ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಯುವಕನನ್ನು ರಕ್ಷಿಸಲು ₹34 ಕೋಟಿ ಸಂಗ್ರಹಿಸಿದ ಕೇರಳೀಯರು! ನೈಜ ಕೇರಳ ಸ್ಟೋರಿ

0
206

ಸನ್ಮಾರ್ಗ ವಾರ್ತೆ

ದಕ್ಷಿಣದ ರಾಜ್ಯವಾದ ಕೇರಳದ ಹೆಸರಿಗೆ ಮಸಿ ಬಳಿಯಲು ಬಾಲಿವುಡ್‌ನ ನಿರ್ದೇಶಕನೋರ್ವ ‘ THE KERALA STORY’ ಎಂಬ ಸಿನಿಮಾ ಮಾಡಿ, ವಿವಾದವಾದದ್ದು ಎಲ್ಲರಿಗೂ ಗೊತ್ತೇ ಇದೆ. 2023ರಲ್ಲಿ ಬಿಡುಗಡೆಯಾದ ಈ ಸಿನಿಮಾ ಧಾರ್ಮಿಕವಾಗಿ ಮಾತ್ರವಲ್ಲ, ರಾಜಕೀಯ ವಲಯದಲ್ಲೂ ಭಾರೀ ವಿವಾದ ಉಂಟು ಮಾಡಿತ್ತು. ಇದಕ್ಕೆ ವ್ಯತಿರಿಕ್ತವಾಗಿರುವ THE REAL KERALA STORY ದೇಶ ಮಾತ್ರವಲ್ಲದೇ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸುದ್ದಿ ಮಾಡುತ್ತಿದೆ.

ಹೌದು. ನೀವು ನಂಬುತ್ತೀರೋ…ಬಿಡುತ್ತೀರೋ…ಸೌದಿ ಅರೇಬಿಯಾದಲ್ಲಿ ‘ಹೌಸ್ ಡ್ರೈವರ್‌’ ಆಗಿ ಕೆಲಸಕ್ಕಿದ್ದ ಕೇರಳದ ಯುವಕನೋರ್ವ ತನ್ನಿಂದಾದ ಅಚಾತುರ್ಯದಿಂದಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದನು. ಈ ಶಿಕ್ಷೆಯಿಂದ ಯುವಕನನ್ನು ರಕ್ಷಿಸಲು ಕೇರಳದ ಜನ ಕೆಲವೇ ದಿನಗಳಲ್ಲಿ ಕ್ರೌಡ್ ಫಂಡಿಂಗ್ ಮೂಲಕ ಬರೋಬ್ಬರಿ ₹34 ಕೋಟಿ ಸಂಗ್ರಹಿಸುವ ಮೂಲಕ ವಿಶ್ವಾದ್ಯಂತ ಸುದ್ದಿಯಾಗಿದ್ದಾರೆ.

ಸೌದಿ ಅರೇಬಿಯಾದ ರಿಯಾದ್‌ನಲ್ಲಿ ‘ಹೌಸ್ ಡ್ರೈವರ್‌’ ಆಗಿ ಕೇರಳದ ಕೋಝಿಕ್ಕೋಡ್‌ನ ಫರೂಕ್ ನಿವಾಸಿ ಅಬ್ದುಲ್ ರಹೀಂ ಎಂಬ ಯುವಕ ಕೆಲಸಕ್ಕಿದ್ದ. ಈತನ ಮಾಲೀಕನ ಅನಾರೋಗ್ಯ ಪೀಡಿತ 15 ವರ್ಷದ ಫೈಝ್ ಎಂಬ ಮಗನನ್ನು ಪ್ರತಿನಿತ್ಯದ ಬೇಕು-ಬೇಡಗಳನ್ನು ನೋಡಿಕೊಳ್ಳುವುದು ರಹೀಮ್ ಅವರ ಜವಾಬ್ದಾರಿಯಾಗಿತ್ತು. ಬಾಲಕ ಫೈಝ್ ಕುತ್ತಿಗೆಯಲ್ಲಿ ಅಳವಡಿಸಲಾಗಿದ್ದ ಬಾಹ್ಯ ಸಾಧನವೊಂದರ ಮೂಲಕ ಉಸಿರಾಟ ನಡೆಸುತ್ತಿದ್ದನು.

2006ರ ಡಿಸೆಂಬರ್ 24ರಂದು ಮಾಲೀಕನ ಮಗ ಫೈಝ್‌ನನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ‘ಕೆಂಪು ಸಿಗ್ನಲ್’ ಅನ್ನು ದಾಟಿ ಮುಂದೆ ಹೋಗುವಂತೆ ರಹೀಮ್‌ಗೆ ಹುಡುಗ ತಿಳಿಸಿದಾಗ, ರಹೀಮ್ ನಿರಾಕರಿಸಿದ್ದರು. ಈ ವೇಳೆ ಆಕ್ರೋಶಗೊಂಡಿದ್ದ ಬಾಲಕ ಫೈಝ್, ರಹೀಮ್‌ನೊಂದಿಗೆ ಅನುಚಿತವಾಗಿ ವರ್ತಿಸಿದ್ದನು. ಬಾಲಕನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾಗ, ಚಾಲಕ ರಹೀಮ್‌ ಅವರ ಕೈ ಆಕಸ್ಮಿಕವಾಗಿ ಬಾಹ್ಯ ವೈದ್ಯಕೀಯ ಸಾಧನಕ್ಕೆ ತಾಗಿದ್ದರಿಂದ, ಅದು ಕೆಳಗೆ ಬಿದ್ದಿತ್ತು. ಇದರ ಪರಿಣಾಮ ಹುಡುಗ ಸಾವನ್ನಪ್ಪಿದ್ದನು.

ಕೊಲೆ ಆರೋಪದ ಮೇಲೆ ಜೈಲು ಪಾಲಾಗಿದ್ದ ಅಬ್ದುಲ್ ರಹೀಂಗೆ ವಿಚಾರಣೆ ಬಳಿಕ ರಿಯಾದ್‌ನ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಶಿಕ್ಷೆಯಿಂದ ಪಾರುಗೊಳಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಪ್ರಯತ್ನಗಳು ನಡೆದರೂ ಮೃತ ಬಾಲಕ ಕುಟುಂಬ ಕ್ಷಮಾಪಣೆ ನೀಡಿರಲಿಲ್ಲ. ಕೊನೆಗೆ 34 ಕೋಟಿ ರೂ. ದಯಾ ನಿಧಿ (ಬ್ಲಡ್ ಮನಿ) ನೀಡಿದರೆ ಕ್ಷಮಾಪಣೆ ನೀಡಿ ಜೈಲಿನಿಂದ ಬಿಡುಗಡೆಗೊಳಿಸುವುದಾಗಿ ಮೃತ ಬಾಲಕ ಪೋಷಕರು ಹೇಳಿದ್ದರು.

ಇನ್ನೇನು ಕೆಲವೇ ದಿನಗಳಲ್ಲಿ ಅಬ್ದುಲ್ ರಹೀಂ ನ್ಯಾಯಾಲಯದ ವಿಧಿಯಂತೆ ಮರಣ ದಂಡನೆಗೆ ಒಳಗಾಗಬೇಕಿತ್ತು. 34 ಕೋಟಿ ರೂ. ಸಂಗ್ರಹಿಸಲಾಗದೆ ಕ್ಯಾಲಿಕಟ್‌ನಲ್ಲಿದ್ದ ರಹೀಂ ಕುಟುಂಬ ಆಸೆಯನ್ನೇ ಬಿಟ್ಟಿದ್ದರು. ಆದರೆ ತೀರ್ಪು ಅನುಷ್ಠಾನಗೊಳಿಸುವ ದಿನ ಹತ್ತಿರ ಬರುತ್ತಿದ್ದಂತೆ ಕೇರಳದ ಜನ ಒಟ್ಟಾದರು.

ಅಬ್ದುಲ್ ರಹೀಂ ಬಿಡುಗಡೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಬೃಹತ್ ಅಭಿಯಾನವನ್ನೇ ನಡೆಸಿದರು. ಕ್ರೌಡ್ ಫಂಡ್ ಸಂಗ್ರಹಿಸುವ ನಿಟ್ಟಿನಲ್ಲಿ ಸೇವ್ ಅಬ್ದುಲ್ ರಹೀಂ(SAVE ABDUL RAHEEM) ಎಂಬ ಆ್ಯಪ್ ರಚಿಸಿ ಹಣ ಸಂಗ್ರಹ ಮಾಡತೊಡಗಿದರು. ಆರಂಭಿಕ ಹಂತದಲ್ಲಿ ಕೇವಲ ಲಕ್ಷಗಳಷ್ಟೇ ಹಣ ಸಂಗ್ರಹವಾಗಿತ್ತು. ಬಳಿಕ ಪ್ರಚಾರವನ್ನು ತೀವ್ರಗೊಳಿಸಲಾಗಿತ್ತು. ಇದಕ್ಕೆ ಕೇರಳದ ಪ್ರಮುಖ ಚೆಮ್ಮನ್ನೂರು ಗೋಲ್ಡ್ ಸಂಸ್ಥೆಯ ಮಾಲೀಕ ಬೋಬಿ ಚೆಮ್ಮನ್ನೂರು ಕೈ ಜೋಡಿಸುತ್ತಿದ್ದಂತೆ ಹಣ ಮತ್ತಷ್ಟು ವೇಗವಾಗಿ ಸಂಗ್ರಹವಾಗತೊಡಗಿತು. ಈದುಲ್ ಫಿತರ್ ಹಬ್ಬದ ದಿನ ಹಣ ಸುಮಾರು 30 ಕೋಟಿವರೆಗೆ ಸಂಗ್ರಹವಾಗಿತ್ತು.

ಇದೀಗ 34 ಕೋಟಿ 45 ಲಕ್ಷ ರೂ. ಸಂಗ್ರಹವಾಗಿದ್ದು, ಸದ್ಯ ಕ್ರೌಂಡ್ ಫಂಡಿಗ್ ನಿಲ್ಲಿಸಲಾಗಿದೆ. ಈ ಮೊತ್ತವನ್ನು ಅಬ್ದುಲ್ ರಹೀಂ ತಾಯಿ ಫಾತಿಮಾ ಅವರಿಗೆ ನೀಡಲಾಗಿದ್ದು, ಶೀಘ್ರದಲ್ಲೇ ರಹೀಂ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಅಬ್ದುಲ್ ರಹೀಂನ ಬಿಡುಗಡೆಗಾಗಿ ಇಡೀ ಕೇರಳವೇ ಜಾತಿ, ಧರ್ಮ ಮೀರಿ ಒಂದಾಗಿದ್ದು, ಮತಾಂಧರ ನಿದ್ದೆ ಗೆಡಿಸಿದ್ದಾರೆ.

SAVE ABDUL RAHEEM ಅಪ್ಲಿಕೇಶನ್‌ನಲ್ಲಿ ನಿಧಿ ಸಂಗ್ರಹದ ಬಗ್ಗೆ ಸದ್ಯ ತೋರಿಸುತ್ತಿರುವ ಮಾಹಿತಿಯ ಪ್ರಕಾರ ಕೇರಳದಿಂದ 23,67,66,444 ಕೋಟಿ, ಒಟ್ಟಾರೆಯಾಗಿ 1,08,24,551 ರೂ., ಕರ್ನಾಟಕದಿಂದ 28,90,943 ರೂ, ತಮಿಳುನಾಡಿನಿಂದ 13,75,150 ರೂ ಹೀಗೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ರೂ ಹಣ ನಿಧಿಗೆ ಹರಿದು ಬಂದಿದೆ.

LEAVE A REPLY

Please enter your comment!
Please enter your name here