ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಭಾರತದಲ್ಲಿ ಕೊರೋನ ವ್ಯಾಪಿಸಲು ತಬ್ಲೀಗ್ ಜಮಾಅತ್ ಕಾರಣವೆಂದು ತಪ್ಪು ಮಾಹಿತಿ ಪ್ರಕಟಿಸಿದ ಪುಸ್ತಕದ ಪ್ರಕಾಶಕರು ಅದನ್ನು ತೆಗೆದು ಹಾಕಿ ಕ್ಷಮೆಯಾಚಿಸಿದ್ದಾರೆ. ಎಂಬಿಬಿಎಸ್ ವಿದ್ಯಾರ್ಥಿಗಳಿಗಾಗಿ ಹೊಸದಿಲ್ಲಿಯ ಜೆಪಿ ಪಬ್ಲಿಕೇಶನ್ ಪ್ರಕಟಿಸಿದ ಎಸೆನ್ಶಲ್ ಆಫ್ ಮೆಡಿಕಲ್ ಮೈಕ್ರೋ ಬಯೋಲಜಿ ಎಂಬ ಪುಸ್ತಕದಲ್ಲಿ ಇಂತಹ ಬರಹ ಇತ್ತು. ವಿಷಯ ವಿವಾದವಾಗುವುದರೊಂದಿಗೆ ಮಹಾರಾಷ್ಟ್ರ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್ಐಒ) ಮಧ್ಯಪ್ರವೇಶಿಸಿದ ಬಳಿಕ ಪುಸ್ತಕದಿಂದ ತಪ್ಪಾದ ಭಾಗವನ್ನು ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕಾಶನ ಸಂಸ್ಥೆಯು ತಬ್ಲೀಗ್ ಜಮಾತ್ನೊಂದಿಗೆ ಕ್ಷಮೆಯನ್ನೂ ಯಾಚಿಸಿದೆ. ತಪ್ಪು ಮಾಹಿತಿ ನೀಡಿದ್ದಕ್ಕೆ ವಿಷಾದಿಸುತ್ತೇವೆ ಎಂದು ಪ್ರಕಾಶಕರು ಹೇಳಿದರು. ಪುಸ್ತಕದ ಹೊಸ ಪ್ರತಿಗಳಲ್ಲಿ ಈ ಭಾಗಗಳನ್ನು ತೆರೆವುಗೊಳಿಸಿದೆ. ಪ್ರಮುಖ ವೈದ್ಯಕೀಯ ಬರಹಗಾರ ಡಾ. ಅಪೂರ್ಬ ಎಸ್ ಶಾಸ್ತ್ರಿ, ಡಾ. ಸಂಧ್ಯಾ ಭಟ್ ಸೇರಿ ಪುಸ್ತಕ ಬರೆದಿದ್ದರು.
ದಿಲ್ಲಿ ನಿಝಾಮುದ್ದೀನ್ ತಬ್ಲೀಗ್ ಸಮಾವೇಶಕ್ಕೆ ಬಂದವರಲ್ಲಿ ಕೊರೋನ ಕಂಡು ಬಂದ ನಂತರ ಮುಸ್ಲಿಮರ ವಿರುದ್ಧ ದೇಶಾದ್ಯಂತ ಅಪಪ್ರಚಾರ ವಿದ್ವೇಷ ಪ್ರಚಾರ ಜೋರಾಗಿ ನಡೆದಿತ್ತು. ಸಾಮಾಜಿಕ ಮಾಧ್ಯಮದಲ್ಲಿ ತಬ್ಲೀಗ್ ವೈರಸ್ ಎಂಬ ಹ್ಯಾಶ್ ಟ್ಯಾಗ್ ಮಾಡಿ ಸಂಘಪರಿವಾರ ಬೆಂಬಲಿಗರು ವಿದ್ವೇಷ ಪ್ರಚಾರ ಮಾಡಿದ್ದರು. ದೇಶದಲ್ಲಿ ಕೊರೋನ ಪ್ರಕರಣ ಹೆಚ್ಚಲು ತಬ್ಲೀಗ್ ಜಮಾಅತ್ ಕಾರಣವೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂತಾದವರು ಹೇಳಿಕೆ ನೀಡಿದ್ದರು.