ಆಪ್ ಶಾಸಕ ಸೋಮನಾಥ್ ಮೇಲೆ ಶಾಯಿ ಎರಚಿದ ಯುವಕನನ್ನು ಸನ್ಮಾನಿಸಿದ ಕಾಂಗ್ರೆಸ್ ಶಾಸಕ..!

0
399

ಸನ್ಮಾರ್ಗ ವಾರ್ತೆ

ರಾಯ್ ಬರೇಲಿ: ಆಪ್ ಶಾಸಕ ಸೋಮನಾಥ್ ಭಾರತಿ ಮೇಲೆ ಶಾಯಿ ಎರಚಿದ್ದ ಹಿಂದೂ ಯುವ ವಾಹಿನಿ ಕಾರ್ಯಕರ್ತನನ್ನು ಹರಿಚಂದ್ ಪುರದ ಕಾಂಗ್ರೆಸ್ ಶಾಸಕನೋರ್ವ ಸನ್ಮಾನಿಸುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ನಿಷ್ಠೆ ತೋರಿದ್ದಾರೆ.

ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರತಿ ಅವರ ಮೇಲೆ ಶಾಯಿ ಎಸೆದಿದ್ದ ಹಿಂದೂ ಯುವ ವಾಹಿನಿ ಕಾರ್ಯಕರ್ತ ಜಿತೇಂದ್ರ ಸಿಂಗ್ ನಿಗೆ ಉತ್ತರ ಪ್ರದೇಶದ ಶಾಸಕ ಹರಿಚಂದ್ ಪುರದ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ಮಾಲಾರ್ಪಣೆ ಮಾಡಿ, 51,000 ನಗದು ಬಹುಮಾನವಾಗಿ ನೀಡಿರುವುದಾಗಿ ವರದಿಯಾಗಿದೆ.

ಇಂದು, ಶಾಸಕ ರಾಕೇಶ್ ಸಿಂಗ್ ಅವರ ಆಹ್ವಾನದ ಮೇರೆಗೆ ನಾನು, ನಮ್ಮ ಸಂಘಟನೆಯ ಸದಸ್ಯರೊಂದಿಗೆ ರಾಯ್ ಬರೇಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಅವರ ನಿವಾಸವನ್ನು ತಲುಪಿದೆವು. ಶಾಸಕರು ನನಗೆ ಹೂಮಾಲೆ ಮಾಡಿ 51,000 ರೂ. ನೀಡಿದ್ದಾರೆ. ರಾಯ್ ಬರೇಲಿಯಲ್ಲಿ ಹಿಂದೂ ಯುವ ವಾಹಿನಿ ಸಂಘಟನೆಯನ್ನು ಬಲಪಡಿಸುವಂತೆ ಅವರು ನಮ್ಮನ್ನು ಕೇಳಿದರು ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾನೆ.

ಎಎಪಿಯ ಮಾಜಿ ಕಾನೂನು ಸಚಿವರು ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು ಮತ್ತು ಈ ಯುವಕರು ಅವರ ಮುಖವನ್ನು ಕಪ್ಪಾಗಿಸುವ ಮೂಲಕ ಅದೇ ಭಾಷೆಯಲ್ಲಿ ಸೂಕ್ತ ಉತ್ತರ ನೀಡಿದರು ಎಂದು ಶಾಸಕ ರಾಕೇಶ್ ಸಿಂಗ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಶಾಸಕನೋರ್ವ ಯೋಗಿ ಆದಿತ್ಯ ನಾಥ್ ಗೆ ನಿಷ್ಠೆ ತೋರುವ ಮೂಲಕ ಎಷ್ಟು ಸರಿ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಅಂದ ಹಾಗೆ ರಾಯ್ ಬರೇಲಿ ಕಾಂಗ್ರೆಸ್ ನ ಅಧ್ಯಕ್ಷೆ, ಸೋನಿಯಾ ಗಾಂಧಿಯವರ ಕ್ಷೇತ್ರ.