ಮುಸ್ಲಿಮರು ಮತ ಹಾಕದಂತೆ ತಡೆಯುವ ಯತ್ನ: ಉತ್ತರ ಪ್ರದೇಶ ಪೊಲೀಸರ ವಿರುದ್ಧ ಗಂಭೀರ ಆರೋಪ

0
381

ಸನ್ಮಾರ್ಗ ವಾರ್ತೆ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಒಟ್ಟು ದೇಶದಾದ್ಯಂತ 94 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆಯು ಮಂಗಳವಾರ ಬೆಳಗ್ಗಿನಿಂದ ಆರಂಭವಾಗಿತ್ತು. 94 ಕ್ಷೇತ್ರಗಳ ಪೈಕಿ ಗುಜರಾತ್‌ನ ಸೂರತ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಘೋಷಿಸಲಾಗಿದೆ.

ಉಳಿದಂತೆ ಇಂದು ನಡೆಯುತ್ತಿರುವ 93 ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದ 10 ಕ್ಷೇತ್ರಗಳೂ ಕೂಡ ಒಳಗೊಂಡಿದೆ. ಉತ್ತರ ಪ್ರದೇಶದ ಕೆಲವು ಲೋಕಸಭಾ ಕೇತ್ರಗಳಲ್ಲಿರುವ ಮುಸ್ಲಿಂ ಮತದಾರರನ್ನು ಮತದಾನ ಮಾಡದಂತೆ ಪೊಲೀಸರು ತಡೆದಿರುವ ಕುರಿತು ಗಂಭೀರ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಕೆಲವೊಂದು ವಿಡಿಯೋಗಳು ಹರಿದಾಡಿದ್ದು, ʼನಾವು ಮತ ಹಾಕಲೆಂದು ಮತಗಟ್ಟೆಗೆ ತೆರಳಿದಾಗ ನಮ್ಮನ್ನು ಮತ ಹಾಕದಂತೆ ಪೊಲೀಸರು ಹಾಗೂ ಕೆಲ ಮತಗಟ್ಟೆ ಅಧಿಕಾರಿಗಳು ತಡೆದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಲಾಠಿ ಏಟು ಕೊಟ್ಟು ಓಡಿಸುತ್ತಿದ್ದಾರೆʼ ಎಂದು ಮುಸ್ಲಿಮ್‌ ಮತದಾರರು ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್ ಲೋಕಸಭಾ ಕ್ಷೇತ್ರದಲ್ಲಿರುವ ಮತದಾರರು ಈ ಬಗ್ಗೆ ಪೊಲೀಸರ ಮೇಲೆ ಆರೋಪಿಸುತ್ತಿರುವುದಲ್ಲದೇ, ಹೇಳಿಕೆಗಳನ್ನು ಕೂಡ ನೀಡಿದ್ದಾರೆ.

ʼಮತ ಹಾಕಲೆಂದು ಮತಗಟ್ಟೆಗೆ ತಲುಪುವ ಮುನ್ನವೇ ನಮ್ಮ ಕೈಯ್ಯಲ್ಲಿದ್ದ ಆಧಾರ್‌ ಕಾರ್ಡ್‌ಗಳನ್ನು ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ಹರಿದಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ, ಹರಿದಿರುವ ಆಧಾರ್‌ ಕಾರ್ಡ್‌ನ ಪ್ರತಿಗಳನ್ನು ಸ್ಥಳೀಯ ಪತ್ರಕರ್ತರಿಗೆ ತೋರಿಸಿದ್ದಾರೆ.

ಕೆಲವು ಮತಗಟ್ಟೆಗಳಲ್ಲಿ, ʼನಿಮ್ಮ ಆಧಾರ್ ಕಾರ್ಡ್‌ ನಕಲಿ, ನಿಮಗೆ ಮತ ಹಾಕಲು ಆಗುವುದಿಲ್ಲʼ ಎಂದು ಹೇಳಿ ನೂರಾರು ಮುಸ್ಲಿಂ ಮಹಿಳೆಯರನ್ನು ಮತಗಟ್ಟೆ ತಲುಪದಂತೆ ತಡೆಯುತ್ತಿರುವ ಬಗ್ಗೆಯೂ ವರದಿಯಾಗಿದೆ.

ಉತ್ತರ ಪ್ರದೇಶದ ಪತ್ರಕರ್ತ ಸಚಿನ್‌ ಗುಪ್ತಾ, ಪೀಯೂಷ್‌ ರೈ ಎಂಬುವವರು ಕೆಲವೊಂದು ಬೆಳವಣಿಗೆಗಳ ಬಗ್ಗೆ  ವಿಡಿಯೋ ಹಂಚಿಕೊಂಡಿದ್ದು, “ಮುಸ್ಲಿಂ ಸಮುದಾಯದ ಮತದಾರರ ಆಧಾರ್‌ ಕಾರ್ಡ್‌ ಗಮನಿಸಿ ನಕಲಿ ಎಂದು ಹೇಳಿ, ಮತ ಹಾಕದಂತೆ ಹಿಂದೆ ಕಳುಹಿಸುತ್ತಿರುವ ಬಗ್ಗೆ ವರದಿಗಳು ಬರುತ್ತಿದೆ. ಸಂಭಾಲ್ ಪ್ರದೇಶದಲ್ಲಿ ಪೊಲೀಸರು ಮುಸ್ಲಿಂ ಮತದಾರರ ಗುರುತಿನ ಚೀಟಿ ಹರಿದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ” ಎಂದು ತಿಳಿಸಿದ್ದಾರೆ.

ಪೊಲೀಸರ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಂಬಂಧಿತ ಮತಗಟ್ಟೆಗಳಿಗೆ ತೆರಳಿರುವ ಐಪಿಎಸ್ ಅಧಿಕಾರಿ ಅನುಕೃತಿ ಶರ್ಮಾ, “ಮತಗಟ್ಟೆ ಸಿಬ್ಬಂದಿಗೆ ಮತದಾರರ ಚೀಟಿ ಪರಿಶೀಲಿಸುವ ಹಕ್ಕು ಇದೆ. ಇದು ಪೊಲೀಸರ ಕೆಲಸವಲ್ಲ. ಮತದಾರರು ಮತಗಟ್ಟೆಗೆ ಹೋಗಲಿ. ಮತ ಹಾಕಲಾಗುತ್ತದೆಯೇ ಅಥವಾ ತಿರಸ್ಕರಿಸಲಾಗುತ್ತದೆಯೇ ಎಂದು ಅವರು ನಿರ್ಧಾರ ಮಾಡುತ್ತಾರೆ” ಎಂದು ಮುಸ್ಲಿಂ ಮತದಾರರನ್ನು ಮತಗಟ್ಟೆಗೆ ತೆರಳದಂತೆ ತಡೆದ ಪೊಲೀಸ್‌ ಸಿಬ್ಬಂದಿಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.

ಸಂಭಾಲ್ ಲೋಕಸಭಾ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಭ್ಯರ್ಥಿಯಾಗಿ ಎಸ್‌ಪಿಯಿಂದ ಝಿಯಾವುರ್‌ ರಹ್ಮಾನ್‌ ಬರ್ಕ್‌, ಬಿಜೆಪಿಯಿಂದ ಪರಮೇಶ್ವರ್‌ ಲಾಲ್‌ ಸೈನಿ, ಬಿಎಸ್‌ಪಿಯಿಂದ ಶವೂಲತ್‌ ಅಲಿ ಸ್ಪರ್ಧಿಸುತ್ತಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ದೇಶದ ಹಿರಿಯ ಸಂಸದ ಎನಿಸಿಕೊಂಡಿದ್ದ ಶಫೀಕುರ್ ರೆಹಮಾನ್ ಬರ್ಕ್ ಅವರು ಜಯ ಗಳಿಸಿದ್ದರು. ಅವರು ಸಮಾಜವಾದಿ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯ ಗಳಿಸಿದ್ದರು. 2024ರ ಫೆ.27ರಂದು ಶಫೀಕುರ್ ರೆಹಮಾನ್ ಬರ್ಕ್ ನಿಧನರಾಗಿದ್ದರು.

LEAVE A REPLY

Please enter your comment!
Please enter your name here