ಮುರ್ಡೇಶ್ವರ್: ಹಸುಗಳನ್ನು ಕೊಂಡೊಯ್ಯುತ್ತಿದ್ದ ಲಾರಿಯ ಮೇಲೆ ದಾಳಿ ನಡೆಸಿ ಹಸುಗಳನ್ನು ಕದ್ದೊಯ್ದ ಹಲ್ಲೆಕೋರರು

0
1388

ಗುಜರಾತ್ ನ ಗಿರ್ ನಿಂದ ಕೇರಳದ ತ್ರಿಶೂರ್ ಗೆ 28 ಹಸುಗಳನ್ನು ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರ ಮಾರ್ಗವಾಗಿ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಸಂಘಪರಿವಾರದವರೆಂದು ಶಂಕಿಸಲಾದ ಗುಂಪು ದಾಳಿ ನಡೆಸಿದ್ದು, ಇವರಲ್ಲಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಾರಿಯು ಮುರ್ಡೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ 8 ಗಂಟೆಯ ಹೊತ್ತಿಗೆ ಸಾಗುತ್ತಿರುವಂತೆಯೇ ಈ ಹಲ್ಲೆಕೋರರ ಗುಂಪು ದಿಢೀರಾಗಿ ಕಲ್ಲೆಸೆತದಲ್ಲಿ ತೊಡಗಿ ಲಾರಿಯನ್ನು ನಿಲ್ಲಿಸಿತಲ್ಲದೆ, ಲಾರಿಯಲ್ಲಿದ್ದ ಇಬ್ಬರು ಡ್ರೈವರ್ ಗಳು ಮತ್ತು ಇಬ್ಬರು ಕ್ಲೀನರ್ ಗಳನ್ನೂ ಹೊರಗೆಳೆದು ಹಲ್ಲೆ ನಡೆಸಿತು. ಹೈನೋದ್ಯಮಕ್ಕೆ ಸಂಬಂಧಿಸಿ ಈ ಹಸುಗಳನ್ನು ಕೊಂಡೊಯ್ಯಲಾಗುತ್ತಿದ್ದು ಇದಕ್ಕೆ ಸೂಕ್ತ ಪರವಾನಿಗೆ ಇದೆ ಎಂದು ಲಾರಿಯಲ್ಲಿದ್ದವರು ಪರಿ ಪರಿಯಾಗಿ ವಿನಂತಿಸಿದರೂ ಗುಂಪು ಅದನ್ನು ಲೆಕ್ಕಿಸಲಿಲ್ಲ. ಬಳಿಕ ಗುಂಪು ಲಾರಿಯಲ್ಲಿದ್ದ ಗೋವುಗಳನ್ನು ಒಂದೊಂದಾಗಿ ಎತ್ತಿಕೊಂಡು ಹೋಯಿತು.
ಗಾಯಗೊಂಡ ಡ್ರೈವರ್ ಅವರ ದೂರಿನಂತೆ, ಜನಾರ್ಧನ್, ನಾಗರಾಜ್ ನಾಯಕ್, ವೆಂಕಟೇಶ್, ಕುಮಾರ್, ರಾಮ, ನಾಗರಾಜ್ ನಾಯರ್, ವೆಂಕಟೇಶ್, ಭಾಸ್ಕರ್, ಮಹೇಶ್, ಮಂಜುನಾಥ್, ಅಣ್ಣಪ್ಪ, ಶಬರೀಶ್ ಮತ್ತು ಗಿರೀಶ್ ಎಂಬಿವರನ್ನು ಪೊಲೀಸರು ಬಂಧಿಸಿದ್ದು ಕಳವಾದ 28 ಹಸುಗಳ ಪೈಕಿ 24 ಹಸುಗಳನ್ನು ಮರಳಿ ವಶಪಡಿಸಲು ಯಶಸ್ವಿಯಾಗಿದ್ದಾರಲ್ಲದೆ, ಬಂಧಿತರ ಮೇಲೆ ಡಕಾಯಿತಿ ಮತ್ತು ಹಲ್ಲೆ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.