ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಹೇಮಂತ್ ಕರ್ಕರೆ ಬಲಿ: ವಿಜಯ್ ವಡೆಟ್ಟಿವಾರ್ ಗಂಭೀರ ಆರೋಪ

0
209

ಸನ್ಮಾರ್ಗ ವಾರ್ತೆ

2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ ಪೊಲೀಸ್ ಅಧಿಕಾರಿ ಎಂದು ಮಹಾರಾಷ್ಟ್ರ ವಿರೋಧ ಪಕ್ಷದ ಹಾಗೂ ಕಾಂಗ್ರೆಸ್‌ ನಾಯಕ ವಿಜಯ್ ವಡೆಟ್ಟಿವಾರ್ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

1993ರ ಮುಂಬೈ ಸರಣಿ ಸ್ಫೋಟ ಮತ್ತು 26/11 ಮುಂಬೈ ದಾಳಿಯ ಪ್ರಕರಣಗಳಲ್ಲಿ ಉಜ್ವಲ್ ನಿಕಮ್ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೆಲಸ ಮಾಡಿದ್ದರು. ಈಗ ಅವರು ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಹೇಮಂತ್ ಕರ್ಕರೆಯನ್ನು ಕೊಂದ ಗುಂಡು ಅಜ್ಮಲ್ ಕಸಬ್‌ನಂತಹ ಭಯೋತ್ಪಾದಕರದ್ದಲ್ಲ, ಆದು  ಆರೆಸ್ಸೆಸ್‌ಗೆ ನಿಕಟವಾಗಿರುವ ಪೊಲೀಸ್ ಅಧಿಕಾರಿಯದ್ದು, ಈ ಸತ್ಯವನ್ನು ಮುಚ್ಚಿಟ್ಟ ಉಜ್ವಲ್ ನಿಕಮ್ ಒಬ್ಬ ದೇಶದ್ರೋಹಿ ಮತ್ತು ಅವರಂತಹ ದೇಶದ್ರೋಹಿಗೆ ಬಿಜೆಪಿ ಚುನಾವಣಾ ಟಿಕೆಟ್ ನೀಡಿದೆ ಎಂದು ವಡೆತ್ತಿವಾರ್  ಆರೋಪಿಸಿದ್ದಾರೆ.

ಕೊಲ್ಹಾಪುರದಲ್ಲಿ ಭಾನುವಾರ ಮಾತನಾಡಿದ ವಡೆತ್ತಿವಾರ್, ತಮ್ಮ ಹೇಳಿಕೆಗಳಿಗೆ ರಾಜಕೀಯ ಬಣ್ಣ ನೀಡಲಾಗುತ್ತಿದೆ, ತಮ್ಮ ಹೇಳಿಕೆಗಳು ಮಾಜಿ ಉನ್ನತ ಪೊಲೀಸ್ ಅಧಿಕಾರಿ ಎಸ್.ಎಂ. ಮುಶ್ರೀಫ್ ಬರೆದಿರುವ ಕರ್ಕರೆಯನ್ನು ಕೊಂದ ಪುಸ್ತಕವನ್ನು ಆಧರಿಸಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಎಸ್‌ಎಂ ಮುಶ್ರೀಫ್ ಬರೆದಿರುವ ಪುಸ್ತಕದಲ್ಲಿ ಬರೆದದ್ದನ್ನು ಉಲ್ಲೇಖಿಸಿದ್ದೇನೆ. ಹೇಮಂತ್ ಕರ್ಕರೆಗೆ ತಗುಲಿದ ಗುಂಡಿನ ಬಗ್ಗೆ ಅದರಲ್ಲಿ ಪ್ರತಿಯೊಂದು ಮಾಹಿತಿಯೂ ಇತ್ತು. ಇದು ಭಯೋತ್ಪಾದಕರ ಬುಲೆಟ್ ಅಲ್ಲ ಎಂದು ಹೇಳಿದ್ದಾರೆ.

ವಡೆಟ್ಟಿವಾರ್ ಅವರ ಹೇಳಿಕೆಯು ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಟೀಕೆಗೆ ಕಾರಣವಾಗಿದೆ. ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಆರೋಪಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನಕುಲೆ, ಇಂತಹ ಹೇಳಿಕೆಗಳ ಮೂಲಕ ಪಾಕಿಸ್ತಾನಕ್ಕೆ ಸಹಾಯ ಮಾಡಲು ಕಾಂಗ್ರೆಸ್ ಪಿತೂರಿ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಮತ ಪಡೆಯಲು ಕಾಂಗ್ರೆಸ್ ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ? ಅವರು ಈಗ ಬಿಜೆಪಿಯನ್ನು ವಿರೋಧಿಸಲು 26/11 ಮುಂಬೈ ದಾಳಿಯ ಭಯೋತ್ಪಾದಕ ಅಜ್ಮಲ್ ಕಸಬ್‌ನ ಪರವಾಗಿ ಮಾತನಾಡುತ್ತಿದ್ದಾರೆಯೇ? ಸ್ವಲ್ಪ ನಾಚಿಕೆ ಇರಲಿ. ಕಾಂಗ್ರೆಸ್‌ಗೆ ಯಾವುದೇ ಸಮಸ್ಯೆ ಇಲ್ಲ. ಅವರು ಈಗ ಹುತಾತ್ಮರಾದ ನಮ್ಮ ಪೊಲೀಸ್ ಅಧಿಕಾರಿಗಳನ್ನು ಅವಮಾನಿಸುತ್ತಿದ್ದಾರೆ ಎಂದು ಚಂದ್ರಶೇಖರ ಬಾವನಕುಲೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here