ಯುವ ಪೀಳಿಗೆಯನ್ನು ವ್ಯಸನದತ್ತ ತಳ್ಳುವ ಹುನ್ನಾರ: ಸರ್ಕಾರದ ಮದ್ಯ ನೀತಿ ವಿರೋಧಿಸಿ ವೆಲ್ಫೇರ್ ಪಾರ್ಟಿ ಪ್ರತಿಭಟನೆ

0
223

ಸನ್ಮಾರ್ಗ ವಾರ್ತೆ

ಭಟ್ಕಳ: ಅಬಕಾರಿ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಯುವ ಪೀಳಿಗೆಯನ್ನು ಮದ್ಯ ವ್ಯಸನಕ್ಕೆ ತಳ್ಳಲು ಯತ್ನಿಸುತ್ತಿದೆ. ಸರ್ಕಾರದ ಈ ನಡೆಯನ್ನು ಖಂಡಿಸಿ ನಗರದ ಶಮ್ಸುದ್ದೀನ್ ಸರ್ಕಲ್ ಬಳಿ ಇರುವ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ವೆಲ್ಫೇರ್ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಈಗಾಗಲೇ ಕುಡಿತದ ಚಟವು ಹಲವಾರು ಕುಟುಂಬಗಳನ್ನು ಬೀದಿ ಪಾಲು ಮಾಡಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಬದಲು, ಯುವಕರನ್ನು ವ್ಯಸನಕ್ಕೆ ದೂಡಿ ಅರಾಜಕತೆ ಸೃಷ್ಟಿಸುವ ಹುನ್ನಾರಕ್ಕೆ ವೆಲ್ಫೇರ್ ಪಾರ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದೆ‌.

ಕೂಡಲೇ ಸರಕಾರ ಕರ್ನಾಟಕ ಅಬಕಾರಿ ಪರವಾನಿಗೆ ನಿಯಮಗಳು 1967ರ ವಿಧೇಯಕಕ್ಕೆ ತಿದ್ದುಪಡಿ ತರುವ ವಿಚಾರವನ್ನು ಕೈ ಬಿಡಬೇಕು. ರಾಜ್ಯದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷ
ಫಾರೂಕ್ ಶೇಕ್, ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಕ್, ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಅಸದಿ, ಮುಖಂಡರಾದ ಅಬ್ದುಲ್ ಮಾಜಿದ್ ಕೋಲಾ, ಜಹೂರ್ ಲಾಟ್, ಕಮ್ರುದ್ದೀನ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.