ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ ಆದರೆ ಉದ್ಯೋಗವಿಲ್ಲ. ನಿರುದ್ಯೋಗ ಒಂದು ದೊಡ್ಡ ಸಮಸ್ಯೆಯಾಗಿದೆ; ಡಿವೈಎಫ್‌ಐ ಸಮ್ಮೇಳನದಲ್ಲಿ ಜಸ್ಟೀಸ್ ಎಚ್. ಎನ್. ನಾಗಮೋಹನದಾಸ್

0
404

ಸನ್ಮಾರ್ಗ ವಾರ್ತೆ

ಮಂಗಳೂರು: ನಿರುದ್ಯೋಗ ಯುವ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಐವತ್ತು ವರ್ಷಗಳಲ್ಲಿ ದೇಶ ಕಾಣದ ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ ಆದರೆ ಉದ್ಯೋಗವಿಲ್ಲ. ನಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗವು ಸಿಗುತ್ತಿಲ್ಲ. ಪದವಿ ಇದ್ದರೂ ಏನು ಪ್ರಯೋಜನವಿಲ್ಲದಂತಾಗಿದೆ. ಎಲ್ಲ ವಲಯದಲ್ಲಿ ಅರ್ಹ ಅಭ್ಯರ್ಥಿಗಳಿಲ್ಲ. ಅಸಂಪೂರ್ಣೋದ್ಯೋಗ ಕೂಡಾ ಒಂದು ಸಮಸ್ಯೆ ಆಗಿದೆ ಎಂದು ಜಸ್ಟೀಸ್ ಎಚ್. ಎನ್. ನಾಗಮೋಹನದಾಸ್ ಹೇಳಿದರು.

ನಗರದ ಕಲ್ಲಾಪಿನಲ್ಲಿರುವ ಯುನಿಟಿ ಸಭಾಂಗಣದಲ್ಲಿ ಫೆಬ್ರವರಿ 25ರಂದು ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ನ 12ನೇ ರಾಜ್ಯ ಸಮ್ಮೇಳನ ನಡೆದಿದ್ದು ಈ ಸಮಾರಂಭವನ್ಮು ಉದ್ಘಾಟಿಸಿ ಜಸ್ಟೀಸ್ ಎಚ್. ಎನ್. ನಾಗಮೋಹನದಾಸ್ ಮಾತಾನಾಡಿದರು.

ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಯುವ ಜನರಿದ್ದಾರೆ. ವಿಮೋಚನಾ ಹೋರಾಟದಿಂದ ಹಿಡಿದು ಇಲ್ಲಿಯವರಿಗೆ ಭಾರತಕ್ಕಾಗಿ ಯುವಕರ ಕೊಡುಗೆ ಬಹಳ ಮಹತ್ವದ್ದಾಗಿದೆ. ಅಬ್ಬಕ್ಕ ರಾಣಿಯಂತಹ ಕಿಚ್ಚಿನ ನಾಯಕಿಯ ಜಾಗದಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ. ಯುವಕರೆಂದರೆ ಬದಲಾವಣೆ, ಪ್ರಗತಿ, ಅನ್ಯಾಯ, ಶೋಷಣೆ, ದಬ್ಬಾಳಿಕೆ ವಿರುದ್ಧ ಹೋರಾಡುವ ಶಕ್ತಿಯಾಗಿದೆ. ಈ ಶಕ್ತಿ ಬಲಗೊಳ್ಳಲಿ ಎಂಬ ಆಶಯದೊಂದಿಗೆ ನಾನು ಸಮ್ಮೇಳನ ಉದ್ಘಾಟಿಸುತ್ತಿದ್ದೇನೆ ಎಂದರು.

ಎಲ್ಲಾ ಮಕ್ಕಳು ಒಂದೇ ಎನ್ನುತ್ತೇವೆ. ಆದರೆ ಶಿಕ್ಷಣದಲ್ಲಿ ಯಾಕೆ ತಾರತಮ್ಯ?. ಇದರಿಂದಾಗಿಯೇ ಮಕ್ಕಳ ನಡುವೆ ತಾರತಮ್ಯ ಸಷ್ಟಿಸಲಾಗುತ್ತಿಲ್ಲವೇ?. ಸಮಾನ ಶಿಕ್ಷಣದ ನೀತಿ ಜಾರಿಯಾಗಬೇಕಿದೆ. ಗುಣಾತ್ಮಕ ಶಿಕ್ಷಣ ನೀಡುವ ವ್ಯವಸ್ಥೆ ಜಾರಿ ಬರಬೇಕಾಗಿದೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚೆಯಾಗಬೇಕು ಎಂದು ಅಭಿಪ್ರಾಯಿಸಿದರು.

ಉದ್ಯೋಗ ಸೃಷ್ಟಿ ಕಡಿಮೆಯಾದಂತೆ ಅಪರಾಧೀಕರಣ, ಕೋಮುವಾದ, ಭಯೋತ್ಪಾದನೆ, ವೇಶ್ಯಾವಾಟಿಕೆ ಮೊದಲಾದವು ಹೆಚ್ಚಾಗುತ್ತದೆ. ನಿರುದ್ಯೋಗ ಸಮಸ್ಯೆಗೂ, ಕೋಮುವಾದ, ಅಪರಾಧಕ್ಕೂ ಲಿಂಕ್ ಇದೆ ಎಂದು ಸರ್ಕಾರ ತಿಳಿದುಕೊಳ್ಳಬೇಕು ಎಂದರು.

ಎರಡನೆಯ ಮಹಾ ಯುದ್ದದಲ್ಲಿ ಅಪಾರ ಸಂಖ್ಯೆಯ ಸಾವುನೋವುಗಳಾದವು. ಕಾರ್ಖಾನೆಗಳು, ಬಂದರು, ರಸ್ತೆಗಳು ನಾಶವಾದವು. ಹಳ್ಳಿಗಳಿಗೆ ಬೆಂಕಿ ಹಚ್ಚಿದರು. ಈ ಸಾವು ನೋವುಗಳು ಜನರಿಗೆ ಸಂಕಷ್ಟ ತಂದೊಡ್ಡಿದವು. ಆಗ ಯುದ್ದಗಳನ್ನು ನಿಲ್ಲಿಸಲು ವಿಶ್ವಸಂಸ್ಥೆ ಆರಂಭಿಸಲಾಯಿತು. ಆದರೂ ಯುದ್ದ ನಿಂತಿಲ್ಲ. ವರ್ಷಕ್ಕೆ ಸರಾಸರಿ 1 ಲಕ್ಷ ಜನ ಯುದ್ದದಿಂದ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಬಹುದೊಡ್ಡ ಪಾಲು ಯುವಕರು ಬಲಿಪಶು ಆಗುತ್ತಿದ್ದಾರೆ ಎಂದು ತಿಳಿಸಿದರು.

ಯುದ್ದಕ್ಕಾಗಿ ಖರ್ಚು ಮಾಡುತ್ತಾ ಹೋದರೆ, ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯದಂತಹ ಜನಕಲ್ಯಾಣಗಳು ಹಿನ್ನಡೆ ಅನುಭವಿಸುತ್ತವೆ. ಆಗ ದೇಶ ಹಿನ್ನಡೆಯತ್ತ ಮುಖ ಮಾಡುತ್ತದೆ. ಹಾಗಾಗಿ ಯುದ್ಧವನ್ನು ವಿರೋಧಿಸಬೇಕಿದೆ.

ಸಂವಿಧಾನದ ಮೂಲಕ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಲಾಗಿದೆ. ದಲಿತರು, ಮಹಿಳೆಯರು ಈ ದೇಶದ ಅಭಿವೃದ್ದಿಯಲ್ಲಿ ದುಡಿಯಲು ಸಾಧ್ಯವಾಗಿದೆ.

ಭಾರತೀಯರಿಗೆ ಮಹಾನ್ ಗ್ರಂಥ ಸಂವಿಧಾನ. ಇದನ್ನು ಓದಬೇಕು, ಅರ್ಥೈಸಿಕೊಳ್ಳಬೇಕು, ಅದರಂತೆ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಇಷ್ಟೆಲ್ಲ ಸಾಧನೆ ಮಾಡಿದ್ದರು ಭಾರತ ಇನ್ನೂ ಸುಧಾರಣೆ ಕಂಡಿಲ್ಲ, ಬಡತನ, ನಿರುದ್ಯೋಗ, ಕೋಮುವಾದ ಬಲಿಯೊಳಗೆ ಭಾರತ ಸಿಕ್ಕು ನರಳುತ್ತಿದೆ. ಇದರ ವಿರುದ್ಧ ಯುವಕರು ಹೋರಾಡಬೇಕಿದೆ. ಶಿಕ್ಷಣದಲ್ಲಿ ತಾರತಮ್ಯ ಹೆಚ್ಚಾಗುತ್ತಿದೆ. ಶ್ರೀಮಂತರಿಗೆ ಒಂದು, ಬಡವರಿಗೆ ಇನ್ನೊಂದು ಎಂಬ ಆಯ್ಕೆಯ ಮೂಲಕ ಮಕ್ಕಳಲ್ಲಿ ಅಸಮಾನತೆ, ಅಸೂಯೆ ಸೃಷ್ಟಿಯಗುತ್ತಿದೆ. ಈ ತಾರತಮ್ಯ ನಿಲ್ಲಬೇಕಾದರೆ, ಸಮಾನ ಗುಣಮಟ್ಟದ ಶಿಕ್ಷಣ ಸಿಗಬೇಕು, ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗಬೇಕು ಎಂದರು.

ನನ್ನೊಳಗೆ ಬದಲಾವಣೆ, ಗಟ್ಟಿತನ, ಧೈರ್ಯ, ಬದ್ದತೆ ತಂದು ಕೊಟ್ಟಿದ್ದು ಡಿವೈಎಫ್ಐ, ನಾಲ್ಕು ದಶಕಗಳ ಹಿಂದೆ ನಾನು ರಾಜ್ಯವೆಲ್ಲ ಸುತ್ತಾಡಿ ಯುವಜನರನ್ನು ಸಂಘಟಿಸಿದ್ದೆ ಎಂದು ಹಿಂದಿನ ಹೋರಾಟವನ್ನು ಮೆಲುಕು ಹಾಕಿದರು.

ಈ ಸಂದರ್ಭದಲ್ಲೇ ಸ್ವಾಗತ ಭಾಷಣ ಮಾಡಿದ ವಿಶ್ರಾಂತ ಜಿಲ್ಲಾಧಿಕಾರಿ (ಐಎಎಸ್), ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಆದ ಎ.ಬಿ. ಇಬ್ರಾಹಿಂ, “ಜನರು ಭ್ರಮಾಲೋಕದಲ್ಲಿದ್ದು ಮತ ಚಲಾಯಿಸುತ್ತಿದ್ದಾರೆ. ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಆದರೆ ಪ್ರಸಕ್ತ ಸ್ಥಿತಿಯಲ್ಲಿ ನಾವು ಬುದ್ಧಿವಂತರು ಮತ್ತು ಅಕ್ಷರಸ್ಥರ ನಡುವೆ ಬೇರೆಯೇ ವ್ಯಾಖ್ಯಾನವನ್ನು ನೀಡಬೇಕಾಗಿದೆ,” ಎಂದು ಹೇಳಿದರು.

“ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ನೆಲವಿದು, ರಾಣಿ ಅಬ್ಬಕ್ಕರ ಮಾತೃ ಪ್ರಧಾನ ಸಮಾಜವಿದು. ಇದು ನಮಗೆ ಮಾದರಿಯಾಗಬೇಕಾದ ನೆಲ. ಇದು ಶೇಕಡ 100 ರಷ್ಟು ಅಕ್ಷರಸ್ಥರು ಇರುವ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಮ್ಮ ಜಿಲ್ಲೆ ಜಗತ್ತಿಗೆ ಮಾದರಿಯಾಗಬೇಕಾದ ಜಿಲ್ಲೆ. ಆದರೆ ಕಳೆದ ಮೂರು ದಶಕಗಳಲ್ಲಿ ನಮ್ಮ ಜಿಲ್ಲೆ, ನಗರ ಕುಖ್ಯಾತಿ ಪಡೆಯುತ್ತಾ ಬಂದಿರುವ ನೆಲವಾಗಿದೆ. ಹೊರ ಜಿಲ್ಲೆಯವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಪ್ರಶ್ನಿಸುವಂತಾಗಿದೆ ಎಂದರು.

ಸಂವಿಧಾನ ಉಳಿಸಬೇಕೆಂದು ಪೇಪರ್‌ನ ಮೊದಲ ಪುಟದಲ್ಲಿ ಜಾಹೀರಾತು ನೀಡಿದರೆ ಸಾಕಾಗದು. ಸಂವಿಧಾನ ಉಳಿಸಲು ಚಳುವಳಿ ಕಟ್ಟಬೇಕು, ಹೋರಾಡಬೇಕು ಎಂದು ತಿಳಿಸಿದರು. ಮಂಗಳೂರನ್ನು ಕೋಮುವಾದಿಗಳ ಪ್ರಯೋಗಶಾಲೆ ಎಂದು ಕರೆಯಲಾಗುತ್ತದೆ. ಆದರೆ ಅದು ತಪ್ಪು. ಪ್ರಯೋಗ ಮುಗಿದಿದೆ, ಯಶಸ್ವಿಯಾಗಿದೆ. ಈಗ ಮಂಡ್ಯ, ಇನ್ಯಾವುದೋ ಜಿಲ್ಲೆಗೆ ವಿಸ್ತರಿಸಲಾಗುತ್ತಿದೆ ಎಂದು ಅಭಿಪ್ರಾಯಿಸಿದರು.

ಜಿಲ್ಲೆಯಲ್ಲಿ ಮಹಿಳೆ, ಅಲ್ಪಸಂಖ್ಯಾತರು, ದಲಿತರ ಮೇಲೆ ದಾಳಿಯಾಗುತ್ತಿದೆ. ಇದು ಪ್ರತಿಗಾಮಿ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಸಂಘರ್ಷ. ಇದನ್ನು ಜನರು ಅರ್ಥ ಮಾಡಿಕೊಂಡರೆ, ನಮ್ಮ ಸಂಘರ್ಷ ಜನರನ್ನು ತಲುಪಿದರೆ ಯಶಸ್ಸು. ಪ್ರಸಕ್ತ ನಮ್ಮ ನೆಲದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಬಡತನಕ್ಕಿಂತ ದೊಡ್ಡ ಸಮಸ್ಯೆ ನಿರುದ್ಯೋಗವಾಗಿದೆ. ಇದರ ಬಗ್ಗೆ ಚರ್ಚೆ ನಡೆಯುವುದು ಅನಿವಾರ್ಯ. ಎಲ್ಲಾ ಸಮುದಾಯ ಇರುವ ನೆಲದಲ್ಲಿ ಕೋಮು ಸೌಹಾರ್ದತೆ ಯಾಕೆ ನಶಿಸಿ ಹೋಗುತ್ತಿದೆ ಎಂಬ ಚರ್ಚೆಯಾಗಬೇಕಿದೆ ಎಂದು ಹೇಳಿದರು.

ಡಿವೈಎಫ್‌ಐ ಅಖಿಲ ಭಾರತ ಸಮಿತಿ ಸದಸ್ಯರಾದ ಜ್ಯಾಕ್ ಸಿ ಥಾಮಸ್ ಮಾತನಾಡಿ, “ಕಾನೂನು ಬಾಹಿರ ಆಗಿರುವುದನ್ನು ಕಾನೂನಿಗ ಚೌಕಟ್ಟಿನ ಒಳಗೆ ತಂದ ಏಕೈಕ ದೇಶ ಭಾರತ. ಅದುವೇ ಚುನಾವಣಾ ಬಾಡ್ ಆಗಿದೆ. ಇತ್ತೀಚೆಗೆ ಚುನಾವಣಾ ಬಾಂಡ್ ಅನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆ. ಚುನಾವಣಾ ಬಾಂಡ್ ಮೂಲಕ ಯಾವುದೇ ಪಕ್ಷ ಲೆಕ್ಕವಿಲ್ಲದೆ ಕೋಟ್ಯಾಂತರ ರೂಪಾಯಿ ಪಡೆಯಬಹುದು. ಇದರ ಖಾತೆಯನ್ನು ಎಸ್‌ಬಿಐನಲ್ಲಿ ತೆರೆಯಲಾಗುತ್ತದೆ. ಆದರೆ ಈ ದೇಶದಲ್ಲಿ ಇದರ ಖಾತೆ ಇಲ್ಲದ ಏಕೈಕ ಪಕ್ಷ ಎಡ ಪಕ್ಷ,” ಎಂದು ತಿಳಿಸಿದರು.

ಅಧ್ಯಕ್ಷ ಭಾಷಣವನ್ನು ಮಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ನೀವು ಪಾರ್ಲಿಮೆಂಟ್‌ನಲ್ಲಿ ಇಲ್ಲ, ನೀವು ಎಲ್ಲಿದ್ದೀರಿ ಎಂದು ನಮ್ಮನ್ನು ಕೇಳುತ್ತೀರಿ. ನೀವು ಬಿಲ್ಡರ್‌ಗಳ, ದನಿಗಳ ಜೊತೆ ಇರಬಹುದು. ಆದರೆ ನಾವು ಪ್ರಸ್ತುತ ಮುಚ್ಚಲಾದ ಸುರತ್ಕಲ್ ಟೋಲ್‌ ಗೇಟ್‌ನಲ್ಲಿ, ಶವ ಬಂಧನದಲ್ಲಿಟ್ಟು ಕುಟುಂಬದವರನ್ನು ಸತಾಯಿಸುವ ಖಾಸಗಿ ಆಸ್ಪತ್ರೆಗಳ ಹೊರಗೆ ಹೋರಾಟದಲ್ಲಿ, ಕುಡಿಯುವ ನೀರಿಗಾಗಿ ನಡೆದ ಚಳುವಳಿಯಲ್ಲಿ, ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಹೋರಾಟದಲ್ಲಿ ನಾವಿದ್ದೇವೆ. ನಾವು ಜನರ ಹೃದಯದಲ್ಲಿದ್ದೇವೆ. ನಾವು ಎಂದಿಗೂ ತಲೆ ತಗ್ಗಿಸುವವರಲ್ಲ. ನಾವು ಎತ್ತಿದ ತಲೆಯನ್ನು ನೀವು ಕತ್ತರಿಸಿದರೂ ಸರಿ, ನಾವೆಂದಿಗೂ ತಲೆ ತಗ್ಗಿಸಲ್ಲ,” ಎಂದು ಹೇಳಿದರು.

ನಾವು ಆದರ್ಶ ವ್ಯಕ್ತಿಗಳ ಚಿತ್ರವನ್ನು ಪೋಸ್ಟರ್‌ನಲ್ಲಿ ಬಳಸಿದ್ದಕ್ಕೆ ವಿರೋಧ ಮಾಡಲಾಯಿತು. ಟಿಪ್ಪು ಸುಲ್ತಾನ್ ಚಿತ್ರ ಬಳಸಬಾರದು ಎಂದು ಪೊಲೀಸ್ ನೊಟೀಸ್ ನೀಡಲಾಯಿತು. ಆದರೆ ನಾವು ಅದಕ್ಕೆ ಪ್ರತಿಯಾಗಿ ಹೇಳಿಕೆಯನ್ನು ನೀಡಿದ್ದೇವೆ. ನೀವು ನಂಬುವ ಸಿದ್ಧಾಂತವನ್ನೇ ನಾವು ನಂಬಬೇಕು, ನೀವು ಇಷ್ಟಪಡುವವರನ್ನೇ ನಾವು ಇಷ್ಟಪಡಬೇಕು ಎಂಬುವುದು ಫ್ಯಾಸಿಸಂ ಎಂದರು.

ಅಪಪ್ರಚಾರದಲ್ಲಿ ಬಲಪಂಥೀಯರು ಕೆಲಸ ಮಾಡುತ್ತಲೆ ಇದ್ದಾರೆ. ಕೋಟಿ ಚೆನ್ನಯ್ಯರ ಫೊಟೊ ಬಳಸಿದ್ದಕ್ಕೆ ರಾಮ ಪ್ರತಿಷ್ಟಾಪನೆ ನಂತರ ಎಡಪಂತಿಯರು ನಮ್ಮ ರಾಮಲಕ್ಷಮಣರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಂಬಿಸಿ ನಮ್ಮ ವಿರುದ್ಧ ಅಪಪ್ರಚಾರ ಆರಂಭಿಸಿದರು. ನಾರಾಯಣ ಗುರು, ಕೋಟಿ ಚೆನ್ನಯ್ಯರ ಚಿತ್ರಗಳನ್ನು ಪೋಸ್ಟರ್‌ನಲ್ಲಿ ಬಳಸಿ ನಿಮ್ಮ ಧಾರ್ಮಿಕ ಭಾವನೆಗೆ ನಾವು ಧಕ್ಕೆ ತಂದಿದ್ದೇವೆ ಎಂದು ನೀವು ಹೇಳುತ್ತೀರಿ. ನಿಜವಾಗಿ ಈ ನೆಲದಲ್ಲಿ ಕೋಟಿ ಚೆನ್ನಯ್ಯರ ವಾರಿಸುದಾರರು, ಅವರ ಆದರ್ಶವನ್ನು ಪಾಲಿಸುವವರು ಇದ್ದರೆ ಅವರು ಡಿವೈಎಫ್‌ಐ ಸಂಘಟನೆಯವರು ಮಾತ್ರ ಎಂದು ತಿಳಿಸಿದರು.

ರಮೇಶ್ ಕುಮಾರ್ ಸ್ಮರಣೆಯಲ್ಲಿ ಹೋರಾಟ ಚಳುವಳಿಗಳ ನೆನಪಿನ ಪೋಸ್ಟರ್ ಗ್ಯಾಲರಿಯನ್ನು ವಿಶ್ರಾಂತ ಜಿಲ್ಲಾಧಿಕಾರಿ (ಐಎಎಸ್), ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಆದ ಎ.ಬಿ. ಇಬ್ರಾಹಿಂ ಅವರು ಉದ್ಘಾಟನೆ ಮಾಡಿದರು. ವೇದಿಕೆಯಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಡಿವೈಎಫ್‌ಐ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾಟ್, ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರು ರೇಣುಕಾ ಕಹಾರ್, ಆಶಾ ಬೋಳೂರು, ಎಸ್‌ಎಫ್‌ಐನ ರಾಜ್ಯ ಕಾರ್ಯದರ್ಶಿ ಭೀಮನಗೌಡ, ಸ್ವಾಗತ ಸಮಿತಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಬಿಕೆ ಇಂತಿಯಾಜ್, ವಕೀಲ ರಾಮಚಂದ್ರ ಬಬ್ಬುಕಟ್ಟೆ, ಡಾ. ಜೀವನ್ ರಾಜ್ ಕುತ್ತಾರ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿದರು. ಡಿವೈಎಫ್‌ಐ ಜಿಲ್ಲಾಧ್ಯಕ್ಷರು ಬಿಕೆ ಇಂತಿಯಾಜ್ ಧನ್ಯವಾದ ತಿಳಿಸಿದರು. ಡಿವೈಎಫ್‌ಐ ಮುಖಂಡರಾದ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.