ಸನ್ಮಾರ್ಗ ವಾರ್ತೆ
ಭೋಪಾಲ,ಡಿ.31: ಮಧ್ಯಪ್ರದೇಶದಲ್ಲಿ 150 ರೈತರಿಗೆ ನಕಲಿ ಚೆಕ್ ನೀಡಿ ಮೋಸ ಮಾಡುವ ಮೂಲಕ ಐದು ಕೋಟಿ ರೂ. ಮೌಲ್ಯದ ಬೆಳೆಗಳನ್ನು ದೋಚಲಾಗಿದೆ ಎಂಬುದಾಗಿ ನಾಲ್ಕು ಜಿಲ್ಲೆಗಳ ರೈತರಿಂದ ದೂರು ಲಭಿಸಿದೆ. ರೈತರಿಂದ 2,600 ಕ್ಷಿಂಟಲ್ ಬೆಳೆಗಳನ್ನು ನಕಲಿ ಚೆಕ್ ನೀಡಿ ಮೋಸ ಮಾಡಲಾಗಿದೆ ಎಂದಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಕೃಷಿ ಸಚಿವ ಕಮಲ್ ಪಟೇಲ್ರ ಕ್ಷೇತ್ರದ ರೈತರು ಮೋಸಕ್ಕೊಳಗಾದವರು. ಕೃಷಿ ಕಾನೂನು ಜಾರಿಗೊಳಿಸುವ ಮೂಲಕ ಮಂಡಿಗಳಿಲ್ಲದ್ದರಿಂದ ರೈತರು ತಮ್ಮ ಬೆಳೆಗಳನ್ನು ನೇರವಾಗಿ ಕೊಡಬಹುದು ಎಂಬ ಬಿಜೆಪಿ ವಾದಕ್ಕೆ ಇದು ಒಂದು ಹಿನ್ನಡೆಯಾಗಿದೆ.
22ರಷ್ಟು ರೈತರು ದೆವಸದ ಸಬ್ ಡಿವಿಷನ್ ಮ್ಯಾಜಿಸ್ಟ್ರೇಟ್ ಕಚೇರಿಗೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಸಮಯ ಮೀರಿದ ಲೈಸೆನ್ಸ್ ಉಪಯೋಗಿಸಿ ವ್ಯಾಪಾರಿಗಳು ರೈತರೊಂದಿಗೆ ವ್ಯಾಪಾರ ಕುದುರಿಸಿದ್ದರು. ಬೆಳೆಗಳಿಗೆ ಕೊಟ್ಟ ಚೆಕ್ ಬೌನ್ಸ್ ಆದ ಬಳಿಕ ತಾವು ಮೋಸ ಹೋಗಿದ್ದು ರೈತರಿಗೆ ಗೊತ್ತಾಗಿದೆ. ಮಂಡಿಗಳೊಂದಿಗೆ ಸಂಪರ್ಕಿಸಿದಾಗ ಇಂತಹ ವ್ಯಾಪಾರಿಗಳ ಯಾವ ವಿವರವೂ ಲಭ್ಯವಿಲ್ಲ ಎಂದು ತಿಳಿದು ಬಂದಿತ್ತು.