ಕಾಸರಗೋಡು: ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಭೀಕರ ಕೊಲೆ! ರಾಜ್ಯದಾದ್ಯಂತ ಹರತಾಳ

0
1452

ಕಾಸರಗೋಡು: ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರು ಕಾರ್ಯಕರ್ತರನ್ನು ಕಾಸರಗೋಡಿನ ಪೆರಿಯ ಸಮೀಪದ ಕಲ್ಲಾಟ್ ಎಂಬಲ್ಲಿ ಜೀಪಿನಲ್ಲಿ ಬಂದ ತಂಡವೊಂದು ನಡುರಸ್ತೆಯಲ್ಲಿಯೇ ಭೀಕರವಾಗಿ ಕಡಿದು ಕೊಂದು ಹಾಕಿದ ಘಟನೆಯು ನಡೆದಿದ್ದು, ಘಟನೆಯನ್ನು ವಿರೋಧಿಸಿ ಕೇರಳಾದ್ಯಂತ ಯುವ ಕಾಂಗ್ರೆಸ್ ಇಂದು ಹರತಾಳ ಘೋಷಿಸಿದೆ.

ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ಕಲ್ಲಾಟ್ ಕೃಪೇಶ್(19) ಮತ್ತು ಆತನ ಗೆಳೆಯ ಶರತ್ ಎಂಬಿಬ್ಬರನ್ನು ಜೀಪಿನಲ್ಲಿ ಬೆನ್ನಟ್ಟಿ ಬಂದು ಹತ್ಯೆ ಮಾಡಲಾಗಿದೆ. ಕೃಪೇಶ್ ಸ್ಥಳದಲ್ಲೇ ಮೃತಪಟ್ಟರೆ, ಶರತ್ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಸಿಪಿಎಂ ಕಾರ್ಯಕರ್ತರು ಹಲ್ಲೆಯೆಸಗುತ್ತಿದ್ದಾರೆಂದು ಬಸ್ ತಡೆದು ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಒಂದು ತಿಂಗಳ ಹಿಂದೆ ನಡೆದ ಈ ಘಟನೆಯ ದ್ವೇಷವೇ ಯುವ ಕಾರ್ಯಕರ್ತರಿಬ್ಬರ ಹತ್ಯೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಾಯಕರು ಸಿಪಿಎಂ ಕಾರ್ಯಕರ್ತರು ಯುವಕರ ಕೊಲೆ ಎಸಗಿದ್ದಾರೆ ಎಂದು ಈಗಾಗಲೇ ಆರೋಪಿಸಿದ್ದಾರೆ. ಆದರೆ ಸಿಪಿಎಂಗೂ ಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಮಾಸ್ಟರ್ ಹೇಳಿದ್ದಾರೆ. ಪೆರಿಯಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪೊಲೀಸರು ಬಿಗು ಬಂದೋಬಸ್ತು ಏರ್ಪಡಿಸಿದ್ದಾರೆ.