ಸನ್ಮಾರ್ಗ ವಾರ್ತೆ
ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ 4ನೇ ವಾರ್ಷಿಕೋತ್ಸವದ ಅಂಗವಾಗಿ ಧಾರವಾಡದ ರಂಗಾಯಣದಲ್ಲಿ ಆಯೋಜನೆ ಮಾಡಲಾಗಿದ್ದ ರಾಜ್ಯ ಮಟ್ಟದ ಖಿದ್ಮಾ ಕವಿ-ಕಾವ್ಯ ಸಂಗಮದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ. ಬಸವರಾಜ್ ಪೂಜಾರ ಕನ್ನಡ ಸಾಹಿತ್ಯ ಶ್ರೀಮಂತ ಗೊಳ್ಳುವುದರ ಹಿಂದೆ ಬಹಳಷ್ಟು ಸಂಘಟನೆಗಳ ಅವಿರತಶ್ರಮವಿದೆ. ಅದರಲ್ಲೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ಮಾಡಿರುವಂತಹ ಸೇವೆ ಅಪಾರವಾದದ್ದು ಇನ್ನಿತರ ಸಂಘ-ಸಂಸ್ಥೆಗಳಿಗೆ ಮಾದರಿಯೋಗ್ಯವಾದ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೋ. ನಿಜಲಿಂಗಪ್ಪ ಮಟ್ಟಿಹಾಳ ಅಧ್ಯಕ್ಷರು ಕನ್ನಡ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮಾಡಿದರು. ಡಾ. ನಂದಿ ಬಾಷ ಚಿಕ್ಕಬಳ್ಳಾಪುರ ರಾಜ್ಯದ್ಯಕ್ಷರು ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ (ರಿ) ಅಧ್ಯಕ್ಷತೆಯನ್ನು ವಹಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ 50 ರಷ್ಟು ಕವಿಗಳು ಕವಿತೆಗಳನ್ನು ವಾಚನ ಮಾಡಿದರು.
ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಖಿದ್ಮಾ ಸೇವಾ ರತ್ನ ಪ್ರಶಸ್ತಿ, ಖಿದ್ಮಾ ಆದರ್ಶ ದಂಪತಿ ಪ್ರಶಸ್ತಿ ಹಾಗೂ ಖಿದ್ಮಾ ಕಾವ್ಯ ಪ್ರಶಸ್ತಿಯನ್ನು ಯೋಧರು ಹಾಗೂ ಸಮಾಜ ಸೇವಕರಾದ ಪರಶುರಾಮ ದಿವಾನದ ಪ್ರದಾನ ಮಾಡಿದರು.
ಖಿದ್ಮಾ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ಹಾಶಿಂ ಬನ್ನೂರು, ಶ್ರೀಮತಿ ಶಾಂತ ಜಯಾನಂದ್, ಬಿ.ಎಸ್. ವಿರಾಪುರ್, ಡಾ. ಜ್ಯೋತಿ ಶ್ರೀನಿವಾಸ, ಚಂದ್ರಶೇಖರ್ ಮಾಡಲಗೇರಿ,ಶ್ರೀಮತಿ ಶುಭಾ ವಿಷ್ಣು ಸಭಾಹಿತ, ಅಬ್ದುಲ್ ರಝಾಕ್ ಬಶೀರ್ ಅಹ್ಮದ್ ಬಂಕಾಪೂರ, ಪ್ರಕಾಶ್ ಎಲ್. ಹಾದಿಮನಿ, ಶಿವಾನಂದ ಟವಳಿ, ಟಿ.ತ್ಯಾಗರಾಜು ಮೈಸೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕ ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಸ್ವಾಗತಿಸಿ, ಸಂತೋಷ ಭದ್ರಾಪುರ ನಿರೂಪಿಸಿ, ವಂದಿಸಿದರು.