ಆ ಪತ್ರಕರ್ತರಿಗೆ ದೊರೆತಿರುವುದು ಶಿಕ್ಷೆಯಲ್ಲ, ಪುರಸ್ಕಾರ

0
769

ರೋಹಿಂಗ್ಯನ್ ಮುಸ್ಲಿಮರು ಸುದ್ದಿಯಾಗಿದ್ದು ಕಳೆದ ವರ್ಷ ಆಗಸ್ಟ್-ಸೆಪ್ಟಂಬರ್ ನಲ್ಲಿ ಬರ್ಮದ ಸೈನಿಕರು ಮತ್ತು ಬುದ್ಧ ಭಯೋತ್ಪಾದಕರು ಸೇರಿ ಅವರನ್ನು ಸಾಮೂಹಿಕ ಕೊಂದು ಹಾಕಲು ತೊಡಗಿದ ನಂತರವಾಗಿತ್ತು. ಈ ಸಾಮೂಹಿಕ ಕಗ್ಗೊಲೆಯಲ್ಲಿ ಹತ್ತು ಲಕ್ಷ ರೋಹಿಂಗ್ಯನ್ನರು ಮ್ಯಾನ್ಮಾರ್‍ನಿಂದ ಅರಣ್ಯದ ದಾರಿಮೆಟ್ಟಿ ಬೆಟ್ಟ ಏರಿ ಹೊಳೆದಾಟಿ ಬಾಂಗ್ಲಾ ದೇಶಕ್ಕೆ ಓಡಿಬಂದಿದ್ದರು. ಈ ದುರ್ಗಮ ಪ್ರಯಾಣದಲ್ಲಿ ನೂರಾರು ಮಂದಿ ಅಸುನೀಗಿದ್ದರು. ಅದು ಹಸಿವು ಮತ್ತು ಅನಾರೋಗ್ಯಗಳಿಂದ. ಇನ್ನು ಅವರು ಮ್ಯಾನ್ಮಾರ್ ನಲ್ಲಿದ್ದರೆ ಯಮಕಿಂಕರರಂತೆ ಯಾವ ಕ್ಷಣಕ್ಕೂ ಬರುವ ಸೇನೆಯ ಜವಾನರು ಕೋವಿಯೆತ್ತಿ ಎದೆಗೆ ಗುರಿಯಿಟ್ಟು ನಿಂತಿರುತ್ತಾರೆ. ಅಲ್ಲಿಯೂ ಇವರಿಗೆ
ಸಾವೇ ಗತಿ. ಇಂತಹ ರೋಹಿಂಗ್ಯನ್ನರ ಕುರಿತು ಧ್ವನಿಯೆತ್ತಬಾರದೇ? ಮಾತಾಡಬಾರದೆ? ರಾಯಿಟರ್ಸ್‍ನ ಇಬ್ಬರು ಪತ್ರಕರ್ತರನ್ನು ‘ಅಧಿಕ ಪ್ರಸಂಗ ಮಾಡಬೇಡಿ’ ಎಂದು ಮ್ಯಾನ್ಮಾರ್ ಸರಕಾರ ಎಚ್ಚ ರಿಕೆ ರವಾನಿಸಿತು. ಈ ಮಾನವೀಯ ಕಾಳಜಿಯ ಇಬ್ಬರು ವ್ಯಕ್ತಿಗಳನ್ನು ಅಲ್ಲಿನ ಕೋರ್ಟು ಶಿಕ್ಷಿಸುವ ಮೂಲಕ ದೌರ್ಜನ್ಯದ ಪರ ತಾನೂ ಇದ್ದೇನೆಂದು ತೋರಿಸಿಕೊಟ್ಟಿತು.

ಮ್ಯಾನ್ಮಾರ್‍ನಲ್ಲಿ ರೋಹಿಂಗ್ಯನ್ನರ ನರಮೇಧ ನಡೆದಾಗ ಅಲ್ಲಿನ ಸುದ್ದಿ ಗಳನ್ನು ಹೊರತಂದದ್ದು ಅಲ್ಲಿನವರೇ ಆದ ಇಬ್ಬರು ಯುವ ಪತ್ರಕರ್ತರು. ಮ್ಯಾನ್ಮಾರ್ ಸೇನೆ ಮತ್ತು ಬುದ್ಧ ಭಯೋತ್ಪಾದಕರ ನರಬೇಟೆಯನ್ನು ರಾಯಿಟರ್ಸ್‍ನ ವರದಿಗಾರರಾದ ವಾಲಾನ್(32) ಮತ್ತು ಕ್ಯಾವ್ ಸೊ ಈ(28) ಹೊರ ಜಗತ್ತಿಗೆ ತಿಳಿಸುತ್ತಿದ್ದರು. ಅವರನ್ನು ಕಳೆದ ವರ್ಷ ಡಿಸೆಂಬರ್ ನಲ್ಲಿ ಮ್ಯಾನ್ಮಾರ್ ಪೊಲೀಸರು ಬಂಧಿಸಿದರು. ಅಧಿಕೃತ ರಹಸ್ಯವನ್ನು ಹೊರಗೆಡಹಿದರು ಎಂದು ಇವರ ಮೇಲೆ ಆರೋಪ ಹೊರಿಸಲಾಯಿತು. ಈಗ ಅಲ್ಲಿನ ಕೋರ್ಟು ಏಳು ವರ್ಷ ಶಿಕ್ಷೆಗೀಡು ಮಾಡಿದೆ.

ಈ ಶಿಕ್ಷೆಯನ್ನು ದಿಟ್ಟ ವರದಿಗಾರರಿಬ್ಬರು ಪುರಸ್ಕಾರ ಪ್ರಶಸ್ತಿ ಯೆಂಬಂತೆ ಅನುಮೋದಿಸಿ ನಗು ನಗುತ್ತಾ ಜೈಲಿನ ಕಂಬಿಯೆಣಿಸಲು ಹೋದರು ಬಿಡಿ. ಮ್ಯಾನ್ಮಾರ್ ಸೈನ್ಯ ರೋಹಿಂಗ್ಯನ್ ಸಾಮಾನ್ಯರನ್ನು ಹುಟ್ಟಡ ಗಿಸಿದ ಕತೆ ಜಗತ್ತಿನ ಮುಂದೆ ಬಿಚ್ಚಿಟ್ಟರಲ್ಲ, ಇದಕ್ಕಾಗಿ ಅವರನ್ನು ಸನ್ಮಾನಿಸಲು ಹೊರ ಜಗತ್ತು ಕಾದುನಿಂತಿದೆ.
ಆಡಳಿತಗಾರರು ಒಂದು ವಿಭಾಗ ವನ್ನು ಬಾಳೆಗಿಡದಂತೆ ದಿಂಡುರುಳಿಸಿದ್ದನ್ನು ಮುಚ್ಚಿಡುವುದು ಗೌಪ್ಯ ಪಾಲನೆಯೇ? ಹೌದೆಂದು ಇತಿಹಾಸದ ಎಲ್ಲ ಮರ್ದಕ ಆಡಳಿತಗಾರರು ನಿರೂಪಿಸಿ ಕಪ್ಪುಪಟ್ಟಿಗೆ ಸೇರಿದ್ದಾರೆ. ನೋಬೆಲ್ ಪಾರಿತೋಷಕ ಪಡೆದ ಆಂಗ್‍ಸಾನ್ ಸೂಕಿ ಕೂಡ. ಕೈಕಟ್ಟಿ ಕೂತು ರೋಹಿಂಗ್ಯನ್ನರ ಸಾವನ್ನು ಸಂಭ್ರಮಿಸಿದರು ಎನ್ನದೆ ವಿಧಿಯಿಲ್ಲ. ಶಾಂತಿಗಾಗಿ ಅವರಿಗೆ ನೋಬೆಲ್ ಸಿಕ್ಕಿತು. ಆದರೆ ಅವರ ಮನಸ್ಸಿ ನೊಳಗೆ ಎಂತಹ ಕ್ರೌರ್ಯ ತುಂಬಿ ಕೊಂಡಿದೆ ಎನ್ನುವುದು ರೋಹಿಂಗ್ಯ ನ್ನರ ಹತ್ಯೆಯ ವೇಳೆ ಸಾಬೀ ತಾಯಿತು. ಎಲ್ಲೆಡೆ ಛೀಮಾರಿಯನ್ನು ಅನುಭವಿಸಿದರು.

ಹಾಗಿದ್ದರೆ ರೋಹಿಂಗ್ಯನ್ನರ ಬಗ್ಗೆ ಮಾತೇ ಆಡಬಾರದೆ? ಸೂಕಿಯ ನೋಬೆಲ್ ಅದನ್ನೇ ಪ್ರತಿನಿಧಿಸುತ್ತಿದೆ. ಹಾಗಲ್ಲವಲ್ಲ ಎಂದು ಹೇಳಿದರೆ ದೌರ್ಜನ್ಯ ಹಿಂಸೆಗೆ ಶಾಂತಿ ಎನ್ನುವ ಇನ್ನೊಂದು ಅರ್ಥವನ್ನು ಹೊಸದಾಗಿ ಸೇರಿಸಬೇಕಾದೀತು.
ಹೌದಲ್ಲ, ಇತ್ತೀಚೆಗೆ ಜಗತ್ತಿನಲ್ಲಿ ಅತಿಹೆಚ್ಚು ದೌರ್ಜನ್ಯಕ್ಕೊಳಗಾದವ ರಲ್ಲಿ ಒಂದು ವಿಭಾಗ ರೋಹಿಂಗ್ಯನ್ನ ರದ್ದು. ಆಮ್ನೆಸ್ಟಿ ಇಂಟರ್‍ನ್ಯಾಶನಲ್ ಹೀಗೆಂದೇ ಮ್ಯಾನ್ಮಾರ್ ರಾಖೈನ್ ಪ್ರಾಂತದಲ್ಲಿ ವಾಸಿಸುವ ರೋಹಿಂಗ್ಯನ್ನರ ಕುರಿತು ಷರಾ ಬರೆದಿದೆ. ಈ ಜನವಿಭಾಗದ ವಿರುದ್ಧ ದಶಕಗಳಿಂದ ಸೇನಾಡಳಿತ ಮತ್ತು ಅಲ್ಲಿನ ಬುದ್ಧ ತೀವ್ರವಾದಿಗಳು ನಿರಂತರ ದೌರ್ಜನ್ಯ ಎಸಗುತ್ತಾ ಬಂದರು. ಜಗತ್ತಿಗೆ ಬಹಳ ತಡವಾಗಿ ತಿಳಿಯಿತು.

ಬಡವರು, ದುರ್ಬಲರ ಮೇಲೆ ಸವಾರಿ ಮಾಡಿದ ಮ್ಯಾನ್ಮಾರ್ ಸರಕಾರ ವನ್ನು ಇಸ್ರೇಲ್, ಅಮೆರಿಕ ಬೆಂಬಲಿಸು ತ್ತಿದೆ. ರಾಯಿಟರ್ಸ್ ವರದಿಗಾರರಿಬ್ಬರ ಶ್ರಮಫಲವಲ್ಲದಿದ್ದರೆ ರೋಹಿಂಗ್ಯದಿಂದ ಮುಸ್ಲಿಮರು ಬಾಂಗ್ಲಾದೇಶಕ್ಕೆ ಓಡಿ ಬರದಿರುತ್ತಿದ್ದರೆ ಜಗತ್ತಿಗೆ ಮ್ಯಾನ್ಮಾರ್ ಆಡಳಿತಾತ್ಮಕ ದಮನದ ಕತೆ ತಿಳಿಯುತ್ತಿರಲಿಲ್ಲ. ಮುಸ್ಲಿಮರ ಕುರಿತು ಮ್ಯಾನ್ಮಾರ್‍ನಲ್ಲಿ ಅಲ್ಲಿನ ಸರಕಾರವೇ ಬುದ್ಧ ಧರ್ಮೀಯರ ನಡುವೆ ಪೂರ್ವ ಗ್ರಹವನ್ನು ಬೆಳೆಸಿತು. ಇದರ ಪ್ರತಿಫಲವಾಗಿ ಗ್ರಾಮಕ್ಕೆ ಗ್ರಾಮವನ್ನೇ ನಾಶಪಡಿಸಿ ಅಲ್ಲಿದ್ದ ಮುಸ್ಲಿಮರನ್ನು ಕೊಲ್ಲಲಾಯಿತು. ಉಳಿದವರು ಜೀವ ಭಯದಿಂದ ಬಾಂಗ್ಲಾದೇಶಕ್ಕೆ ಓಡಿ ಬಂದು ನಿರಾಶ್ರಿತ ಶಿಬಿರದಲ್ಲಿ ಕೊಳೆಯಬೇಕಾಗಿದೆ.

ಒಂದು ಕಾಲದಲ್ಲಿ ತಮ್ಮದೇ ಬದುಕು ಕಟ್ಟಿ ತಮ್ಮದೇ ರೀತಿಯಲ್ಲಿ ಬದುಕಿದ ಜನತೆಯ ಇಂದಿನ ಸ್ಥಿತಿ ಎಷ್ಟು ದಾರುಣ! ಹೌದು ಈ ಸ್ಥಿತಿ ಯಾರಿಗೂ ಯಾವಾಗ ಬೇಕಾದರೂ ಬಂದಪ್ಪಳಿಸಬಹುದು. ಸರ್ವಾಧಿಕಾರಿಗಳ ಅಂತ್ಯದಿನಗಳು ಖಂಡಿತ ಈ ಬಡಜನರ ದಯನೀಯ ಸ್ಥಿತಿಯಿಂದಲೂ ಕೀಳಾಗಬಹುದು ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ ನುಡಿಯುತ್ತಿದೆ. ಚಕ್ರವರ್ತಿ ಫರೋವ ಫೆಲೆಸ್ತೀನಿಯರನ್ನು ದಮನಿಸಿ ನೀರಲ್ಲಿ ಮುಳುಗಿ ಮಣ್ಣಾಗಿ ಹೋದ. ಹಣ ಮದದಲ್ಲಿ ಮೆರೆದ ಸರದಾರ ಕಾರೂನ್ ಭೂಮಿಯಡಿ ಹೂತು ಹೋದ. ಹೀಗೆ ಇತಿಹಾಸವನ್ನು ಹುಡುಕುತ್ತಾ ಹೋದರೆ ದೌರ್ಜನ್ಯಕೋರರು ದುರಂತ ಅಂತ್ಯ ಕಂಡಿದ್ದರು ಎನ್ನುವುದು ನಮಗೆ ತಿಳಿಯುತ್ತದೆ.

ವಿಶ್ವಕ್ಕೆ ಪ್ರಜಾಪ್ರಭುತ್ವದ ಪಾಠ ಕಲಿಸುತ್ತಿರುವ ಪಾಶ್ಚಾತ್ಯರು ಮತ್ತು ಅಮೇರಿಕವು ಮ್ಯಾನ್ಮಾರ್ ಸೇನೆಯ ದುರಾಡಳಿತದ ವಿರುದ್ಧ ಧ್ವನಿಯೆತ್ತು ವಲ್ಲಿ ವಿಫಲವಾಯಿತು. ಬರ್ಮದ ಸೇನೆಯಿಂದಾಗುತ್ತಿರುವ ದೌರ್ಜನ್ಯಕ್ಕೆ ತಡೆಹೇರಲು ಅವು ವಿಫಲವಾಯಿತು. ಇವೆಲ್ಲವನ್ನು ಬರ್ಮದಿಂದ ಹೊರ ಬಂದ ಸುದ್ದಿಗಳು, ವರದಿಗಳು ಅನಾವರಣಗೊಳಿಸಿದ್ದು, ಬಾಂಗ್ಲಾದೇಶದ ನಿರಾಶ್ರಿತರ ಶಿಬಿರ ಕೂಡ ರೋಹಿಗ್ಯನ್ನರಿಗೆ ಸುಖದ್ದಲ್ಲ. ಅಲ್ಲಿ ಶುಚಿತ್ವವಿಲ್ಲದೆ ಈ ಜನ ರೋಗಕ್ಕೆ ತುತ್ತಾಗುತ್ತಿದ್ದಾರೆ. ಹೀಗಿದ್ದೂ ಕ್ರೌರ್ಯ ಎಸಗುವ ಮ್ಯಾನ್ಮಾರ್ ದುಷ್ಟ ಸರ ಕಾರದ ಮೇಲೆ ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರುತ್ತಿಲ್ಲ. ರೋಹಿಂಗ್ಯನ್ನರು ಬದುಕುಳಿಯಲೇ ನಾಲಾಯಕ್ಕು ಎಂದು ಇವರು ತೀರ್ಮಾನಿಸಿದ್ದಾರೆಯೇ ರೋಹಿಂಗ್ಯನ್ನ ರಿಗೆ ಮ್ಯಾನ್ಮಾರ್ ಪೌರತ್ವ ನೀಡಲೇ ಇಲ್ಲ. ಪೌರತ್ವವನ್ನೇ ಅಳಿಸಿ ಹಾಕಿ ನಿರಾಶ್ರಿತಗೊಳಿಸಿದಾಗಲೂ ಅಂತಾ ರಾಷ್ಟ್ರೀಯ ಸಮುದಾಯ ಮೌನ ವಹಿಸಿತು. ಇಂತಹ ಮೌನಗಳಿಂದಾಗಿ ಮ್ಯಾನ್ಮಾರ್ ಸೇನಾಡಳಿತಗಾರರು ಕೊಬ್ಬಿದರು. ಪರಿಸ್ಥಿತಿ ಹೀಗಿದೆ. ಆದ್ದರಿಂದ ಆ ದಮನಕ್ಕೊಳಗಾದ ಜನರ ಭವಿಷ್ಯ ಅತಂತ್ರದಲ್ಲಿಯೇ ಮುಂದುವರಿಯುತ್ತಿದೆ. ನಿರಾಶ್ರಿತರಾದ ಜನರ ಹೊಟ್ಟೆಬಟ್ಟೆ ತುಂಬಿಸಲು ನಮ್ಮಲ್ಲಿ ಬಹಳಷ್ಟು ಸ್ವಯಂಸೇವಾ ಸಂಸ್ಥೆಗಳಿವೆ.

ರೋಹಿಂಗ್ಯನ್ನರ ನಿಟ್ಟಿನಲ್ಲಿಯೂ ಅವರ ಹೊಟ್ಟೆ ಬಟ್ಟೆಗೆ ಕಷ್ಟವಾಗದಂತೆ ದುಡಿಯುವವರು ಇದ್ದಾರೆ. ಒಂದುವೇಳೆ ಇವರಿಂದ ರೋಹಿಂಗ್ಯನ್ನರ ಪರ ರಾಜಕೀಯವಾಗಿ ಏನು ಮಾಡಿ ಕೊಡಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏನೂ ಇಲ್ಲ ಎಂದು ಮಾತ್ರ ಹೇಳಬಹುದು. ಒಂದು ಜನವಿಭಾಗ ರಾಜಕೀಯ ಬಲಾಢ್ಯತೆ ಪಡೆದುಕೊಳ್ಳದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ರೋಹಿಂಗ್ಯನ್ ಮುಸ್ಲಿಮರು ಇತ್ತೀಚೆಗಿನ ದೊಡ್ಡ ಉದಾಹರಣೆ ಯಾಗಿದ್ದಾರೆ. ರೋಹಿಂಗ್ಯನ್ನರ ಬದುಕು ಎಂದು ಹಸನಾದೀತು ಗೊತ್ತಿಲ್ಲ. ಎಲ್ಲ ಮರ್ದಕರು ವಿಫಲರಾಗುವುದು ಶತ ಸಿದ್ಧಸತ್ಯ. ಆದ್ದರಿಂದ ಅವರ ಬದುಕಿ ನಲ್ಲಿ ಹೊಸ ಸೂರ್ಯ ಹುಟ್ಟ ಬಹುದೆನ್ನುವ ನಿರೀಕ್ಷೆ ಬತ್ತುವುದಿಲ್ಲ. ಸೇನೆಯ ದೌರ್ಜನ್ಯವನ್ನು ಹೊರ ಜಗತ್ತಿಗೆ ವರದಿ ಮಾಡಿದ ರಾಯಿ ಟರ್ಸ್‍ನ ಪತ್ರಕರ್ತರಿಬ್ಬರು ಕೂಡಾ ಅಪಾರ ನಿರೀಕ್ಷೆ ಹುಟ್ಟಿಸಿದ್ದಾರೆ.