ಬರವಣಿಗೆಯೂ ಪ್ರತಿಭಟನೆಯ ಅಸ್ತ್ರ- ಚಂದ್ರ ಪೂಜಾರಿ

0
352

‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ

ಸನ್ಮಾರ್ಗ ವಾರ್ತೆ

ಮಂಗಳೂರು: ಸಹಜವಾದ ಪ್ರಕ್ರಿಯೆಯೊಂದು ಅಸಹಜವಾಗಿ ಕಾಡಿದಾಗಲೇ ಬರಹ ರೂಪುಗೊಳ್ಳಲಿದೆ ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರ ಪೂಜಾರಿ ಅಭಿಪ್ರಾಯಪಟ್ಟರು.

ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘ ನೀಡುವ 2018ನೇ ಸಾಲಿನ ರಾಜ್ಯಮಟ್ಟದ ದಿ.ಯು.ಟಿ. ಫರೀದ್ ಸ್ಮರಣಾರ್ಥ ನಗರದ ಸಹಕಾರಿ ಸದನದ ಶಾಂತಿ ಪ್ರಕಾಶನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಮಾತು ಸುಲಭ. ಆದರೆ, ಬರಹ ಕಷ್ಟ. ಹಾಗಾಗಿ ಒಬ್ಬ ಲೇಖಕ ಅಥವಾ ಲೇಖಕಿ ಯಾಕೆ ಬರೆಯಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಹುಟ್ಟುತ್ತದೆ. ಸಮಾಜದ ಆಗು ಹೋಗುಗಳನ್ನು ಕಂಡು ಕೆಲವರಿಗೆ ಅದು ಸಹಜ ಅಂತ ಅನಿಸಬಹುದು. ಆದರೆ, ಯಾರಿಗೆ ಅದು ಅಸಹಜ ಅಂತ ಕಾಡಲು ಆರಂಭಿಸುತ್ತದೆಯೋ ಆವಾಗ ಅವರಲ್ಲಿ ಬರಹದ ತುಡಿತ ಶುರುವಾಗುತ್ತದೆ. ಹೀಗೆ ತುಡಿತವಿದ್ದಾಗಲೇ ಅದು ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಹೊರಹೊಮ್ಮಲಿದೆ ಎಂದು ಡಾ. ಚಂದ್ರ ಪೂಜಾರಿ ನುಡಿದರು.

ಕರಾವಳಿಯ ಮಟ್ಟಿಗೆ ಕೋಮುವಾದ, ಅಸ್ಪೃಶ್ಯತೆ ಸಹಜ ಪ್ರಕ್ರಿಯೆಯಂತೆ ಕಂಡು ಬಂದರೂ ಅದರ ನೋವುಂಡ ಬರಹಗಾರರಲ್ಲಿ ಬರೆಯುವ ತುಡಿತ ಇದ್ದೇ ಇದೆ. ಬರೆಯುವುದು ಪ್ರತಿಭಟನೆಯ ಅಸ್ತ್ರವಾಗಿದೆ. ಮತ್ತೊಬ್ಬರ ಪ್ರಜ್ಞೆಯನ್ನು ಪ್ರಭಾವಿಸುವ ಕಲೆಬರಹತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದ ಚಂದ್ರ ಪೂಜಾರಿ, ಹಿಂದೆ ಕರಾವಳಿಯಲ್ಲಿ ದಲಿತರು ಮಾತ್ರ ಅಸ್ಪೃಶ್ಯರಾಗಿರಲಿಲ್ಲ. ಬಿಲ್ಲವರೂ ಅಸ್ಪೃಶ್ಯರಾಗಿದ್ದರು ಎಂಬುದನ್ನು ಮರೆಯಲು ಸಾಧ್ಯವಿಲ್ಲ.

ಸಂಸ್ಕೃತಿ ಅಂದರೆ ಮನಸ್ಸಿಗೆ, ದೃಷ್ಟಿ ಕೋನಕ್ಕೆ ಸಂಬಂಧಿಸಿದ್ದು. ಒಳಿತು, ಕೆಡುಕಿನ ಪ್ರಜ್ಞೆಗೆ ಸಂಬಂಧಿಸಿದ್ದು,ಈ ಪ್ರಜ್ಞೆಯನ್ನು ರೂಪಿ ಸುವ ಕೆಲಸವನ್ನು ಮನೆಯಿಂದಲೇ ಆರಂಭಿಸಬೇಕಿದೆ ಎಂದರು.

ಪ್ರಶಸ್ತಿ ಪ್ರದಾನ:

ಲೇಖಕ ಅಬ್ದುಲ್ ಸಲಾಮ್ ದೇರಳಕಟ್ಟೆಯವರ ‘ಮರೀಚಿಕೆ’ ಕೃತಿಗೆ 2018ನೆ ಸಾಲಿನ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಬ್ದುಲ್ ಸಲಾಮ್ ಈ ಪ್ರಶಸ್ತಿಯನ್ನು ಗುರುವಾರ ನಿಧನರಾದ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಕೆ. ಅವರಿಗೆ ಸಮರ್ಪಿಸಿದರು. ಅಲ್ಲದೆ ಪ್ರಶಸ್ತಿಯ ನಗದು 10 ಸಾವಿರ ರೂ.ಯನ್ನು ಪ್ರತಿಭಾನ್ವಿತ ವಿದ್ಯಾರ್ಥಿನಿ ಫಾತಿಮಾ ಸಾನ್ವಿ ಅವರಿಗೆ ಹಸ್ತಾಂತರಿಸಿದರು. ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಹುಭಾಷಾ ಕವಿಗೋಷ್ಠಿ:

ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರುರವರು ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಅತ್ರಾಡಿ ಅಮೃತಾ ಶೆಟ್ಟಿ, ರಾಜಾರಾಮ ವರ್ಮ ವಿಟ್ಲ, ಇಮ್ರಾನುಲ್ಲಾ ಖಾನ್ ಮನ್ಸೂರಿ ಕವನ ವಾಚಿಸಿದರು. ಮುಝಾಹಿರ್ ಅಹ್ಮದ್ ಕಿರಾಅತ್‌ ಪಠಿಸಿದರು. ಆಲಿಕುಂಞ ಪಾರೆ ವಂದಿಸಿದರು. ಮುಸ್ಲಿಮ್ ಲೇಖಕರ ಈ ಸಂಘದ ಪ್ರಧಾನ ಕಾರ್ಯದರ್ಶಿಯಾದ ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.