ಸನ್ಮಾರ್ಗ ವಾರ್ತೆ
ಇಂದೋರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ನಾಮಪತ್ರ ಹಿಂಪಡೆದಿದ್ದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಘಟನೆಯ ಬಗ್ಗೆ ಮಾಜಿ ಲೋಕಸಭಾ ಸ್ಪೀಕರ್ ಹಾಗೂ ಬಿಜೆಪಿಯ ಹಿರಿಯ ನಾಯಕಿ ಸುಮಿತ್ರಾ ಮಹಾಜನ್ ಅಚ್ಚರಿ ವ್ಯಕ್ತಪಡಿಸಿದ್ದು, “ನನಗೆ ಇಂದೋರ್ನ ಹಲವಾರು ಜನರು ಕರೆ ಮಾಡಿ ನೋಟಾಕ್ಕೆ ಮತ ಹಾಕುವುದಾಗಿ ತಿಳಿಸಿದ್ದಾರೆ” ಎಂದಿದ್ದಾರೆ.
1989 ಮತ್ತು 2014 ರ ನಡುವೆ ಸತತ ಎಂಟು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಇಂದೋರ್ನಲ್ಲಿ ಗೆಲುವು ಸಾಧಿಸಿರುವ 81 ವರ್ಷದ ಸುಮಿತ್ರಾ ಮಹಾಜನ್ ಅವರಿಗೆ ಈಗ ಇಂದೋರ್ನ ಪ್ರಮುಖ ವ್ಯಕ್ತಿಗಳು ಕರೆ ಮಾಡಿ ಮೇ 13ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬದಲಾಗಿ ನೋಟಾಕ್ಕೆ ಮತ ಹಾಕುವುದಾಗಿ ಹೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
“ಈ ಘಟನೆ ಯಾಕೆ ನಡೆದಿದೆ ಎಂದು ನನಗೆ ಈವರೆಗೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನನಗೆ ಆಶ್ಚರ್ಯವಾಗಿದೆ. ಇಂದೋರ್ನಲ್ಲಿ ನನ್ನ 35 ವರ್ಷಗಳ ಚುನಾವಣಾ ರಾಜಕೀಯದಲ್ಲಿ ಇಂತಹ ಘಟನೆ ನಡೆದಿಲ್ಲ” ಎಂದು ಮಹಾಜನ್ ಮಾಧ್ಯಮಗಳಿಗೆ ಉತ್ತರಿಸುತ್ತಾ ಹೇಳಿದ್ದಾರೆ.
ಬಿಜೆಪಿಗೆ ಪಾಠ ಕಲಿಸಲು ನೋಟಾಗೆ ಮತ ಹಾಕುವಂತೆ ಇಂದೋರ್ನ ಜನರಿಗೆ ಕಾಂಗ್ರೆಸ್ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮಹಾಜನ್ ಅವರು, “ನನಗೆ ಇಂದೋರ್ನ ಪ್ರಮುಖ ನಾಗರಿಕರಿಂದ ಕರೆಗಳು ಬರುತ್ತಿದೆ. ನಡೆದಿರುವ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದರು.
ಹಾಗೆಯೇ “ಜನರು ಬಿಜೆಪಿಗೆ ಮತ ಹಾಕುವುದಿಲ್ಲ, ಬದಲಿಗೆ ಇವಿಎಂನಲ್ಲಿ ನೋಟಾ ಆಯ್ಕೆಯನ್ನು ಒತ್ತುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯೇ ಮನಸ್ಸು ಬದಲಾಯಿಸಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರಿರುವುದು, ಬಿಜೆಪಿ ಅಭ್ಯರ್ಥಿ ಆ ರೀತಿ ಮಾಡಿರುವುದಲ್ಲ ಎಂದು ನಾನು ಜನರ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದೇನೆ” ಎಂದರು.
“ನಮ್ಮ ಅಭ್ಯರ್ಥಿ ಮತ್ತು ಸಂಸದರು ಹೆಚ್ಚಿನ ಅಂತರದಿಂದ ಗೆಲ್ಲಲು ಸಿದ್ಧವಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಾಮ್ ಪ್ರಬಲ ನಾಯಕರೇನಲ್ಲ. ಹಾಗಿರುವಾಗ ಕಾಂಗ್ರೆಸ್ ಅಭ್ಯರ್ಥಿಯಿಂದ ನಾಮಪತ್ರ ಹಿಂಪಡೆಸಿಕೊಳ್ಳುವ ಅಗತ್ಯ ಏನಿತ್ತು” ಎಂದು ಪ್ರಶ್ನಿಸಿದ ಮಹಾಜನ್, ನಾಮಪತ್ರ ಹಿಂಪಡೆದ ಕೆಲವೇ ಗಂಟೆಗಳಲ್ಲಿ ಬಾಮ್ ಬಿಜೆಪಿ ಸೇರಿರುವುದನ್ನು ಕೂಡಾ ಪ್ರಶ್ನಿಸಿದ್ದಾರೆ.
“ಪಕ್ಷಕ್ಕೆ ಯಾರಾದರೂ ಸೇರಲು ಬಯಸಿದರೆ ನಾವು ನಿರಾಕರಿಸಲಾಗದು. ಆದರೆ ಹೊಸ ವ್ಯಕ್ತಿಗಳಿಂದಾಗಿ ಪಕ್ಷವು ದೊಡ್ಡದಾಗಿ ಬೆಳೆಯುತ್ತಾ ಹೋದಂತೆ ಅದರ ಗುಣಮಟ್ಟ ಮತ್ತು ಸಂಘಟನೆಯ ರಚನೆ ಹಾಗೆಯೇ ಉಳಿಯುತ್ತದೆಯೇ ಎಂಬುವುದನ್ನು ನಾವು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಬಿಜೆಪಿ ಹಿರಿಯ ನಾಯಕಿ ತನ್ನ ಪಕ್ಷಕ್ಕೆ ಸಲಹೆ ನೀಡಿದರು.