ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಶಸ್ತ್ರ ಕ್ರಿಯೆಯ ಮಧ್ಯೆ 15 ವರ್ಷದ ಯುವತಿಯ ದೇಹದ ಅವಯವಗಳನ್ನು ಕಿತ್ತು ಅದಕ್ಕೆ ಬದಲಾಗಿ ಶರೀರದಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ತುಂಬಿಸಿದ ಆಘಾತಕಾರೀ ಘಟನೆ ದೆಹಲಿಯಿಂದ ವರದಿಯಾಗಿದೆ. ಯುವತಿ ಮೃತಪಟ್ಟಿದ್ದು ಈ ಬಗ್ಗೆ ಕುಟುಂಬ ತೀವ್ರ ಆಕ್ರೋಶ ಹೊರ ಹಾಕಿದೆ.
ಜನವರಿ 21ರಂದು ಈ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜನವರಿ 24ರಂದು ಈ ಯುವತಿ ಶಸ್ತ್ರಕ್ರಿಯೆ ನಡೆಸಲಾಯಿತು. ಜನವರಿ 26ರಂದು ಈಕೆ ಮೃತಪಟ್ಟಿರುವುದಾಗಿ ವೈದ್ಯರು ಕುಟುಂಬಕ್ಕೆ ತಿಳಿಸಿದ್ದಾರೆ. ಇದೀಗ ಕುಟುಂಬದವರ ಆರೋಪದ ಮೇಲೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪದ ದೃಢೀಕರಣಕ್ಕಾಗಿ ಪೋಸ್ಟ್ ಮಾರ್ಟಂ ವರದಿಯನ್ನು ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಮೃತ ದೇಹವನ್ನು ಕೊಂಡೊಯ್ಯುವಾಗ ಕುಟುಂಬ ಯಾವುದೇ ಆರೋಪ ಹೊರಿಸಿರಲಿಲ್ಲ. ಆ ಬಳಿಕ ಅಂತ್ಯಸಂಸ್ಕಾರದ ವೇಳೆ ಕುಟುಂಬಕ್ಕೆ ಈ ಕುರಿತಂತೆ ಅನುಮಾನ ಬಂದಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.