಿ ಕಾರ್ಯಕರ್ತರಿಗೆ ಕರೆನೀಡಿದ್ದಾರೆ. ಇದರ ವೀಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
‘ಒಂದು ವೋಟು ಕೂಡ ವೇಸ್ಟ್ ಆಗಬಾರದು, ಯಾರಾದರೂ ಮತದಾನಕ್ಕೆ ಬರದಿದ್ದರೆ ಅವರ ಹೆಸರಿನಲ್ಲಿ ನಕಲಿ ಮತದಾನ ಮಾಡಿರಿ. ಅದು ಎಲ್ಲ ಕಡೆಯೂ ನಡೆಯುತ್ತದೆ. ಮೊದಲೇ ಹೀಗೆ ಮಾಡಬೇಕಾಗಿಲ್ಲ. ಆದರೆ, ಸಂದರ್ಭ ಸಿಕ್ಕರೆ, ಯಾರಿಗೂ ಗೊತ್ತಾಗದ ರೀತಿಯಲ್ಲಿ ನಕಲಿ ವೋಟು ಹಾಕಿ’ ಎಂದು ಸಂಘಮಿತ್ರ ಮೌರ್ಯ ಹೇಳಿದರು. ಸಂಘಮಿತ್ರ ಹೀಗೆ ಹೇಳಿದ್ದು ತಮ್ಮ ಅರಿವಿಗೆ ಬಂದಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ದಿನೆಶ್ ಕುಮಾರ್ ಸಿಂಗ್ ಹೇಳಿದರು. ಸಂಘಮಿತ್ರ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಸ್ವಾಮಿ ಪ್ರಸಾದ ಮೌರ್ಯರ ಪುತ್ರಿಯಾಗಿದ್ದಾರೆ.