ಎಚ್.ಐ.ಎಫ್ ಇಂಡಿಯಾ ಮೆಡಿಕಲ್ ಸೆಲ್ ವತಿಯಿಂದ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆ

0
171

ಸನ್ಮಾರ್ಗ ವಾರ್ತೆ

ಮಂಗಳೂರು: ಎಚ್.ಐ.ಎಫ್ ಇಂಡಿಯಾ ಮೆಡಿಕಲ್ ಸೆಲ್ ವತಿಯಿಂದ ನೂತನ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು. ಇಂದೋರಿನ ಉದ್ಯಮಿ ಮೊಹಮ್ಮದ್ ನಯೀಮ್ ಚಾರ, ಏ.ಕೆ ಸಮೂಹದ ನಿರ್ದೇಶಕ ನಿಯಾಝ್ ಏ.ಕೆ, ಉದ್ಯಮಿ ಭಾಷಾ ಹಸನಬ್ಬ‌ರವರು ಎಹ್ಸಾನ್ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಂಬ್ಯುಲೆನ್ಸ್‌ನ್ನು ಲೋಕಾರ್ಪಣೆಗೈದರು.

ಮತ್ತೋರ್ವ ಮುಖ್ಯ ಅತಿಥಿ ಬಾವ ವಿಷ್ಮಿಲ್‌ನ ನಿರ್ದೇಶಕರಾದ ರಿಯಾಝ್ ಬಾವರವರು ಬಹಳ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಐ.ಎಫ್‌ನ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಮತ್ತು ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.

ಕಳೆದ 10 ವರ್ಷದಿಂದ ಸಮಾಜದ ನಾನಾ ವಿಭಾಗದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವ ಎಚ್.ಐ.ಎಫ್ ಇಂಡಿಯಾ ಸಂಸ್ಥೆಯು ನೂತನ ಉಚಿತ ಆಂಬುಲೆನ್ಸ್ ಸೇವಯನ್ನು ಪ್ರಾರಂಭಿಸಿದ್ದು, ಸಂಸ್ಥೆಯ ವತಿಯಿಂದ ರೋಗಿಗಳಿಗೆ ವೀಲ್ ಚೇರ್, ವಾಕರ್, ಮೆಡಿಕೇಟೆಡ್ ಕಾಟ್ (ಮಂಚ), ಆಕ್ಸಿಜನ್ ಸಿಲಿಂಡರ್, ಆಕ್ಸಿಜನ್ ಕಾನ್ಸಂಟ್ರೇಟರ್, ಆಕ್ಸಿ ಮೀಟರ್ ಸೇರಿದಂತೆ ಇತರ ಮೆಡಿಕಲ್ ಉಪಕರಣಗಳನ್ನು ಉಪಯೋಗಿಸಿ ಹಿಂದಿರುಗಿಸುವಂತಹ ಯೋಜನೆ ಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ.

ಇದಲ್ಲದೆ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರ, ಅನಾಥ ನಿರ್ಗತಿಕ ಮಕ್ಕಳಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ಎಚ್‌.ಐ.ಎಫ್ ನಡೆಸುತ್ತಿದೆ. ಆಂಬುಲೆನ್ಸ್ ಸೇವೆಯು ಮಂಗಳೂರನ್ನು ಕೇಂದ್ರವಾಗಿಟ್ಟು 50 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಎಂದು ಎಚ್.ಐ.ಎಫ್ ಇಂಡಿಯಾದ ರಿಜ್ವಾನ್ ಪಾಂಡೇಶ್ವರ್ ತಿಳಿಸಿದ್ದಾರೆ.

ಎಚ್.ಐ.ಎಫ್ ಇಂಡಿಯಾ ಅಧ್ಯಕ್ಷ ನಝೀಮ್ ಏ.ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಹ್ಸಾನ್ ಮಸೀದಿಯ ಕತೀಬ್ ಮೌಲಾನ ತಯ್ಯಬ್ ರವರು ದುಆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮರ್ಹೂಮ್ ಎಸ್, ಎಂ ಬಶೀರ್ ರವರ ಸೇವೆ ಮತ್ತು ಅವರ ಸಮುದಾಯ ಮೇಲಿರುವ ಕಾಳಜಿಯನ್ನು ನೆನಪಿಸಲಾಯಿತು. ನಝೀಮ್ ಎಸ್ ಎಸ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.