ಸನ್ಮಾರ್ಗ ವಾರ್ತೆ
ಅರೇಹಳ್ಳಿ: ಜಮಾಅತೆ ಇಸ್ಲಾಮೀ ಹಿಂದ್ ಅರೇಹಳ್ಳಿಯ ವತಿಯಿಂದ ರಮಝಾನ್ ಹಬ್ಬದ ಪ್ರಯುಕ್ತ ಈದ್ ಮಿಲನ್ ಸೌಹಾರ್ದ ಕೂಟವನ್ನು ದಿನಾಂಕ: 05-05-2024 ರಂದು ಭಾನುವಾರ ಸಂಜೆ 7 ಘಂಟೆಗೆ ಹಿರಾ ಸೆಂಟರ್ ಅರೇಹಳ್ಳಿಯಲ್ಲಿ ಏರ್ಪಡಿಸಲಾಯಿತು.
ಈ ಸೌಹಾರ್ದ ಕೂಟದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಜ||ಮುಹಮ್ಮದ್ ಕುಂಞ ರವರು ವಹಿಸಿದ್ದರು.
ಅವರು ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ ” ವಾಟ್ಸಾಪ್ ಯೂನಿವರ್ಸಿಟಿಗಳ ಸಮಾಜದಲ್ಲಿ ಜೀವಿಸುತ್ತಿರುವ ನಾವು ವಿಷಯಗಳನ್ನು ಪರಸ್ಪರ ಚರ್ಚಿಸದೆ ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಲು ಇಂದು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಮೌಲ್ಯವಿಲ್ಲದ ಸಮಾಜದಲ್ಲಿ ಒಳ್ಳೆಯ ಗುಣಗಳನ್ನು ಹುಡುಕುವಂತಹ ಪರಿಸ್ಥಿತಿಗೆ ತಲುಪಿದ್ದೇವೆ. ನಾವು ಪೂಜಿಸುವ ದೇವರನ್ನು ಮೊದಲು ಪ್ರೀತಿಸುವುದನ್ನು ಕಲಿತಾಗ ಮಾತ್ರ ನಾವು ನಮ್ಮ ನೆರೆಹೊರೆಯವರನ್ನು ಪ್ರೀತಿಸಲು ಕಲಿಯುತ್ತೇವೆ ” ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷ್ಮಣ್ ಪೂಜಾರಿ, ಅಧ್ಯಕ್ಷರು, ಲಯನ್ಸ್ ಕ್ಲಬ್, ಅರೇಹಳ್ಳಿ. ಶ್ರೀ ಬಿ.ಯು. ಪೃಥ್ವಿ ಅನುಘಟ್ಟ ಅಧ್ಯಕ್ಷರು, ರೋಟರಿ ಕ್ಲಬ್, ಅರೇಹಳ್ಳಿ. ಶ್ರೀ ಬಿ.ಪಿ. ಬಸವರಾಜು ಅಧ್ಯಕ್ಷರು, ಕಾಫಿ ಬೆಳೆಗಾರರ ಸಂಘ, ಆರೇಹಳ್ಳಿ. ಶ್ರೀ ವಿಜಯಾಚಾರ್ಯರು ಅಧ್ಯಕ್ಷರು, ವಿಶ್ವಕರ್ಮ ಸಂಘ, ಅರೇಹಳ್ಳಿ. ಶ್ರೀ ಯು.ಎಂ. ತೇಜ್ಪಾಲ್, ವೀರಶೈವ ಹೋಬಳಿ ಅಧ್ಯಕ್ಷರು, ಅರೇಹಳ್ಳಿ. ಶ್ರೀ ನೂಮಾನ್ ಆದಿಲ್ ಅಧ್ಯಕ್ಷರು, ರಿಫಾ ಪ್ಲಾಂಟರ್ಸ್, ಅರೇಹಳ್ಳಿ. ಶ್ರೀ ಮಂಜುನಾಥ್ ಅಧ್ಯಕ್ಷರು, ಗಾಣಿಗರ ಸಂಘ, ಅರೇಹಳ್ಳಿ ರವರು ಆಗಮಿಸಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳೂ ಕೂಡ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮುಜೀಬುರ್ರಹ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಬ್ರೇಝ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಯಾಸಿರ್ ಹಬೀಬ್ ಧನ್ಯವಾದವನ್ನರ್ಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಭಿಕರೆಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.