ಸನ್ಮಾರ್ಗ ವಾರ್ತೆ
ನೇಹಾ ಹಿರೇಮಠಳನ್ನು ಹತ್ಯೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಫಯಾಜ್ ನ ತಾಯಿ ಮುಮ್ತಾಜ್ ಹೇಳಿದ್ದಾರೆ.
ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನನ್ನ ಮಗ ಫಯಾಜ್ ಮಾಡಿದ ಕೃತ್ಯಕ್ಕಾಗಿ ನಾನು ರಾಜ್ಯದ ಕ್ಷಮೆಯಾಚನೆ ಮಾಡುತ್ತೇನೆ. ಮೊದಲು ಅವನು ಓದಿನಲ್ಲಿ ಬಹಳ ಜಾಣನಿದ್ದ. ಅವಳೇ ಇವನಿಗೆ ಪ್ರಪೋಸ್ ಮಾಡಿದ್ದಳು. ನನ್ನ ಬಳಿ ಅವನು ಹೇಳಿದಾಗ ನಾನು ಲವ್ ಬೇಡ ಅಂತ ಹೇಳಿದ್ದೆ ಎಂದಿದ್ದಾರೆ.
ಈ ಘಟನೆಯಿಂದ ಅವನಿಗೆ ತಕ್ಕ ಶಿಕ್ಷೆಯಾಗಬೇಕು. ಕೆಎಎಸ್ ಆಫೀಸರ್ ಆಗಬೇಕು ಎಂದು ನಾನು ಕನಸು ಕಂಡಿದ್ದೆ. ಆದರೆ ಈ ರೀತಿಯಾಗಿದ್ದು ನೋಡಿ ಬಹಳ ಸಂಕಟ ಆಗುತ್ತಿದೆ ಎಂದು ದುಃಖ ತೋಡಿಕೊಂಡಿದ್ದಾರೆ.
ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ. ಅವರಿಬ್ಬರೂ ಮದುವೆ ಆಗಬೇಕು ಎಂದಿದ್ದರು. ನೂರಾರು ಮಕ್ಕಳಿಗೆ ನಾನು ಶಿಕ್ಷಣ ಕೊಡ್ತೀನಿ. ಆದರೆ ಇವನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಫಯಾಜ್ ತಾಯಿ ಮಮ್ತಾಜ್ ಆಗ್ರಹಿಸಿದ್ದಾರೆ.
ನನ್ನ ಮಗನಿಗೆ ಅತ್ಯಂತ ಕಠಿನ ಶಿಕ್ಷೆ ಆಗಲಿ. ಆ ಶಿಕ್ಷೆಯನ್ನು ನೋಡಿ ಮುಂದೆ ಯಾರೂ ಇಂಥ ಕ್ರೂರ ಕೆಲಸಕ್ಕೆ ಕೈ ಹಾಕಬಾರದು ಎಂದು ಫಯಾಜ್ನ ತಂದೆ, ಶಿಕ್ಷಕ ಬಾವಾಸಾಹೇಬ ಹೇಳಿದರು.
ಕಾನೂನು ಯಾವ ಶಿಕ್ಷೆ ಕೊಟ್ಟರೂ ನಾನು ಸ್ವಾಗತಿಸುತ್ತೇನೆ. ನೇಹಾ ಕುಟುಂಬದವರು, ರಾಜ್ಯದ ಜನ ಹಾಗೂ ಮುನವಳ್ಳಿ ಜನತೆ ದಯವಿಟ್ಟು ನನ್ನನ್ನು ಕ್ಷಮಿಸಬೇಕು ಎಂದು ಮನವಿ ಮಾಡಿದರು.
ನಾವೆಲ್ಲರೂ ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ. ಹೆಣ್ಣು ಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದು. ಯಾರಿಗಾದರೂ ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಿರುವವರ ಹೋರಾಟಕ್ಕೆ ಜಯವಾಗಲಿ. ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ. ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ ಎಂದವರು ಹೇಳಿದರು.
ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡಬೇಕು. ಯಾವ ಹೆಣ್ಣು ಮಕ್ಕಳ ಮೇಲೆ ಯಾರೂ ಕಣ್ಣು ಹಾಕಬಾರದು. ನೇಹಾ ನನ್ನ ಮಗಳಿದ್ದ ಹಾಗೆ, ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು. ಪ್ರತಿಭಟನೆ ಮಾಡುವವರಿಗೆ ದೊಡ್ಡ ಸಲಾಂ ಎಂದರು.
ನೇಹಾ ಹಾಗೂ ಫಯಾಜ್ ರೀಲ್ಸ್ ವೈರಲ್ ಆಗಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಅವರಿಬ್ಬರ ಮಧ್ಯೆ ಪ್ರೀತಿ ಇತ್ತು. ಈ ನಿಮ್ಮ ಪ್ರೀತಿಗೆ “ಲವ್ ಜಿಹಾದ್’ ಬಣ್ಣ ಕಟ್ಟಿ ಟಾರ್ಗೆಟ್ ಮಾಡುತ್ತಾರೆ ಎಂದು ಮಗನಿಗೆ ಬುದ್ಧಿ ಹೇಳಿದ್ದೆ ಎಂದವರು ಹೇಳಿದರು.