ಜೈಪುರ: ಪ್ರತಾಪ್ ಘರ್ ಜಿಲ್ಲಾ ಪುರಸಭೆಯ ಅಧಿಕಾರಿಗಳಿಂದ ಹಲ್ಲೆಗೊಳಗಾಗಿ ಸಾಮಾಜಿಕ ಕಾರ್ಯಕರ್ತರಾದ ಜಾಫರ್ ಹುಸೈನ್ ರವರು ಹತ್ಯೆಗೀಡಾದ ಘಟನೆ ಕಳೆದ 2017 ರ ಜೂನ್ 16 ರಂದು ನಡೆದಿತ್ತು. ಆದರೆ ಈ ಘಟನೆಯಲ್ಲಿ ಅಧಿಕಾರಿಗಳ ಯಾವುದೇ ಪಾತ್ರವಿಲ್ಲ ಹಾಗೂ ಜಾಫರ್ ಹುಸೈನ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ರಾಜಸ್ಥಾನ ಪೋಲಿಸರು ಮತ್ತು ರಾಜ್ಯ ಬಿಜೆಪಿ ಸರಕಾರವು ಇದು ಲಿಂಚಿಂಗ್ ಪ್ರಕರಣವಲ್ಲವೆಂದು ಸ್ಪಷ್ಟ ಪಡಿಸಿದೆ.
ಕಳೆದ ವರ್ಷ ಜೂನ್ 16 ರಂದು ಮುಂಜಾನೆ ಸ್ವಚ್ಛ ಭಾರತ್ ನಿಯೋಜಿತ ಅಧಿಕಾರಿಗಳು ಮೆಹ್ತಾಬ್ ಶಾಹ್ ಕುತ್ಚೀ ಬಸ್ತಿಯ ಬಳಿ ಬಯಲು ಶೌಚಾಲಯ ಮಾಡುತ್ತಿದ್ದ ಮಹಿಳೆಯೊಬ್ಬರ ಫೋಟೋವನ್ನು ತೆಗೆಯುವಾಗ ಜಾಫರ್ ಹುಸೈನ್ ತಡೆಯೊಡ್ಡಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹುಸೇನ್ ರವರ ಮೆಲೆ ಹಲ್ಲೆಗೈದಿದ್ದರು.
ಹುಸೈನ್ ರವರ ಮರಣಾನಂತರ ನೀಡಲಾದ ದೂರಿನಲ್ಲಿ ಯಾವುದೇ ಸಿವಿಕ್ ಅಧಿಕಾರಿಗಳ ವಿರುದ್ಧ ದೂರು ನಮೂದಿಸಲಾಗಿಲ್ಲ ಎಂದು ಪ್ರತಾಪ್ ಘರ್ ಪೋಲಿಸ್ ಅಧಿಕಾರಿಗಳು ತಮ್ಮ ಅಂತಿಮ ವರದಿಯಲ್ಲಿ ತಿಳಿಸಿದ್ದಾರೆ.
ಆದರೆ ಹುಸೈನ್ ರವರ ಕುಟುಂಬವು ಮುನ್ಸಿಪಲ್ ಕೌನ್ಸಿಲ್ ಕಮಿಷನರ್ ಅಶೋಕ್ ಜೈನ್ ಮತ್ತು ಉದ್ಯೋಗಿಗಳಾದ ಕಮಲ್ ಹರಿಜನ್, ರಿತೇಶ್ ಹರಿಜನ್ ಹಾಗೂ ಮನೀಷ್ ಹರಿಜನ್ ರವರ ವಿರುದ್ಧ ದೂರು ನೀಡಿದ್ದರು.
” ಪೋಲಿಸರು ಸಲ್ಲಿಸಿದ ಅಂತಿಮ ವರದಿಯಲ್ಲಿ ಹುಸೈನ್ ಹೃದಯಾಘಾತದಿಂದ ಮೃತರಾಗಿರುವುದಾಗಿ ತಿಳಿದು ಬಂದಿದೆ ಎಂದು ಪ್ರತಾಪ್ ಘರ್ ಸ್ಟೇಷನ್ ಅಧಿಕಾರಿ ಹಾಗೂ ಹುಸೈನ್ ರವರ ಪ್ರಕರಣದ ತನಿಖಾಧಿಕಾರಿಯಾಗಿದ್ದ ಬಾಬುಲಾಲ್ ಮುರಾರಿಯಾ ತಿಳಿಸಿದ್ದಾರೆ.
ಕಳೆದ ವರ್ಷ ಬಿಜೆಪಿ ಸರಕಾರವು ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಗೋವು ಮತ್ತು ಬೀಫ್ ಮಾಂಸದ ಹೆಸರಲ್ಲಿ ಲಿಂಚಿಂಗ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಈ ಹಿಂದೆ ಹೈನುಗಾರ ಪೆಹ್ಲೂಖಾನ್ ಲಿಂಚಿಂಗ್ ಪ್ರಕರಣದ ಮುಖ್ಯ ಆರೋಪಿಗಳ ಕುರಿತು ಅವರು( ಪೆಹ್ಲೂಖಾನ್) ಮರಣಾಶೈಯ್ಯೆಯಲ್ಲಿಯೇ ಮಾಹಿತಿ ನೀಡಿದ್ದರು. ಆದರೆ ಇಂದು ಅವರು ಉಲ್ಲೇಖಿಸಿದ ಆರೋಪಿಗಳಿಗೆಲ್ಲ ಪೋಲಿಸರಿಂದ ಕ್ಲೀನ್ ಚೀಟ್ ಸಿಕ್ಕಿದೆ.