ಮದ್ಯದ ಅಂಗಡಿಗೆ ಹೊಸದಾಗಿ ಪರವಾನಗಿ ಸರಕಾರದ ನಿರ್ಧಾರ ಖಂಡನೀಯ: ವೆಲ್ಫೇರ್ ಪಾರ್ಟಿ

0
205

ಸನ್ಮಾರ್ಗ ವಾರ್ತೆ

ಬರದಿಂದ ತತ್ತರಿಸುತ್ತಿರುವ ರಾಜ್ಯದ ಜನತೆಗೆ ಮಧ್ಯ ಕುಡಿಸುವ ಯೋಜನೆಗೆ ರಾಜ್ಯ ಸರಕಾರ ಕೈ ಹಾಕುತ್ತಿರುವುದು ಅತ್ಯಂತ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹಲವು ಜನಸ್ನೇಹಿ ಗ್ಯಾರಂಟಿ ನೀಡಿದ ಸರಕಾರ ಈಗ ಮಧ್ಯದ ಅಂಗಡಿಗಳೇ ಇಲ್ಲದ ಸುಮಾರು 600 ಕ್ಕಿಂತ ಹೆಚ್ಚು ಗ್ರಾಮ ಪಂಚಾಯ್ತಿಗಳಲ್ಲಿ ಹೊಸದಾಗಿ ಸಾವಿರ ಮದ್ಯದ ಅಂಗಡಿಗೆ ಪರವಾನಗಿ ನೀಡಲು ಅಬಕಾರಿ ಇಲಾಖೆ ಸಿದ್ಧತೆ ನಡೆಸುತ್ತಿದೆ. ಇದನ್ನು ಜನಪರ ನಿರ್ಣಯವೆಂದು ಬಣ್ಣನೆ ಮಾಡಿರುವ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಅವರ ಮಾತು ಹಾಸ್ಯಾಸ್ಪದ ಎಂದು ಅವರು ಹೇಳಿದರು.

ಸರಕಾರದ ಈ ನಿರ್ಧಾರ ಜನರ ಹಿತಕ್ಕಿಂತ ಬೊಕ್ಕಸ ತುಂಬಿಸುವುದೇ ದ್ಯೇಯ ಎಂಬಂತೆ ಕಂಡು ಬರುತ್ತಿದೆ. ಇದು ಖಂಡನೀಯ. ಸರಕಾರವು ಬಡ ಮಹಿಳೆಯರಿಗೆ ನೀಡುವ ಎರಡು ಸಾವಿರವನ್ನು ಮರಳಿ ಬೊಕ್ಕಸಕ್ಕೆ ಸೇರಿಸುತ್ತಿದ್ದಾರೆಯೇ? ಬಡವರ ನೆಮ್ಮದಿ ಕೆಡಿಸುವ ರಾಜ್ಯ ಸರಕಾರದ ಈ ನಡೆಯನ್ನು ವೆಲ್ಫೇರ್ ಪಾರ್ಟಿ ಕರ್ನಾಟಕವು ತೀವ್ರವಾಗಿ ಖಂಡಿಸುತ್ತಿದೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯಾದ್ಯಕ್ಷ ಹೇಳಿದರು.

ಈ ದುಷ್ಚಟವನ್ನು ನಿಯಂತ್ರಿಸಲು ಪರಿಣಾಮಕಾರಿ ಯೋಜನೆಯನ್ನು ಸರಕಾರ ತಂದಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಅದರ ಬದಲು ಹಳ್ಳಿಗಳಲ್ಲಿ, ಸೂಪರ್ ಮಾರ್ಕೆಟ್ ಗಳಲ್ಲಿ ಹೀಗೆ ಗಲ್ಲಿ ಕೇರಿಗಳಲ್ಲಿ ಮದ್ಯದಂಗಡಿಗಳು ತಲೆಯೆತ್ತಿದರೆ ರಾಜ್ಯದ ಸ್ಥಿತಿ ಏನಾಗಬೇಕು?. ಸರಕಾರ ರಾಜ್ಯದಲ್ಲಿ ಸಂಪೂರ್ಣವಾಗಿ ಮಧ್ಯ ನಿಷೇಧ ಮಾಡಬೇಕು ಎಂದು ಅವರು ಅಗ್ರಹಿಸಿದರು.