ಸನ್ಮಾರ್ಗ ವಾರ್ತೆ
ದೆಹಲಿ: ಮಣಿಪುರದ ಗಲಭೆ ಪೀಡಿತ ಗುಡ್ಡಗಾಡು ಪ್ರದೇಶಗಳಿಗೆ ವಿಶೇಷ ಆಡಳಿತ ನೀಡುವಂತೆ ಒತ್ತಾಯಿಸಿ ಬುಡಕಟ್ಟು ಮಹಿಳೆಯರು ಪ್ರತಿಭಟನೆ ನಡೆಸಿದರು.
ಬುಡಕಟ್ಟು ಸಮುದಾಯಕ್ಕೆ ಶಾಂತಿ, ಸಮೃದ್ಧಿ ಮತ್ತು ಅಧಿಕಾರದ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ಏಕೈಕ ಪರಿಹಾರವೆಂದರೆ ಬಂಡಾಯ ಪೀಡಿತ ಗುಡ್ಡಗಾಡು ಪ್ರದೇಶದಲ್ಲಿ ಬುಡಕಟ್ಟು ನೇತೃತ್ವದ ಪ್ರತ್ಯೇಕ ಆಡಳಿತ ಅಗತ್ಯವಿದೆ ಎಂದು ಗುರುವಾರ ಜಂತರ್ ಮಂತರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು.
ದಾಳಿಗೊಳಗಾದ ಜನರಿಗೆ ಬೆಂಬಲ ಘೋಷಿಸಿದ ಪ್ರತಿಭಟನಾಕಾರರು ಮಣಿಪುರದಲ್ಲಿ ಹಿಂಸೆ ಬೇಗನೆ ನಿಯಂತ್ರಣಕ್ಕೆ ಬರುತ್ತದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು. ಭಾರತದ ಪ್ರಜೆಗಳು ಎಂಬ ನೆಲೆಯಲ್ಲಿ ಬೇರೆಯೇ ಆಡಳಿತ ಕೇಳುವ ಹಕ್ಕು ನಮಗೆ ಇದೆ ಎಂದು ಬಡುಕಟ್ಟು ವಿಭಾಗದ ಮಹಿಳೆಯರು ಪ್ರತಿಪಾದಿಸಿದರು.
ಗುಡ್ಡಗಾಡು ಬುಡಕಟ್ಟು ಪ್ರದೇಶದ ನಿರ್ಗತಿಕರಿಗೆ ಕೇಂದ್ರ ಸರ್ಕಾರ ಎಲ್ಲಾ ಪರಿಹಾರ ಸಾಮಗ್ರಿಗಳನ್ನು ತಲುಪಿಸುವಂತೆ ನೋಡಿಕೊಳ್ಳಬೇಕು. ಬೆಟ್ಟ ಪ್ರದೇಶದ ಜನರಿಗೆ ಅವರಿರುವಲ್ಲಿಂದ ವಸ್ತುಗಳಿರುವ ವಿಮಾನ ನಿಲ್ದಾಣಕ್ಕೆ ನೇರವಾಗಿ ತಲುಪಲು ಸಾಧ್ಯವಿಲ್ಲ ಎಂದು ಮಹಿಳೆಯರು ತಿಳಿಸಿದರು.