ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಅ. 6: ಬಿಜೆಪಿಯು ರಾಹುಲ್ ಗಾಂಧಿಯವರನ್ನು ರಾವಣನಾಗಿಸಿ ಚಿತ್ರಿಸಿ ಕೊಲೆ ಮಾಡಲು ಬಯಸುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಹೊರಿಸಿದೆ. ಬಿಜೆಪಿಯ ವರ್ತನೆ ಖಂಡನೀಯ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದರು.
“ರಾಹುಲ್ ಗಾಂಧಿಯವರನ್ನು ರಾವಣನಿಗೆ ಹೋಲಿಸಿರುವ ಬಿಜೆಪಿಯ ನಾಚಿಕೆಗೆಟ್ಟ ಪೋಸ್ಟರ್ ಬಗ್ಗೆ ಖಂಡಿಸಲು ಶಬ್ದಗಳು ಸಾಕಾಗುವುದಿಲ್ಲ. ಅವರ ನೀಚ ಉದ್ದೇಶ ಸ್ಪಷ್ಟವಾಗುತ್ತಿದೆ. ಅವರು ರಾಹುಲ್ ಗಾಂಧಿಯನ್ನು ಕೊಲ್ಲಬಯಸುತ್ತಿದ್ದಾರೆ. ಕೊಲೆ ಪಾತಕದಲ್ಲಿಯೇ ಅವರು ತನ್ನ ಅಜ್ಜಿ ಮತ್ತು ತಂದೆಯನ್ನು ಕಳಕೊಂಡಿದ್ದರು ಎಂದು ವೇಣುಗೋಪಾಲ್ ಹೇಳಿದರು.
ಮೋದಿ ಸರಕಾರ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ರಾಹುಲ್ ಗಾಂಧಿಯ ಎಸ್ಪಿಜಿ ಸುರಕ್ಷೆಯನ್ನು ಹಿಂಪಡೆದುಕೊಂಡಿತು. ವಸತಿಯಿಂದ ಹೊರಗೆ ಬಂದ ಬಳಿಕ ಅವರು ಕೇಳಿಯೂ ಇನ್ನೊಂದು ಮನೆ ಕೊಟ್ಟಿಲ್ಲ. ಇದೆಲ್ಲ ಬೆರಳು ತೋರಿಸುತ್ತಿರುವುದು ತಮ್ಮ ಕಟು ಟೀಕಾಕಾರ ರಾಹುಲ್ರನ್ನು ಇಲ್ಲದಾಗಿಸುವ ಬಿಜೆಪಿಯ ಯೋಜನಾಬದ್ಧ ಸಂಚನ್ನಾಗಿದೆ ಎಂದು ವೇಣುಗೋಪಾಲ್ ಆರೋಪಿಸಿದರು.
ಇದೋ ಹೊಸ ತಲೆಮಾರಿನ ರಾವಣ. ಆತ ಕೆಡುಕು ಆಗಿದ್ದಾನೆ. ಧರ್ಮದ ರಾಮನ ವಿರುದ್ಧ ನಿಂತಿದ್ದಾನೆ. ಭಾರತವನ್ನು ನಾಶಪಡಿಸುವುದು ಈತನ ಗುರಿಯಾಗಿದೆ ಎಂದು ತಲೆಬರಹದಲ್ಲಿ ರಾಹುಲ್ ಗಾಂಧಿಯನ್ನು ರಾವಣನಿಗೆ ಹೋಲಿಸಿ ಪೋಸ್ಟರ್ ಅನ್ನು ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿತು. ಅತ್ಯಂತ ದೊಡ್ಡ ಸುಳ್ಳ ಎಂದು ಪ್ರಧಾನಿ ಮೋದಿಗೆ ಕಾಂಗ್ರೆಸ್ ಕೂಡ ಪೋಸ್ಟರ್ ಮಾಡಿ ಹಂಚಿತ್ತು.