ಗೋರಕ್ಷಕರಿಂದ ಹತ್ಯೆಯಾದ ಪೆಹ್ಲೂ ಖಾನ್ ವಿರುದ್ಧ ಆರೋಪಟ್ಟಿ ಸಲ್ಲಿಕೆ

0
826

ಜೈಪುರ, ಜೂ 29: ಎರಡು ವರ್ಷಗಳ ಹಿಂದೆ ದನ ಸಾಗಾಟವನ್ನು ಆರೋಪಿಸಿ ಜನರ ಗುಂಪು ಹತ್ಯೆ ಮಾಡಿದ್ದ ಪೆಹ್ಲೂ ಖಾನ್ ವಿರುದ್ಧ ರಾಜಸ್ಥಾನ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಪೆಹ್ಲೂಖಾನ್ ಅಲ್ಲದೆ ಅವರ ಪುತ್ರರಾದ ಇರ್ಷಾದ್, ಆರಿಫ್, ಜಾನುವಾರು ಸಾಗಿಸಿದ ಪಿಕ್‍ಅಪ್ ವ್ಯಾನ್ ಮಾಲಕನ ವಿರುದ್ಧ ಕೂಡ ಅಕ್ರಮ ಗೋಸಾಗಾಟ ಆರೋಪ ಹೊರಿಸಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

ಪೆಹ್ಲೂಖಾನ್‍ರನ್ನು ಆರೋಪಿಯಾಗಿಸಿ ಹೊಸ ಆರೋಪ ಪಟ್ಟಿಯನ್ನು ಡಿಸೆಂಬರ್ ಮೂವತ್ತಕ್ಕೆ ತಯಾರಿಸಲಾಗಿತ್ತು. ರಾಜಸ್ಥಾನದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೊದಲ ದಿನಗಳಲ್ಲಿ ಆರೋಪ ಪಟ್ಟಿ ತಯಾರಿಸಲಾಗಿದೆ. ಮೇ 29ಕ್ಕೆ ಬೆಹ್ರೋರದ ಅಡಿಶನಲ್ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಇದನ್ನು ಸಲ್ಲಿಸಲಾಗಿದೆ. 2017 ಎಪ್ರಿಲ್‍ನಲ್ಲಿ ಜೈಪುರದ ಜಾನುವಾರು ಸಂತೆಯಿಂದ ದನಗಳನ್ನು ಖರೀದಿಸಿ ತರುತ್ತಿದ್ದಾಗ ಗೋರಕ್ಷಕ ಗೂಂಡಾಗಳಿಂದ ಹಾಲುತ್ಪಾದನಾ ರೈತರಾದ ಪೆಹ್ಲೂ ಖಾನ್ ಕೊಲೆಯಾಗಿದ್ದರು. ಅವರ ಆರು ಮಂದಿ ಹತ್ಯಾರೋಪಿಗಳಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದರು. ಪ್ರಕರಣದ ಸಾಕ್ಷಿಗಳಾದ ಪೆಹ್ಲೂಖಾನ್‍ರ ಮಕ್ಕಳ ಮೇಲೆ ಕೋರ್ಟಗೆ ಹಾಜರಾಗುವ ವೇಳೆ ಅಜ್ಞಾತರು ಗುಂಡು ಹಾರಿಸಿದ್ದರು.