ಹೊಸದಿಲ್ಲಿ,ಮಾ.31: ವಯನಾಡ್ ಲೋಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಸೋಲಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇವೆ ಎಂದು ಸಿಪಿಎಂ ಪೊಲಿಟ್ಬ್ಯೂರೊ ಸದಸ್ಯ ಪ್ರಕಾಶ್ ಕಾರಾಟ್ ಹೇಳಿದರು. ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುವುದರಿಂದ ಎಡಪಕ್ಷಗಳನ್ನು ಸೋಲಿಸುವುದಕ್ಕೆ ಕಾಂಗ್ರೆಸ್ ಪ್ರಥಮ ಆದ್ಯತೆ ನೀಡಿದೆ ಎನ್ನುವುದು ಮನದಟ್ಟಾಗಿದೆ ಎಂದು ಕಾರಾಟ್ ಹೇಳಿದರು.
ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಎದುರಿಸುವ ಕಾಂಗ್ರೆಸ್ ನೀತಿಗೆ ವಿರುದ್ಧವಾಗಿ ಈಗ ರಾಹುಲ್ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸುತ್ತಿದ್ದಾರೆ ಎಂದು ಕಾರಾಟ್ ಆರೋಪಿಸಿದರು.
ತಮಿಳ್ನಾಡು, ಕರ್ನಾಟಕಗಳೊಂದಿಗೆ ಗಡಿ ಹಂಚಿಕೊಂಡಿರುವ ವಯನಾಡ್ ಕ್ಷೇತ್ರದಿಂದ ರಾಹುಲ್ ಸ್ಪರ್ಧಿಸುವ ಮೂಲಕ ದಕ್ಷಿಣಭಾರತದಲ್ಲಿ ಪ್ರಭಾವ ಬೀರಲು ಸಾಧ್ಯ ಎಂಬುದು ಕಾಂಗ್ರೆಸ್ಸಿನ ಸದ್ಯದ ಲೆಕ್ಕಾಚಾರವಾಗಿದೆ.