ಪಂಚಾಯತಿ ಮಟ್ಟದಲ್ಲಿ ಸಾವಿರ ಹೊಸ ಮದ್ಯದಂಗಡಿಗಳಿಗೆ ಸರ್ಕಾರದ ಪ್ರಸ್ತಾವ: ವಿರೋಧ ವ್ಯಕ್ತಪಡಿಸಿದ ಸಾಣೇಹಳ್ಳಿ ಶ್ರೀ

0
461

ಸನ್ಮಾರ್ಗ ವಾರ್ತೆ

ರಾಜ್ಯ ಸರ್ಕಾರವು ಪಂಚಾಯತಿ ಮಟ್ಟದಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿರುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿರುವ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಸಾವಿರ ಮದ್ಯದಂಗಡಿ ಯೋಜನೆ ಕೈಬಿಟ್ಟು ಆರೋಗ್ಯ ಭಾಗ್ಯ ಕರುಣಿಸುವ ಹೃದಯವಂತಿಕೆ ಮೆರೆಯಲಿ’ ಎಂದು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪತ್ರಿಕೆಗಳಲ್ಲಿ ಅಬಕಾರಿ ಇಲಾಖೆಯ ಮತ್ತು ಅಬಕಾರಿ ಮಂತ್ರಿಗಳ ಹೊಸ ಅಜೆಂಡಾ ನೋಡಿ ತುಂಬಾ ನೋವಾಯಿತು. ಇವರಿಗೆ ಯಾರು ಬುದ್ಧಿ ಹೇಳಬೇಕು ಎನ್ನುವುದೇ ತಿಳಿಯದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿಸಿ ತಮ್ಮ ಅಧಿಕಾರವನ್ನು ಸ್ಥಿರಗೊಳಿಸಿಕೊಳ್ಳುವ ಸಂಚು ಇದರ ಹಿಂದಿದೆಯೇ? ಈಗಾಗಲೇ ಕುಡುಕರ ಹಾವಳಿ ಹೆಚ್ಚಾಗಿ ಸಂಪತ್ತು, ಆರೋಗ್ಯ, ಮರ್ಯಾದೆ, ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಜನಪ್ರತಿನಿಧಿಗಳು ಗಮನಿಸದಿರುವುದು ವಿಷಾದನೀಯ” ಎಂದು ಸಾಣೇಹಳ್ಳಿ ಸ್ವಾಮೀಜಿ ತಿಳಿಸಿದ್ದಾರೆ.

“ಜನರ ಆರೋಗ್ಯ, ಆರ್ಥಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ್ದು ಜನಪರ ನೇತಾರನ ಜವಾಬ್ದಾರಿ. ಕ್ಷಣಿಕ ಲಾಭಕ್ಕಾಗಿ ಎಲ್ಲ ಆದರ್ಶಗಳನ್ನು ಗಾಳಿಗೆ ತೂರುವ ನೇತಾರರು ಬುದ್ಧ, ಬಸವಣ್ಣ, ಟಿಪ್ಪು, ಗಾಂಧಿ ಮತ್ತಿತರ ದಾರ್ಶನಿಕರ ಚಿಂತನೆಗಳನ್ನು ಜಾರಿಗೆ ತರುವುದು ಯಾವಾಗ? ಅನುಭವಿಸುತ್ತಿರುವ ಕುಟುಂಬದವರು ಮೌನವಹಿಸದೆ ಮದ್ಯದ ದುಷ್ಪರಿಣಾಮ ಈಗಲಾದರೂ ಸರ್ಕಾರದ ಧೋರಣೆಯ ವಿರುದ್ಧ ಬಂಡೇಳುವ ಕಾರ್ಯವನ್ನು ಮಾಡಬೇಕು” ಎಂದು ತರಳಬಾಳು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.

“ಸಮಾಜಮುಖಿ ಚಿಂತಕರು, ಸಾಮಾಜಿಕ ಕಳಕಳಿಯುಳ್ಳ ಸಂಘಟನೆಗಳು ಮುಖ್ಯವಾಗಿ ಮಠಾಧೀಶರು ಈಗಲಾದರೂ ಧ್ವನಿಯೆತ್ತಬೇಕು. ತಮ್ಮ ತಮ್ಮ ವಲಯದಲ್ಲಿ ಹೋರಾಟ ಮಾಡುವ ಸಂಕಲ್ಪ ಸ್ವೀಕರಿಸಬೇಕು. ಪ್ರವಾಹದ ವಿರುದ್ಧ ಈಜುವುದು ಸುಲಭವಲ್ಲವೆಂದು ನಮಗೂ ಗೊತ್ತು. ಹಾಗಂತ ಅದನ್ನು ಸ್ವಾಗತಿಸಬೇಕು ಎಂದಲ್ಲ. ದೊಡ್ಡ ಅನಾಹುತ ಸಂಭವಿಸುವ ಮೊದಲೇ ಸರ್ಕಾರ ಎಚ್ಚೆತ್ತು ಸಾವಿರ ಮದ್ಯದಂಗಡಿಯ ಯೋಜನೆಯನ್ನು ಬಿಟ್ಟು ಜನರ ಆರ್ಥಿಕ, ನೈತಿಕ ಮೌಲ್ಯಗಳನ್ನು ಕಾಪಾಡುವ, ಆರೋಗ್ಯ ಭಾಗ್ಯ ಕರುಣಿಸುವ ಹೃದಯವಂತಿಕೆ ಮೆರೆಯಲಿ” ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಹೇಳಿಕೆ ನೀಡಿದ್ದಾರೆ.