ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.8: ದ್ರಾವಿಡರ್ ಕಳಗಂ ನಾಯಕ, ಸಾಮಾಜಿಕ ಸುಧಾರಕ ಪೆರಿಯಾರ್ರನ್ನು ಸುಪ್ರೀಂ ಕೋರ್ಟಿನ ಮಾಜಿ ಚೀಫ್ ಜಸ್ಟಿಸ್ ಮಾರ್ಕೆಂಡೇಯ ಕಟ್ಜು ‘ಬ್ರಿಟಿಷ್ ಏಜೆಂಟ್’, ‘ದೇಶದ್ರೋಹಿ’ ಎಂದು ಕರೆದಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕೆಂದು ಅವರು ಬಯಸಿರಲಿಲ್ಲ. ಆದ್ದರಿಂದ, ಅವರು ಆಗಸ್ಟ್ 15ನ್ನು ಕಪ್ಪುದಿನ ಎಂದು ಆಚರಿಸಿದ್ದಾರೆ ಎಂದು ಕಟ್ಜು ಆರೋಪಿಸಿದ್ದಾರೆ.
ಚೆನ್ನೈಯ ಮೀನಾ ವಿಶ್ವನಾಥ್ ಕಳುಹಿಸಿದ್ದೆಂದು ಒಂದು ಹಳೆಯ ತಮಿಳ್ ಪೋಸ್ಟರನ್ನು ಕಟ್ಜು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಪೆರಿಯಾರ್ ದೇಶದ್ರೋಹಿ, ಬ್ರಿಟಿಷ್ ಏಜೆಂಟ್ ಆಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕೆಂದು ಅವರು ಬಯಸಿರಲಿಲ್ಲ. ಆದ್ದರಿಂದ ಆಗಸ್ಟ್ 15ನ್ನು ತನ್ನ ಪತ್ರಿಕೆಯಲ್ಲಿ ಕಪ್ಪುದಿನವೆಂದು ಘೋಷಿಸಿದ್ದಾರೆ ಎಂದು ಮೀನಾ ವಿಶ್ವನಾಥ್ ಕಳುಹಿಸಿದ ಚಿತ್ರದೊಂದಿಗೆ ಫೇಸ್ಬುಕ್ನಲ್ಲಿ ಕಟ್ಜು ಬರೆದಿದ್ದಾರೆ. ಇದು ವೈರಲ್ ಆಗುವುದರೊಂದಿಗೆ ತಮಿಳರು ವ್ಯಾಪಕ ಪ್ರತಿಭಟನೆಗಿಳಿದಿದ್ದಾರೆ.
ಕಟ್ಜುರನ್ನು ಟೀಕಿಸಿ ದೊಡ್ಡ ಮಟ್ಟದಲ್ಲಿ ಕಮೆಂಟುಗಳು, ಪೋಸ್ಟ್ಗಳು ಬಂದಿವೆ. ಇದಕ್ಕೆ ಕೋಪಗೊಂಡು ಅವರು ಇನ್ನೊಂದು ಪೋಸ್ಟ್ ಹಾಕಿದ್ದು, ಅದರಲ್ಲಿ ತನ್ನ ಟೀಕೆಗಳನ್ನು ಪುನರುಚ್ಚರಿಸಿದ್ದಾರೆ. ನನಗೆ ತಮಿಳರ ಕುರಿತು ಉತ್ತಮ ಅಭಿಪ್ರಾಯ ಇತ್ತು. ಆದರೆ, ವಂಚಕ, ಬ್ರಿಟಿಶ್ ಏಜೆಂಟ್ ಆದ ಪೆರಿಯಾರ್ ಕುರಿತು ತನ್ನ ಪೋಸ್ಟ್ಗೆ ಅವರ ಪ್ರತಿಕ್ರಿಯೆ ಅವರಲ್ಲಿ ದೊಡ್ಡದೊಂದು ಭಾಗ ಬ್ರೈನ್ ವಾಶ್ಗೊಳಗಾಗಿದ್ದಿದೆ ಎಂದು ಸಾಬೀತುಪಡಿಸುತ್ತಿದೆ ಎಂದು ಎರಡನೇ ಪೋಸ್ಟ್ನಲ್ಲಿ ಕಟ್ಜು ಬರೆದಿದ್ದಾರೆ. ಈ ನಡುವೆ ದೊಡ್ಡ ಪ್ರತಿಭಟನೆ ವ್ಯಕ್ತವಾಗಿದೆ.